Site icon Vistara News

Viral Video: ಚಾಕೋಲೇಟ್ ತಿನ್ನುವ ಆಸೆಯಾಗಿ ಅಂಗಡಿಗೆ ಹೋಗಿದ್ದ ಬಾಲಕ ಶವವಾಗಿ ಮನೆಗೆ ಬಂದ; ಆಗಿದ್ದೇನು? ವಿಡಿಯೊ ನೋಡಿ

Viral Video

ಇಂದೋರ್ : ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿರುವ ಕಾರಣ ಅಲ್ಲಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುತ್ತದೆ. ಹಾಗಾಗಿ ನಿಮ್ಮ ಚಿಕ್ಕ ಮಕ್ಕಳನ್ನು ಅಂತಹ ರಸ್ತೆಯಲ್ಲಿ ಕಳುಹಿಸುವ ಮುನ್ನ ಪೋಷಕರು ಎಚ್ಚರಿಕೆಯಿಂದಿರಿ. ಇಲ್ಲವಾದರೆ ಅದರಿಂದ ಅವರಿಗೆ ಅಪಾಯವಾಗಬಹುದು. ಅಂತಹದೊಂದು ಘಟನೆ ಇದೀಗ ಇಂದೋರ್ ನಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಚಾಕೋಲೇಟ್ ಖರೀದಿಸಲು ತನ್ನ ಸಹೋದರಿಯ ಜೊತೆಗೆ ಅಂಗಡಿಗೆ ಹೋದ ಬಾಲಕನಿಗೆ ರಸ್ತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಹೊಡೆದು ಗಾಯಗೊಂಡು ಸಾವನಪ್ಪಿದ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ವೈರಲ್ ಆದ ವಿಡಿಯೊದಲ್ಲಿ 5 ವರ್ಷದ ಬಾಲಕ ತನ್ನ 8 ವರ್ಷದ ಸಹೋದರಿಯ ಜೊತೆಗೆ ಅಂಗಡಿಯಲ್ಲಿ ಚಾಕೋಲೆಟ್ ಖರೀದಿಸುತ್ತಿದ್ದು, ಅಲ್ಲಿ ರಸ್ತೆಯ ದುರಸ್ತಿ ಕೆಲಸ ನಡೆಯುತ್ತಿದ್ದು, ಆ ವೇಳೆ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಆ ಬಾಲಕನಿಗೆ ತಗುಲಿ ಆತ ಅಲ್ಲೆ ನೆಲಕ್ಕೆ ಬಿದ್ದಿದ್ದಾನೆ. ನಂತರ ಅಲ್ಲಿದ್ದವರು ಬಾಲಕನನ್ನು ಸುತ್ತುವರಿದಿರುವುದು ಕಂಡುಬರುತ್ತದೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೃತನನ್ನು ಲಾಹಿಯಾ ಕಾಲೋನಿ ನಿವಾಸಿ ರಾಕೇಶ್ ಕಬ್ರೆ ಅವರ ಪುತ್ರ ಶಿವಾಂಶ್ ಎಂದು ಗುರುತಿಸಲಾಗಿದೆ.

ಆತನ ಸಹೋದರಿಗೆ ಯಾವುದೇ ಗಾಯಗಳಾಗಿರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ, ಜುಲೈ 15ರಂದು ಲಾಹಿಯಾ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ಕೆಲಸ ಮಾಡುವಾಗ ಜೆಸಿಬಿ ಯಂತ್ರದ ಚಾಲಕ ಅದನ್ನು ಇನ್ನೊಬ್ಬನ ಚಾಲಕನಿಗೆ ಹಸ್ತಾಂತರಿಸಿದ. ಇದರ ಪರಿಣಾಮವಾಗಿ ಕೆಲಸ ಮಾಡುವಾಗ ಜೆಸಿಬಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿ ಅಂಗಡಿಯಲ್ಲಿ ಚಾಕೋಲೇಟ್ ತೆಗೆದುಕೊಂಡು ನಿಂತಿದ್ದ ಬಾಲಕನ ಮುಖಕ್ಕೆ ಹೊಡೆದಿದೆ. ಕೆಲಗೆ ಬಿದ್ದ ಅವನನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಜೆಸಿಬಿಯನ್ನು ವಶಪಡಿಸಿಕೊಂಡು ಗುತ್ತಿಗೆದಾರ ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್ ಬಳಿಯ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಬಾಲಕನ ಕುಟುಂಬ ಮತ್ತು ಇತರ ನಿವಾಸಿಗಳು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಲವಾರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಇದರಿಂದ ಟ್ರಕ್‌ಗಳು ಸೇರಿದಂತೆ ಹಲವಾರು ವಾಹನಗಳು ಸೇರಿ ಅಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಹಿರಾ ನಗರ ಎಸಿಪಿ ಡಿ.ಎಸ್.ಯೆವಾಲೆ ಮತ್ತು ವಿಜಯ್ ನಗರ ಎಸಿಪಿ ಕೃಷ್ಣ ಲಾಲ್ಚಂದಾನಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪಡೆಗಳೊಂದಿಗೆ ಸ್ಥಳಕ್ಕೆ ತಲುಪಿ ಮಾರ್ಗವನ್ನು ತೆರವುಗೊಳಿಸಿದರು.

ಇದನ್ನೂ ಓದಿ: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

ನಂತರ ಅವರು ಪ್ರತಿಭಟನೆ ನಡೆಸುತ್ತಿದ್ದ ಜನಸಮೂಹವನ್ನು ಸಮಾಧಾನಪಡಿಸಿ ತನಿಖೆಯ ನಂತರ ಜವಾಬ್ದಾರಿಯುತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಮೇಯರ್ ಪುಷ್ಯಮಿತ್ರ ಭಾರ್ಗವ್ ಅವರು ಮೃತ ಶಿವಾಂಶ್ ಕಾಬ್ರೆ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.

Exit mobile version