Site icon Vistara News

Summer Juices: ರಂಜಾನ್‌ ತಿಂಗಳಲ್ಲಿ ದೇಹ ತಂಪಾಗಿರಿಸಲು ಕುಡಿಯಲೇ ಬೇಕಾದ ಪಾನೀಯಗಳಿವು!

juices

ದಿನವಿಡೀ ನೀರನ್ನೂ ಸಹಿತ ಕುಡಿಯದೆ ಉಪವಾಸ ಮಾಡುವುದೆಂದರೆ ಖಂಡಿತವಾಗಿಯೂ ಸವಾಲೀನ ಕೆಲಸವೇ. ಯಾಕೆಂದರೆ ಈಗ ಇನ್ನೇನು ಬೇಸಗೆಯ ಆರಂಭವಾಗಿರುವಾಗ ದೇಹಕ್ಕೆ ನೀರು ಅತ್ಯಂತ ಅವಶ್ಯಕ. ನೀರು ನಮ್ಮನ್ನು ಬಹಳ ಹೊತ್ತು ಕ್ರಿಯಾಶೀಲವಾಗಿ ಇರಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸದಿದ್ದರೆ ಹಲವಾರು ಆರೋಗ್ಯದ ಸಮಸ್ಯೆಗಳೂ ಬರುತ್ತವೆ. ಈಗ ರಂಜಾನ್‌ ತಿಂಗಳಾದ್ದರಿಂದ ಬಹಳಷ್ಟು ಮಂದಿಗೆ ಈಗ ಇಂತಹ ಉಪವಾಸದ ಸಮಯ. ಹಾಗಾಗಿ ಉಪವಾಸದ ಸಮಯದ ಹೊರತಾಗಿ ದೇಹಕ್ಕೆ ನೀರಿನಂಶದ ಅಗತ್ಯ ಸಾಕಷ್ಟಿದೆ. ಹೀಗಾಗಿ ಸೆಹ್ರಿ ಹಾಗೂ ಇಫ್ತಾರ್‌ ಸಂದರ್ಭಗಳಲ್ಲಿ ಕುಡಿಯಬಹುದಾದ ಕೆಲವು ಶಕ್ತಿವರ್ಧಕ ಬೇಸಿಗೆಯ ತಂಪು ಪಾನೀಯಗಳು ಇಲ್ಲಿವೆ.

1. ಎಳನೀರು: ಪ್ರಕೃತಿದತ್ತವಾದ ಎಳನೀರಿನಷ್ಟು ಅತ್ಯುತ್ತಮ ತಂಪು ಪಾನೀಯ ಇನ್ನೊಂದಿಲ್ಲ. ಸಾಕಷ್ಟು ಖನಿಜ, ಲವಣ, ಜೀವಸತ್ವಗಳಿರುವ ಎಳನೀರು ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ನೀಡುತ್ತದೆ. ಶಕ್ತಿಹೀನರಾದಾಗ, ಉಪವಾಸದಿಂದ ಬಳಲಿದಾಗ ಶಕ್ತಿದಾಯಕವಾಗಿ ಅತ್ಯುತ್ತಮ ಪರಿಹಾರವೆಂದರೆ ಅದು ಎಳನೀರು. ಎಳನೀರಿಗೆ ಅದರ ಗಂಜಿ ಹಾಕಿ, ಅಥವಾ ನಿಂಬೆಹಣ್ಣನ್ನು ಹಿಂಡಿಯೂ ಎಳನೀರಿನ ಜ್ಯೂಸ್‌ ಮಾಡಿಯೂ ಹೀರಬಹುದು.

2. ಜಲ್ಲಬ್‌: ಮಧ್ಯ ಪೌರಾತ್ಯ ದೇಶಗಳ ಅತ್ಯಂತ ಪ್ರಸಿದ್ಧವಾದ ಪಾನೀಯಗಳಲ್ಲಿ ಜಲ್ಲಬ್‌ ಕೂಡಾ ಒಂದು. ಇದನ್ನು ಖರ್ಜೂರ, ದ್ರಾಕ್ಷಿ ಹಾಗೂ ಗುಲಾಬಿ ನೀರಿನಿಂದ ಮಾಡಲಾಗುತ್ತದೆ. ರಂಜಾನ್‌ ಆಚರಿಸುವ ಮಂದಿಯ ಮನೆಗಳಲ್ಲಿ ಸಾಮಾನ್ಯವಾಗಿ ಈ ಪಾನೀಯವನ್ನು ಪೂರ್ತಿ ತಿಂಗಳು ಇಟ್ಟಿರುತ್ತಾರೆ. ಕೊಂಚ ಹುಳಿ ರುಚಿಯ ಈ ಪಾನೀಯ ಅತ್ಯಂತ ಶಕ್ತಿದಾಯಕವಾದ ಪೇಯ. ಇದರಲ್ಲಿ ನೈಸರ್ಗಿಕವಾದ ಸಿಹಿ ಇರುವುದರಿಂದ ಪ್ರತ್ಯೇಕವಾಗಿ ಸಕ್ಕರೆಯನ್ನು ಹಾಕುವ ಅವಶ್ಯಕತೆಯೂ ಬಾರದು.

ಇದನ್ನೂ ಓದಿ: Carrot Juice Benefits: ಕ್ಯಾರೆಟ್‌ ಜ್ಯೂಸ್‌ ಪ್ರಿಯರೇ? ಅದರ ಗುಣವೇ ಅಂಥದ್ದು!

3. ರೂಹ್‌ ಅಫ್ಜಾ ಶರಬತ್ತು: ರಂಜಾನ್‌ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಕುಡಿಯಲ್ಪಡುವ ಶರಬತ್ತು ಎಂದರೆ ರೂಹ್‌ ಅಫ್ಜಾ. ಮಾರುಕಟ್ಟೆಯಲ್ಲಿ ಸಿಗುವ ರೂಹ್‌ ಅಫ್ಜಾ, ತನ್ನ ಪಿಂಕ್‌ ಬಣ್ಣದಿಂದಲೂ ಮಂತ್ರಮುಗ್ಧಗೊಳಿಸುತ್ತದೆ. ಗುಲಾಬಿಯ ಹಿತವಾದ ಗಂಧದ ಈ ಶರಬತ್ತು ಬೇಸಿಗೆಯ ದಾಹವನ್ನು ಕ್ಷಣ ಮಾತ್ರದಲ್ಲಿ ದೂರವಿರಿಸುತ್ತದೆ. ಹಾಲು ಹಾಕಿಯೂ ಮಾಡಬಹುದಾದ ಗುಲಾಬಿ ಬಣ್ಣದ ಸುಂದರ ಪೇಯವಿದು. ಇದಕ್ಕೆ ಕಲ್ಲಂಗಡಿಯ ತುಂಡುಗಳನ್ನು ಹಾಕಿ ಕುಡಿದರೆ ಅದ್ಭುತ ರುಚಿ. ದಾಹವೂ ಮಾಯ.

4. ಖರ್ಜೂರದ ಸ್ಮೂದಿ: ಖರ್ಜೂರ ಶಕ್ತಿವರ್ಧಕ. ಇದು ರೋಗನಿರೋಧಕವೂ ಹೌದು. ಸಂಜೆಯ ಸೂರ್ಯಾಸ್ತದ ನಂತರ ಉಪವಾಸ ಬಿಡುವ ಸಂದರ್ಭದಲ್ಲಿ ತಿನ್ನುವ ಹಣ್ಣುಗಳ ಪೈಕಿ ಖರ್ಜೂರವೂ ಒಂದು. ಒಂದೆರಡು ಹಣ್ಣುಗಳನ್ನು ಬಾಯಿಗಿಟ್ಟರೆ ಇನ್ಸ್‌ಟಾಂಟ್‌ ಎನರ್ಜಿ ನೀಡುವ ಈ ಹಣ್ಣನ್ನು ಹಾಲಿನ ಜೊತೆಗೆ ಸೇರಿಸಿ ಸ್ಮೂದಿ ಮಾಡುವ ಮೂಲಕವೂ ಸೇವಿಸಬಹುದು. ಹಸಿವೆಯನ್ನು ತತ್‌ಕ್ಷಣಕ್ಕೆ ಕಡಿಮೆ ಮಾಡುವ ತಾಕತ್ತು ಇರುವುದರಿಂದ ರಂಜಾನ್‌ ಮಾಸದಲ್ಲಿ ಎಲ್ಲರ ಮನೆಗಳಲ್ಲಿರುವ ಹಣ್ಣಿದು.

5. ಹಣ್ಣುಗಳ ಜ್ಯೂಸ್‌: ಯಾವುದೇ ಹಣ್ಣಿನ ಜ್ಯೂಸ್ ಕೂಡಾ ಉಪವಾಸ ಬಿಡುವ ಸಂದರ್ಭ ಅತ್ಯುತ್ತಮ ಶಕ್ತಿದಾಯಕ ಪಾನೀಯವಾಗಬಲ್ಲದು, ಕಲ್ಲಂಗಡಿ ಹಣ್ಣು, ಖರ್ಬೂಜಾ, ದಾಳಿಂಬೆ, ಕಿತ್ತಳೆ, ಮೂಸಂಬಿ,  ದ್ರಾಕ್ಷಿ , ಅನನಾಸು ಇತ್ಯಾದಿಗಳ ಜ್ಯೂಸು ಶಕ್ತಿವರ್ಧಕ. ಇಷ್ಟೇ ಅಲ್ಲದೆ, ಹಲವು ಹಣ್ಣುಗಳನ್ನು ಮಿಕ್ಸ್‌ ಮಾಡಿಯೂ ಜ್ಯೂಸ್‌ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು.

ರಂಜಾನ್‌ ಶುಭಾಶಯಗಳು!

ಇದನ್ನೂ ಓದಿ: ದಾನದ ಮಹತ್ವ ಎತ್ತಿ ಹಿಡಿಯುವ ರಂಜಾನ್

Exit mobile version