Site icon Vistara News

Lok Sabha Election 2024: ಕಾಂಗ್ರೆಸ್‌ ಅಧಿಕೃತ ಪಟ್ಟಿ ಬಿಡುಗಡೆ; ಜಯಪ್ರಕಾಶ್‌ ಹೆಗ್ಡೆ, ಚಂದ್ರಪ್ಪ ಮಿಸ್!

Lok Sabha Election 2024 Congress releases first list DK Suresh Geetha and 5 others get tickets

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ. ಸುರೇಶ್‌, ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್‌, ತುಮಕೂರಿನಿಂದ ಮುದ್ದಹನುಮೇಗೌಡ ಸೇರಿದಂತೆ ಕರ್ನಾಟಕದ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ (Congress Karnataka) ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೊದಲು ಮಾಧ್ಯಮಗಳಿಗೆ ಲಭ್ಯವಾಗಿದ್ದ ಕಾಂಗ್ರೆಸ್‌ ಪಟ್ಟಿಯಲ್ಲಿ ಉಡುಪಿ- ಚಿಕ್ಕಮಗಳೂರಿಂದ ಜಯಪ್ರಕಾಶ್‌ ಹೆಗ್ಡೆ ಹಾಗೂ ಚಿತ್ರದುರ್ಗದಿಂದ ಬಿ.ಎನ್‌. ಚಂದ್ರಪ್ಪ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಈಗ ಅಧಿಕೃತ ಪಟ್ಟಿಯಲ್ಲಿ ಇವರ ಪ್ರಸ್ತಾಪವೇ ಇಲ್ಲ.

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ

ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರದಿಂದ ನವ ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಜತೆ ರಾಜ್ಯ ನಾಯಕರು ಸಭೆ ನಡೆಸುತ್ತಿದ್ದರು. ಇಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಇವುಗಳಲ್ಲಿ 7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ಒಟ್ಟು 39 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.

ವೆಂಕಟರಮಣೇಗೌಡ (ಸ್ಟಾರ್ ಚಂದ್ರು)

ಈ ಎಂಟು ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಗಳು ಇವರು

  1. ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ
  2. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ – ಈಡಿಗ
  3. ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ
  4. ವಿಜಯಪುರ – ರಾಜು ಆಲಗೂರು – ಎಸ್.ಸಿ
  5. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ
  6. ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್ – ಒಕ್ಕಲಿಗ
  7. ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ
ಈ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ

ಈ ಏಳು ಕ್ಷೇತ್ರಗಳಲ್ಲಿ ಡಿ.ಕೆ. ಸುರೇಶ್‌ ಅವರು ಹಾಲಿ ಸಂಸದರಾಗಿದ್ದಾರೆ. ಇಲ್ಲಿ ಹಲವು ರೀತಿಯ ಜಾತಿ ಸಮೀಕರಣವನ್ನು ಮಾಡಲಾಗಿದೆ. ಈಡಿಗ ಸಮುದಾಯದ ಪ್ರಾಬಲ್ಯವನ್ನೂ ಹೊಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಹಾಸನಕ್ಕೆ ಒಕ್ಕಲಿಗ ಸಮುದಾಯದ ಶ್ರೇಯಸ್‌ ಪಟೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಪ್ರಾಬಲ್ಯ ಇರುವ ಜಾತಿಗಳನ್ನು ಗಮನಿಸಿಯೇ ಟಿಕೆಟ್‌ ನೀಡಲಾಗಿದೆ ಎನ್ನಲಾಗಿದೆ. ಆದರೆ, ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್‌ನ ಒಂದು ಪಟ್ಟಿ ಹರಿದಾಡಿತ್ತು. ಅದರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ್‌ ಹೆಗ್ಡೆ, ಹಾಗೂ ಚಿತ್ರದುರ್ಗದ ಬಿ.ಎನ್‌. ಚಂದ್ರಪ್ಪ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ಆದರೆ, ಇವರೆಡಕ್ಕೂ ತಾತ್ಕಾಲಿಕವಾಗಿ (Seats on hold) ತಡೆಹಿಡಿಯಲಾಗಿದೆ ಎಂದು ನಮೂದು ಮಾಡಲಾಗಿತ್ತು. ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ನೂತನ ಪಟ್ಟಿಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಇವರಿಬ್ಬರ ಹೆಸರನ್ನು ಕೈಬಿಡಲಾಗಿದ್ದರೆ, ಹಾವೇರಿ ಕ್ಷೇತ್ರದ ಹೆಸರನ್ನು ಸೇರ್ಪಡೆ ಮಾಡಲಾಗಿದೆ.

ಶ್ರೇಯಸ್‌ ಪಟೇಲ್

ಕಾಂಗ್ರೆಸ್‌ನಿಂದ ಎಷ್ಟು ಪಟ್ಟಿ ಬಿಡುಗಡೆ?

ಈಗ ಕಾಂಗ್ರೆಸ್‌ ಎಷ್ಟು ಪಟ್ಟಿ ಬಿಡುಗಡೆ ಮಾಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಒಂದಾ, ಎರಡೇ? ಮೂರೇ? ಹೀಗೆ ಎಷ್ಟು ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಕೆಲವು ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಈಗ ಬಿಜೆಪಿ 28 ಕ್ಷೇತ್ರಗಳಿಗೆ ಟಿಕೆಟ್‌ ಫೈನಲ್‌ ಮಾಡುವವರೆಗೂ ಕೈಪಡೆ ಕಾಯಲಿದೆ. ಹೀಗಾಗಿ ಎರಡು ಪಟ್ಟಿ ಬಿಡುಗಡೆ ಮಾಡಲಿರುವ ಕಾಂಗ್ರೆಸ್‌, ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡಲಿದೆ.

ಇದನ್ನೂ ಓದಿ: Lok Sabha Election 2024: ಜೆಡಿಎಸ್‌ಗೆ 3 ಕ್ಷೇತ್ರ 3 ಟೆನ್ಶನ್;‌ ಪ್ರಜ್ವಲ್‌ ರೇವಣ್ಣಗೆ ಇಕ್ಕಟ್ಟು ತಂದ ನೆಗೆಟಿವ್‌ ರಿಪೋರ್ಟ್!

ಅಭ್ಯರ್ಥಿ ಕೊರತೆ ಇರುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್‌ ಈಗ ಬಿಜೆಪಿ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲು ಮುಂದಾಗಿದೆ. ಅಲ್ಲಿ ಟಿಕೆಟ್‌ ವಂಚಿತರನ್ನು ಪಕ್ಷಕ್ಕೆ ಸೆಳೆಯುವ ಬಗ್ಗೆ ಯೋಚನೆ ಮಾಡಲಾಗಿದೆ. ಹೀಗಾಗಿ ಐದಾರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕೊನೇ ಗಳಿಗೆಯಲ್ಲಿ ಘೋಷಣೆ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್‌ ಬಂದಿದೆ.

Exit mobile version