Site icon Vistara News

Self Harming: ಜತೆಯಾಗಿ ನಡೆದು ಕೈ ಕೈ ಹಿಡಿದುಕೊಂಡೇ ರೈಲಿಗೆ ತಲೆಕೊಟ್ಟ ತಂದೆ-ಮಗ! ಮನ ಕಲಕುವ ವಿಡಿಯೊ

Self Harming

ಮುಂಬೈ : ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಮನುಷ್ಯ ಅವುಗಳಿಗೆ ಹೆದರದೆ ಅದನ್ನು ಎದುರಿಸಿ ಮುಂದೆ ಸಾಗಬೇಕು, ಅದನ್ನು ಬಿಟ್ಟು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುವಂತಹ ತಪ್ಪು ಕೆಲಸ ಮಾಡಬಾರದು. ಆದರೆ ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮಹತ್ಯೆಯಲ್ಲಿ ಮುಕ್ತಿ ಕಂಡುಕೊಂಡಿದ್ದಾರೆ. ಅಂತಹದೊಂದು ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Self Harming )ಆಗಿದೆ.

ಯುವಕನೊಬ್ಬ ತನ್ನ ತಂದೆಯ ಜೊತೆಗೆ ಬಯಂದರ್ ನಿಲ್ದಾಣದ ಬಳಿ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ತಂದೆ, ಮಗ ಇಬ್ಬರು ರೈಲು ನಿಲ್ದಾಣದಲ್ಲಿ ಮಾತನಾಡುತ್ತಾ ಸಹಜವಾಗಿ ಎಂಬಂತೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಆ ನಿಲ್ದಾಣದಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ. ಈ ಸಮಯದಲ್ಲಿ ತಂದೆ ಮಗ ಇಬ್ಬರೂ ಎದುರಿಗೆ ಬರುತ್ತಿರುವ ರೈಲನ್ನು ಕಂಡು ಕೈ ಕೈ ಹಿಡಿದುಕೊಂಡು ಹಳಿಗಳ ಮೇಲೆ ಮಲಗಿದ್ದಾರೆ. ಇದರಿಂದ ರೈಲು ಅವರ ಮೇಲೆ ಹರಿದು ಇಬ್ಬರು ದಾರುಣವಾಗಿ ಸಾವನಪ್ಪಿದ್ದಾರೆ.

ಈ ದೃಶ್ಯ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಸೋಮವಾರ ಬೆಳಗ್ಗೆ 9:30ರ ಸುಮಾರಿಗೆ ಸ್ಥಳೀಯ ರೈಲು ಪಾಲ್ಘರ್ ಜಿಲ್ಲೆಯ ಬಯಂದರ್ ನಿಲ್ದಾಣದಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರನ್ನು ವಸಾಯಿ ನಿವಾಸಿಗಳಾದ ಜಯ್ ಮೆಹ್ತಾ (33) ಮತ್ತು ಅವರ ತಂದೆ ಹರೀಶ್ ಮೆಹ್ತಾ (60) ಎಂದು ಗುರುತಿಸಲಾಗಿದೆ. ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂದು ಹರೇಶ್ ಮೆಹ್ತಾ ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮೃತರ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಹರೇಶ್ ಅವರ ಪತ್ನಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾಗಿದ್ದರು ಮತ್ತು ಜಯ್ ಅವರು ಕಳೆದ ವರ್ಷ ವಿವಾಹವಾಗಿದ್ದರು. ವಸಾಯಿಯಲ್ಲಿರುವ ಅವರ ಅಪಾರ್ಟ್ಮೆಂಟ್‍ನಲ್ಲಿ ಹರೀಶ್, ಜಯ್ ಮತ್ತು ಅವರ ಪತ್ನಿ ಮಾತ್ರ ವಾಸಿಸುತ್ತಿದ್ದರು. ಆದರೆ ಅವರ ಈ ಸಾವಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಹಾಗಾಗಿ ಪೊಲೀಸರು ಷೇರು ವ್ಯಾಪಾರದಲ್ಲಿ ನಷ್ಟದಿಂದಾಗಿ ಅಥವಾ ಯಾವುದೇ ಹಣಕಾಸಿನ ಒತ್ತಡ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  4.5 ಲಕ್ಷ ರೂ.ಯ ಅತೀ ದುಬಾರಿ ಬರ್ಗರ್‌; ಅಂಥದ್ದೇನಿದೆ ಇದರಲ್ಲಿ?

ತಂದೆ-ಮಗನ ಅಂತಿಮ ವಿಧಿಗಳನ್ನು ಮಂಗಳವಾರ ಸಂಜೆ ಮೀರಾ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನಡೆಸಲಾಯಿತು ಎನ್ನಲಾಗಿದೆ.

Exit mobile version