Site icon Vistara News

Election results 2024: ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಭರ್ಜರಿ ಮುನ್ನಡೆ

election results 2024 Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces

ಬೆಂಗಳೂರು: ಹೈ ವೋಲ್ಟೇಜ್‌ ಸ್ಪರ್ಧೆಯ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ (Bangalore Rural Lok Sabha Constituency) ಮತ ಎಣಿಕೆ (vote counting) ಕಾರ್ಯ ಸಾಂಗವಾಗಿ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌ ಮಂಜುನಾಥ್‌ (Dr CN Manjunath) ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 9 ಗಂಟೆಯ ಹೊತ್ತಿಗೆ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಕೆ ಸುರೇಶ್‌ (DK Suresh) ಅವರಿಗಿಂತ 50,000 ಮತಗಳ ಮುನ್ನಡೆ (Election results 2024) ಕಾಯ್ದುಕೊಂಡಿದ್ದಾರೆ.

ಮತ ಎಣಿಕೆಯ ಆರಂಭದ ಕ್ಷಣಗಳಿಂದಲೇ ಡಾ. ಮಂಜುನಾಥ್‌ ತಮ್ಮ ಮುನ್ನಡೆಯ ವೇಗವನ್ನು ಕಾಯ್ದುಕೊಂಡರು. ‌ಡಿ.ಕೆ ಸುರೇಶ್‌ ಅವರು ಹಿಂದುಳಿದರು. ಭಾರಿ ಉತ್ಸಾಹದಿಂದ ಮತ ಎಣಿಕೆ ಕೇಂದ್ರಗಳಿಗೆ ಬಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಆತಂಕ ಮನೆಮಾಡಿದರೆ, ಬಿಜೆಪಿ ಕಾರ್ಯಕರ್ತರು ಉತ್ಸಾಹ ಹೆಚ್ಚಿಸಿಕೊಂಡರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ 24 ಲಕ್ಷ ಮತದಾರರನ್ನು ಹೊಂದಿರುವ ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮೊದಲ ಚುನಾವಣೆ 2009ರಲ್ಲಿ ನಡೆಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (HD kumaraswmay) ಈ ಕ್ಷೇತ್ರದ ಮೊದಲ ಸಂಸದ. ಆದರೆ, 2013ರ ಉಪಚುನಾವಣೆ ಸೇರಿದಂತೆ ಸತತ ಎರಡು ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿದೆ. ಇಲ್ಲಿನ ಹಾಲಿ ಸಂಸದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ಸಹೋದರ ಡಿ.ಕೆ ಸುರೇಶ್​.

ಕ್ಷೇತ್ರ ವಿಂಗಡಣೆಗೆ ಮೊದಲು ಇದನ್ನು ಕನಕಪುರ ಲೋಕಸಭಾ ಕ್ಷೇತ್ರವಾಗಿ ಗುರುತಿಸಲಾಗಿತ್ತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಇಲ್ಲಿ ಕೊನೇ ಬಾರಿ ಗೆದ್ದಿದ್ದರು. ಎಂ.ವಿ.ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವುಗಳಲ್ಲಿ ಏಳು ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದವು. ತುಮಕೂರು ಜಿಲ್ಲೆಯ ಕುಣಿಗಲ್ ಜೊತೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ನಗರ ಹೊಸ ವಿಧಾನಸಭಾ ಕ್ಷೇತ್ರಗಳು ಇದರ ಭಾಗವಾಗಿವೆ.

ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ. 2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು 2.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಸುರೇಶ್ 6.52 ಲಕ್ಷ ಮತಗಳನ್ನು ಪಡೆದರೆ, ಗೌಡರು 4.21 ಲಕ್ಷ ಮತಗಳನ್ನು ಮಾತ್ರ ಪಡೆದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಅಶ್ವತ್ಥನಾರಾಯಣ ಗೌಡ ಅವರನ್ನು 2,06,870 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 54.12% ಮತಗಳನ್ನು ಹೊಂದಿತ್ತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಪಿ ಅವರನ್ನು 2,31,480 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 44.76% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.44.73ರಷ್ಟು ಮತಗಳನ್ನು ಪಡೆದಿತ್ತು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 24,97,458. 2019ರಲ್ಲಿ ಶೇ.64.9ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರ ಪೈಕಿ 54.2% ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು 68.91% ಆಗಿತ್ತು.

ಇದನ್ನೂ ಓದಿ: Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

Exit mobile version