Site icon Vistara News

Viral Video: ಮಗನನ್ನು ಕೊಲ್ಲಲು ಕತ್ತಿ ಬೀಸಿದ ದುಷ್ಕರ್ಮಿಗಳನ್ನು ಕಲ್ಲೆಸೆದು ಓಡಿಸಿದ ತಾಯಿ! ವಿಡಿಯೊ ನೋಡಿ

Viral Video


ತಾಯಿ ಯಾವಾಗಲೂ ತನ್ನ ಮಕ್ಕಳ ರಕ್ಷಣೆಗೆ ಸದಾ ಸಿದ್ಧಳಾಗಿರುತ್ತಾಳೆ. ಎಂತಹ ಪರಿಸ್ಥಿತಿ ಬಂದರೂ ಹೆದರದೆ ತನ್ನ ಪ್ರಾಣವನ್ನು ನೀಡಿಯಾದರೂ ತನ್ನ ಮಕ್ಕಳ ರಕ್ಷಣೆ ಮಾಡುತ್ತಾಳೆ. ಅಂತಹ ಮಹಾನ್ ತಾಯಿಯೊಬ್ಬಳು ಇತ್ತೀಚೆಗೆ ತನ್ನ ಮಗನನ್ನು ದುಷ್ಕರ್ಮಿಗಳಿಂದ ಕಾಪಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗನ ಮೇಲೆ ನಡೆದ ಆಘಾತಕಾರಿ ದಾಳಿ ಹಾಗೂ ತಾಯಿಯ ಸಾಹಸದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲದೇ ಈ ಘಟನೆ ಆ ಪ್ರದೇಶದ ಜನರ ಮನದಲ್ಲಿ ಆತಂಕವನ್ನು ಉಂಟುಮಾಡಿದೆ.

ವರದಿಗಳ ಪ್ರಕಾರ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಹಾಡಹಗಲೇ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಹಿಂದಿನಿಂದ ಹಲ್ಲೆ ನಡೆಸಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ, ವ್ಯಕ್ತಿಯೊಬ್ಬರು ತನ್ನ ತಾಯಿಯ ಜೊತೆ ಮಾತನಾಡುತ್ತಾ ಸ್ಕೂಟರ್‌ನಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದಾರೆ. ಆಗ ಬೈಕ್‍ನಲ್ಲಿ ಬಂದ ಇಬ್ಬರು ಪುರುಷರು, ತಾಯಿಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿಯ ಕಡೆಗೆ ಬಂದು ಅದರಲ್ಲಿ ಒಬ್ಬ ಹಿಂದಿನಿಂದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಾರೆ. ಆಗ ಹಠಾತ್ ದಾಳಿಗೆ ಹೆದರದ ಮಹಿಳೆ ಬೇಗನೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ದಾಳಿಕೋರರನ್ನು ಬೆನ್ನಟ್ಟಲು ಪ್ರಾರಂಭಿಸುತ್ತಾಳೆ. ಇದನ್ನು ನೋಡಿದ ದಾಳಿಕೋರರು ಬೈಕ್‍ನಲ್ಲಿ ಸ್ಥಳದಿಂದ ಪರಾರಿಯಾಗಿದ್ದು, ಆಕೆಯ ಮಗ ಕೂಡ ಕಲ್ಲನ್ನು ಎತ್ತಿಕೊಂಡು ಅವರ ಹಿಂದೆ ಓಡಿದ್ದಾನೆ.

ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವರದಿಯ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳು ಕೊಲ್ಹಾಪುರದ ಶಾಹು ನಗರ ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಹಗಲು ಹೊತ್ತಿನಲ್ಲಿ ಮಾರುಕಟ್ಟೆಯ ಜೆರಾಕ್ಸ್ ಅಂಗಡಿಯ ಮುಂದೆ ಈ ಘಟನೆ ನಡೆದಿದೆ. ಸಿಸಿಟಿವಿ ವಿಡಿಯೊದಲ್ಲಿ ಈ ಘಟನೆ ಮಧ್ಯಾಹ್ನ ನಡೆದಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಘಟನೆಯ ನಿಖರವಾದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ:ತಾಯಿಯೊಂದಿಗೆ ಮಲಗಿದ್ದ 3 ವರ್ಷದ ಹೆಣ್ಣು ಮಗುವನ್ನುಎಳೆದೊಯ್ದು ಅತ್ಯಾಚಾರ ಎಸಗಿದ ಪಾಪಿ

ಹಲ್ಲೆಗೊಳಗಾದ ವ್ಯಕ್ತಿಯನ್ನು ಸುನಿಲ್ ರಾಮಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಇವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ವಿನೋದ್ ಕಾಸು ಪವಾರ್, ಅರವಿಂದ್ ಕಾಸು ಪವಾರ್ ಮತ್ತು ವಿನೋದ್ ಬಾಬು ಜಾಧವ್ ಎಂಬ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮತ್ತು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Exit mobile version