Site icon Vistara News

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Baby Death


ತಾಯಿ-ಮಗುವಿನ ಬಾಂಧ್ಯವ್ಯ ತುಂಬಾ ಅನ್ಯೋನ್ಯವಾದದ್ದು. ಮಗು ಎಷ್ಟೇ ಅತ್ತರೂ, ಹಠ ಹಿಡಿದರೂ ಕೂಡ ತಾಯಿ ಬೇಸರ ಮಾಡಿಕೊಳ್ಳದೆ ಅದನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾಳೆ. ಒಂದು ವೇಳೆ ಸಿಟ್ಟಲ್ಲಿ ಹೊಡೆದರೂ ಸ್ವಲ್ಪ ಹೊತ್ತಿನಲ್ಲೇ ಮಗುವನ್ನು ಮುದ್ದಾಡುತ್ತಾಳೆ. ಹಾಗೇ ಬೇರೆ ಯಾರಾದರೂ ತನ್ನ ಮಗುವಿಗೆ ಹಾನಿ ಮಾಡಲು ಬಂದರೆ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗುವನ್ನು ಕಾಪಾಡುತ್ತಾಳೆ. ಆದರೆ ಮಧ್ಯಪ್ರದೇಶದಲ್ಲಿ ಅಳುವುದನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಒಂದು ವರ್ಷದ ಮಗಳನ್ನು ಆಕೆಯ ತಾಯಿಯ ಎದುರೇ ಪ್ರಿಯಕರನ ಅಮಾನುಷವಾಗಿ ಕೊಲೆ (Baby Death) ಮಾಡಿದ್ದಾನೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಈ ಮಹಿಳೆ ಪ್ರಿಯಕರನ ಜತೆ ಮಲಗಿದ್ದಳು. ಮಧ್ಯರಾತ್ರಿಯಲ್ಲಿ ಮಗು ಅಳಲು ಶುರು ಮಾಡಿದೆ. ಅಳುವುದನ್ನು ನಿಲ್ಲಿಸಲಿಲ್ಲ, ತನ್ನ ಪ್ರಣಯಕ್ಕೆ ತೊಂದರೆ ಆಯಿತು ಎಂದು ಸಿಟ್ಟುಗೊಂಡ ಪ್ರಿಯಕರ ಮೊದಲು ಮಗುವಿನ ಕಾಲುಗಳನ್ನು ಹಿಡಿದು ನೆಲಕ್ಕೆ ಬಡಿದಿದ್ದಾನೆ. ನಂತರ ಉಸಿರಾಟವನ್ನು ನಿಲ್ಲಿಸಲು ಬಾಯಿಯನ್ನು ಮುಚ್ಚಿದ್ದಾನೆ. ಇದರಿಂದ ಮಗು ಸಾವನಪ್ಪಿದೆ. ತಾಯಿ ತನ್ನ ಮಗಳ ನಿರ್ಜೀವ ದೇಹವನ್ನು ಹಿಡಿದುಕೊಂಡು ಇಡೀ ರಾತ್ರಿ ಅಳುತ್ತಾ ಕಳೆದರೆ, ಪ್ರೇಮಿ ಹತ್ತಿರದಲ್ಲೇ ನಿದ್ದೆ ಮಾಡುತ್ತಿದ್ದ! ಮರುದಿನ ಬೆಳಗ್ಗೆ ಅವನು ಸ್ಥಳದಿಂದ ಓಡಿಹೋಗಿದ್ದಾನೆ. ನಂತರ ತಾಯಿ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ.

ಮಾಹಿತಿಯ ಪ್ರಕಾರ, ಮೃತ ಮಗುವನ್ನು ಛಾಯಾ ಎಂದು ಗುರುತಿಸಲಾಗಿದೆ. ಆರೋಪಿ ಪ್ರೇಮಿ ಭೈಯಾಲಾಲ್ ಆದಿವಾಸಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲಿ, ಅವನು ಜಯಂತಿ ಆದಿವಾಸಿ (35) ಅವಳನ್ನು ಭೇಟಿಯಾಗಿದ್ದಾನೆ. ಜಯಂತಿ ತನ್ನ ಪತಿ ಪರಮಾನಂದ್ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ಕೆಲಸ ಮಾಡುತ್ತಿದ್ದಳು. ಸುಮಾರು 20 ದಿನಗಳ ಹಿಂದೆ ಜಯಂತಿ ತನ್ನ ಪತಿ ಮತ್ತು ಇಬ್ಬರು ಹಿರಿಯ ಮಕ್ಕಳಾದ ದಾಮಿನಿ (9) ಮತ್ತು ದೇವ್ (8) ಅವರನ್ನು ಬಿಟ್ಟು ತನ್ನ ಒಂದು ವರ್ಷದ ಮಗಳು ಛಾಯಾಳನ್ನು ಕರೆದುಕೊಂಡು ಪ್ರಿಯಕರ ಭೈಯಾಲಾಲ್ ಅವನೊಂದಿಗೆ ಶಿವಪುರಿಯಲ್ಲಿ ವಾಸವಾಗಿದ್ದಳು.

ಮಂಗಳವಾರ ರಾತ್ರಿ ಅವರು ಊಟ ಮಾಡಿ ಮಲಗಿದ ನಂತರ ಮಧ್ಯರಾತ್ರಿಯ ಸುಮಾರಿಗೆ, ಛಾಯಾ ಅಳಲು ಪ್ರಾರಂಭಿಸಿದಳು, ಭೈಯಾಲಾಲ್‌ನನ್ನು ಎಬ್ಬಿಸಿದಳು. ಇದರಿಂದ ಕೋಪಗೊಂಡ ಅವನು ಮಗುವನ್ನು ಹೊಡೆದನು, ಇದರಿಂದ ಮಗು ಜೋರಾಗಿ ಅತ್ತಿದೆ. ನಂತರ ಅವನು ಛಾಯಾಳ ಕಾಲುಗಳನ್ನು ಹಿಡಿದು ನೆಲಕ್ಕೆ ಹೊಡೆದ. ಇದರಿಂದಾಗಿ ಅವಳ ಬಾಯಿ ಮತ್ತು ತಲೆಯಿಂದ ತೀವ್ರ ರಕ್ತಸ್ರಾವವಾಯಿತು. ನಂತರ ಅವನು ಅವಳ ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದನು. ಮರುದಿನ ಬೆಳಗ್ಗೆ ಭೈಯಾಲಾಲ್ ಗುಡಿಸಲಿನಿಂದ ಹೊರಟು ಹೋದಾಗ ಜಯಂತಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ:  ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

ಭೈಯಾಲಾಲ್ ಆದಿವಾಸಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಮೋರ್ ಕಲಾನ್ ಪೊಲೀಸ್ ಠಾಣೆಯ ಉಸ್ತುವಾರಿ ನೀತು ಸಿಂಗ್ ಹೇಳಿದ್ದಾರೆ. ಜಯಂತಿಯ ಅತ್ತೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪತಿ ಪರಮಾನಂದ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Exit mobile version