Site icon Vistara News

KS Eshwarappa: ಈಶ್ವರಪ್ಪ ಬಂದೂಕಿನ ಗುರಿ ಇಟ್ಟಿರುವುದು ಹೈಕಮಾಂಡ್ ಕಡೆಗೆ: ಬಿ.ವೈ. ರಾಘವೇಂದ್ರ

KS Eshwarappa aimed at high command says BY Raghavendra

ಬೆಂಗಳೂರು: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ನಮ್ಮ ಕುಟುಂಬ ಯಾವ ಅನ್ಯಾಯವನ್ನೂ ಮಾಡಿಲ್ಲ.‌ ಆದರೆ, ಅವರು ನಮ್ಮ ಕುಟುಂಬದ ಕಡೆ ಬೆರಳು ತೋರಿಸಿ ಮಾತನಾಡುತ್ತಿದ್ದಾರೆ. ಈಶ್ವರಪ್ಪ ನಮ್ಮ ಕುಟುಂಬದ ಬಗ್ಗೆ ಮಾತನಾಡಿರಬಹುದು. ಆದರೆ, ಅವರು ಬಂದೂಕಿನ ಗುರಿ ಇಟ್ಟಿರುವುದು ಹೈಕಮಾಂಡ್ ಕಡೆಗೆ ಎಂಬುದು ಸ್ಪಷ್ಟ. ಇದನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೇ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ (Shimoga Lok Sabha constituency) ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ. ರಾಘವೇಂದ್ರ (BY Raghavendra) ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ್ದನ್ನು ಈಶ್ವರಪ್ಪ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈಗ ಕಾಂತೇಶ್‌ಗೆ ಟಿಕೆಟ್ ಸಿಕ್ಕಿಲ್ಲವೆಂದು ಇನ್ನೂ ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಗುಡುಗಿದರು.

ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ

ಹಿಂದುತ್ವ ಉಳಿಸಬೇಕು, ಬಿಜೆಪಿ ಶುದ್ಧ ಮಾಡಬೇಕು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಬಿಡಿಸಬೇಕು ಅಂತ ಕೆ.ಎಸ್. ಈಶ್ವರಪ್ಪ ಅವರಿಗೆ ಕಳೆದ 15 ದಿನಗಳಿಂದ ಹೀಗೆ ಅನ್ನಿಸಿದೆ ಪಾಪ. ಈ ಮೊದಲು ಹೀಗೆಲ್ಲ ಅವರಿಗೆ ಅನ್ನಿಸಿರಲಿಲ್ಲ. ನನ್ನ ಸಹೋದರ ಸಮಾನ ಕಾಂತೇಶ್‌ಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರವಾಗಿದೆ. ಕಾಂತೇಶ್‌ಗೆ ಟಿಕೆಟ್ ಸಿಗಬೇಕು ಅಂತ ನಮ್ಮದೂ ಆಶಯ ಇತ್ತು. ಆದರೆ, ಅದು ಹೈಕಮಾಂಡ್ ನಿರ್ಧಾರವಾಗಿದೆ. ಪಕ್ಷದ ತೀರ್ಮಾನವನ್ನು ಗೌರವಿಸುವ ಬದಲು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಅವರು ಏನೇ ಮಾತನಾಡಿದರೂ ನಾನು ಆಶೀರ್ವಾದ ಅಂದುಕೊಳ್ಳುತ್ತೇನೆ. ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಜನ ಇದಕ್ಕೆಲ್ಲ ಮತದಾನದ ಮೂಲಕ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರೇ ಶಿವಮೊಗ್ಗಕ್ಕೆ ಬಂದು ಬಿ.ವೈ. ರಾಘವೇಂದ್ರನನ್ನು ಗೆಲ್ಲಿಸಿ ಅಂತ ಪ್ರಚಾರ ಮಾಡಿ ಹೋಗಿದ್ದಾರೆ. ಹೀಗಿದ್ದಾಗಲೂ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕೆ.ಎಸ್. ಈಶ್ವರಪ್ಪ ಮಾಡುತ್ತಿದ್ದಾರೆ. ನಾನು ಶಿವಮೊಗ್ಗದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ಯಾವುದೇ ಗೊಂದಲಗಳು ಉದ್ಭವಿಸಲ್ಲ. ನಾನು ಈಶ್ವರಪ್ಪ ಬಗ್ಗೆ ಮಾಧ್ಯಮಗಳಲ್ಲಿ‌ ಮಾತಾಡಬಾರದು ಅಂದುಕೊಂಡಿದ್ದೆ. ಆದರೆ, ಇವತ್ತು ಅನಿವಾರ್ಯವಾಗಿ ಮಾತನಾಡಬೇಕಾಯಿತು. ಅವರೇ ನನ್ನಿಂದ ಇವತ್ತು ಮಾತನಾಡಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: BJP Manifesto: ಯುಸಿಸಿ, ಒಂದು ಚುನಾವಣೆ, ವಿಶ್ವಸಂಸ್ಥೆ ಕಾಯಂ ಸ್ಥಾನ; ಮೋದಿ ಗ್ಯಾರಂಟಿಗಳ ಪಟ್ಟಿ ಇಲ್ಲಿದೆ

ಹಿಂದುತ್ವ, ಪಕ್ಷದ ವಿಚಾರದಲ್ಲಿ ರಾಜಿ ಇಲ್ಲ

ಯಡಿಯೂರಪ್ಪ ಎಲ್ಲ ಸವಾಲು, ಹೋರಾಟಗಳನ್ನು ಎದುರಿಸಿ ಬಂದವರು. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಶಿಕಾರಿಪುರದಲ್ಲಿ ಈ ಹಿಂದೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಗುಂಡು, ಹೋರಾಟ ಎದುರಿಸಿ ಬಂದವರು ಯಡಿಯೂರಪ್ಪ. ಹಿಂದುತ್ವ, ಪಕ್ಷದ ವಿಚಾರದಲ್ಲಿ ನಮ್ಮ‌ ಕುಟುಂಬದಲ್ಲಿ ಯಾವುದೇ ರಾಜಿ ಇಲ್ಲ. ಈಶ್ವರಪ್ಪ ಪಕ್ಷ ಕಟ್ಟಿದವರು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ. ಈಶ್ವರಪ್ಪ ಸಿಟ್ಟು ಇರುವುದೇ ಹೈಕಮಾಂಡ್ ಮೇಲೆ. ಅದನ್ನು ಹೇಳಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಈಶ್ವರಪ್ಪ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುತ್ತಾರೆ. ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.

Exit mobile version