Site icon Vistara News

Murder Case: ಪತಿ ಜೊತೆ ಸೇರಿ ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿದ ಯುವತಿ! ಸ್ನೇಹಿತೆಯ ಮನೆಯೊಳಗೆ ಸಮಾಧಿ!

Murder Case


ಸಾಮಾನ್ಯವಾಗಿ ನಾವು ಹೆಚ್ಚು ಕೇಳಿರುವಂತಹ ಸುದ್ದಿಗಳಲ್ಲಿ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡುತ್ತಿದ್ದಳು! ಆದರೆ ಈ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಅದೇನೆಂದರೆ ಮಹಿಳೆ ತನ್ನ ಪತಿಯ ಜೊತೆ ಸೇರಿಕೊಂಡು ತನ್ನ ಪ್ರಿಯಕರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ (Murder Case) ಮಾಡಿದ್ದಾಳೆ. ಉತ್ತರ ಪ್ರದೇಶದ ಪ್ರತಾಪ್‍ಗಢದಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಕಂಡು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಫತನ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸುವಾನ್ಸಾ ಗ್ರಾಮದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದಾಳೆ. ನಂತರ, ಅವನ ದೇಹವನ್ನು ತನ್ನ ಮನೆಯ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಸ್ನೇಹಿತೆಯ ಮನೆಯೊಳಗೆ ಸಮಾಧಿ ಮಾಡಿದ್ದಾಳೆ. ಮಹಿಳೆಯೊಬ್ಬಳು ಇಂತಹ ಅಪರಾಧ ಎಸಗಿದ್ದು, ಇದು ಮೂರು ರಾಜ್ಯಗಳ ಪೊಲೀಸರು ಬೆಚ್ಚಿಬೀಳುವಂತೆ ಮಾಡಿದೆ. ಮೃತನು ಬಿಹಾರ ಮೂಲದವನು ಎಂಬುದಾಗಿ ತಿಳಿದುಬಂದಿದೆ. ಹಲವು ದಿನಗಳವರೆಗೆ ಆತನ ಸುಳಿವು ಸಿಗದಿದ್ದಾಗ, ಅವನ ಕುಟುಂಬದವರು ಬಿಹಾರ ಪೊಲೀಸರಿಗೆ ದೂರು ನೀಡಿದ್ದರು. ಆಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಈ ಘೋರ ಕೊಲೆ ಪ್ರಕರಣ ಬಹಿರಂಗವಾಗಿದೆ.

ವಿನೋದ್ ಮತ್ತು ಅವರ ಪತ್ನಿ ಪುಷ್ಪಾ ಹರಿಯಾಣದ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಪುಷ್ಪಾ ಬಿಹಾರದ ಮುನಿಯಾರಿ ಡ್ಯಾಮ್‍ನ ನಿವಾಸಿ ಶಿವನಾಥ್ (45) ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ ಶೀಘ್ರದಲ್ಲೇ ಅವಳು ಶಿವನಾಥನ ಸಂಬಂಧದಿಂದ ಬೇಸರಗೊಂಡಳು. ಹಾಗಾಗಿ ಅವಳು ಶಿವನಾಥನಿಂದ ದೂರವಾಗಲು ಬಯಸಿದಳು. ಆದರೆ ಶಿವನಾಥ್ ಅವಳೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಸಿದ್ಧರಿರಲಿಲ್ಲ.

ನಂತರ ಮಹಿಳೆ ತನ್ನ ಪತಿ ವಿನೋದ್‍ಗೆ ಇಡೀ ವಿಷಯವನ್ನು ಹೇಳಿದಳು. ನಂತರ, ದಂಪತಿ ಒಟ್ಟಿಗೆ ಸೇರಿ ಪ್ಲ್ಯಾನ್ ಮಾಡಿದ್ದಾರೆ. ಒಂದು ತಿಂಗಳ ಹಿಂದೆ ಪುಷ್ಪಾ ತನ್ನ ಕಂಪನಿಯಿಂದ ರಜೆ ತೆಗೆದುಕೊಂಡು ಸುವಾನ್ಸಾದಲ್ಲಿರುವ ತನ್ನ ಮನೆಗೆ ಬಂದಿದ್ದಳು. ಅವಳು ತನ್ನ ಪ್ರೇಮಿ ಶಿವನಾಥ್‍ನನ್ನು ಅಲ್ಲಿಗೆ ಕರೆದಳು. ತನ್ನ ಗೆಳತಿಯ ಕರೆ ಮೇರೆಗೆ, ಶಿವನಾಥ್ ಕೂಡ ಅವಳನ್ನು ಭೇಟಿಯಾಗಲು ಬಂದ. ಪುಷ್ಪಾ ತನ್ನ ಸ್ನೇಹಿತೆ ಪೂನಂ ಮನೆಗೆ ಶಿವನಾಥ್‌ನನ್ನು ಕರೆದುಕೊಂಡು ಹೋಗಿದ್ದಾಳೆ. ಪುಷ್ಪಾ ಅವರ ಪತಿ, ಪೂನಂ ಮತ್ತು ಅವರ ಪತಿ ಚಿಂತಾಮಣಿ ಆಗಲೇ ಅಲ್ಲಿದ್ದರು. ಶಿವನಾಥ್ ಅಲ್ಲಿಗೆ ತಲುಪಿದ ಕೂಡಲೇ ಅವನನ್ನು ಕತ್ತು ಹಿಸುಕಿ ಕೊಲ್ಲಲಾಯಿತು. ನಂತರ ಹರಿತವಾದ ಆಯುಧದಿಂದ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ನಂತರ ಶವವನ್ನು ಪೂನಂ ಅವರ ಮನೆಯಲ್ಲಿಯೇ ಸಮಾಧಿ ಮಾಡಲಾಯಿತು.

ಇದರ ನಂತರ ವಿನೋದ್ ಮತ್ತು ಪುಷ್ಪಾ ಗುರುಗ್ರಾಮಕ್ಕೆ ಮರಳಿದರು. ಈ ಮಧ್ಯೆ ಬಿಹಾರ ಪೊಲೀಸರು ಶಿವನಾಥ್ ಅವರನ್ನು ಹುಡುಕುತ್ತಿದ್ದರು. ಅವರು ಪುಷ್ಪಾ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂತು. ಹಾಗಾಗಿ ಪೊಲೀಸರು ಪುಷ್ಪಾಳನ್ನು ವಶಕ್ಕೆ ಪಡೆದರು. ಅವಳನ್ನು ವಿಚಾರಣೆಗೆ ಒಳಪಡಿಸಿದಾಗ, ಅವಳು ಸತ್ಯ ಬಾಯ್ಬಿಟ್ಟಿದ್ದಾಳೆ.

ಇದನ್ನೂ ಓದಿ: ಮಕ್ಕಳ ಕೈಯಲ್ಲೂ ಚಾಕು-ಚೂರಿ! ಎಂಥ ಕಾಲ ಬಂತು! ಈ ವಿಡಿಯೊ ನೋಡಿ

ನಂತರ ಪೊಲೀಸರು ಪ್ರತಾಪ್‍ಗಢದಲ್ಲಿರುವ ಪುಷ್ಪಾ ಅವರ ಸ್ನೇಹಿತೆಯ ಮನೆಯಿಂದ ಶವವನ್ನು ವಶಪಡಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಶಿವನಾಥ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ವಿನೋದ್ ಮತ್ತು ಪುಷ್ಪಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪೂನಂ ಮತ್ತು ಚಿಂತಾಮಣಿ ಸದ್ಯಕ್ಕೆ ತಲೆಮರೆಸಿಕೊಂಡಿದ್ದಾರೆ. ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Exit mobile version