Site icon Vistara News

Lok Sabha Election 2024: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ? ಇಂದು ಅಥವಾ ನಾಳೆ ಘೋಷಣೆ!

Lok Sabha Election 2024 Janardhana Reddy party merge with BJP soon

ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ರಾಜಕೀಯ ಪಕ್ಷಗಳ ತಯಾರಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಹಲವು ಕಾರಣಗಳಿಂದ ಬಿಜೆಪಿಯಿಂದ ದೂರವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Party) ಕಟ್ಟಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಅವರು ಸೋಮವಾರ (ಮಾ. 25) ಬಿಜೆಪಿ (BJP Karnataka) ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸಂಬಂಧ ಅವರು ಭಾನುವಾರ (ಮಾ. 24) ಕೆಆರ್‌ಪಿಪಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದು, ಅಲ್ಲಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಅಮಿತ್‌ ಶಾ (Amit Shah) ಭೇಟಿ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಬೆಂಗಳೂರಿನ ತಮ್ಮ ಪಾರಿಜಾತ ನಿವಾಸದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಕೆಆರ್‌ಪಿಪಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದಿರುವ ಜನಾರ್ದನ ರೆಡ್ಡಿ, ಸಭೆಯಲ್ಲಿ ಬಿಜೆಪಿ ಸೇರ್ಪಡೆ ಅಥವಾ ಲೋಕಸಭೆ ಚುನಾವಣೆಗೆ (Lok Sabha Election 2024) ಬೆಂಬಲ ಘೋಷಿಸುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ಒಂದು ಹಂತದಲ್ಲಿ ಅವರು ನಿರ್ಧಾರ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: HD Kumaraswamy: ಹಾರ್ಟ್‌ ಆಪರೇಷನ್‌ ಬಳಿಕ ಎಚ್‌ಡಿಕೆ ಮೊದಲ ಮಾತು; ಮಂಡ್ಯ, ಸಿಎಂ ಬಗ್ಗೆ ಹೇಳಿದ್ದೇನು?

ಒಂದು ವೇಳೆ ಅವರು ಬಿಜೆಪಿ ಸೇರುವುದಾದರೆ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಲಿದ್ದಾರೆ. ಬಹುತೇಕ ನಾಳೆ (ಸೋಮವಾರ) ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ.

ಸೇರ್ಪಡೆ ದಿನಾಂಕ ಫಿಕ್ಸ್‌ ಆಗಿಲ್ಲವೇ?

ಜನಾರ್ದನ ರೆಡ್ಡಿ ಸೋಮವಾರ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಗೆ ಪ್ಲ್ಯಾನ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ಗ್ರಾಂಡ್‌ ಆಗಿ ರಿಎಂಟ್ರಿ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.

ರೆಡ್ಡಿ ಬಂದರೆ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಗೆ ಪ್ಲಸ್‌

ಒಂದು ವೇಳೆ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾದರೆ, ಇಲ್ಲವೇ ಬಾಹ್ಯ ಬೆಂಬಲವನ್ನು ನೀಡಿದರೂ ಅದು ಬಿಜೆಪಿಗೆ ಪ್ಲಸ್‌ ಆಗಲಿದೆ. ಕಾರಣ, ಅವರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಳ್ಳೆಯ ಹಿಡಿತವಿದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕೆಆರ್‌ಪಿಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದರು. ಒಂದು ವೇಳೆ ಅವರು ಬಿಜೆಪಿಗೆ ಜತೆಯಾದರೆ ಇದರಿಂದ ಸುತ್ತಮುತ್ತಲ ಕೆಲವು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಅಮಿತ್‌ ಶಾ ಭೇಟಿ ಮಾಡಿದ್ದ ರೆಡ್ಡಿ

ಇದೇ ಮಾರ್ಚ್‌ 14ರಂದು ಗೃಹ ಸಚಿವ ಅಮಿತ್‌ ಶಾ ಅವರನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ ಮಾಡಿದ್ದರು. ಇದು ಕುತೂಹಲಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ಈಗ ಇದಕ್ಕೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯನವರೇ ಇದೋ ನೋಡಿ ನಿಮ್ಮ ವೈಫಲ್ಯಗಳ ಪಟ್ಟಿ ಎಂದ ಬಿ.ವೈ. ವಿಜಯೇಂದ್ರ

ಭೇಟಿ ಬಗ್ಗೆ ಟ್ವೀಟ್‌ ಮಾಡಿದ್ದ ರೆಡ್ಡಿ

“ಭಾರತ ರಾಷ್ಟ್ರದ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಶಾ ಜಿಯವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು ನನಗೆ ಬಹಳ ಸಂತೋಷವನ್ನು ತಂದಿದೆ” ಎಂದು ಜನಾರ್ದನ ರೆಡ್ಡಿ ಅಂದು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಅಲ್ಲಿ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ಎಂದು ನಮೂದಿಸಿದ್ದರಿಂದ ಅವರು ಬಿಜೆಪಿ ಸೇರುತ್ತಾರೆಂಬ ಚರ್ಚೆಗಳು ರಾಜಕೀಯ ಪಡೆಸಾಲೆಗಳಲ್ಲಿ ಕೇಳಿಬಂದಿದ್ದವು.

ರೆಡ್ಡಿಯನ್ನು ಬಿಜೆಪಿ ದೂರ ಇಟ್ಟಿದ್ದು ಏಕೆ?

ಜನಾರ್ದನ ರೆಡ್ಡಿ ಅವರು ಬಿಜೆಪಿಯ ಹಳೇ ಕಲಿ. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಸಚಿವರಾಗಿದ್ದಾಗಲೇ ಜೈಲು ಸೇರಬೇಕಾದ ಪರಿಸ್ಥಿತಿ ಬಂದೊದಗಿತು. ಅಲ್ಲದೆ, ಅಕ್ರಮ ಗಣಿಗಾರಿಕೆ ‌(Illegal mining) ಪ್ರಕರಣದಲ್ಲಿ ವರ್ಷ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಅಲ್ಲದೆ, 2013ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಜನಾಭಿಪ್ರಾಯವನ್ನು ಸಂಗ್ರಹ ಮಾಡಲಾಗಿತ್ತು. ಆಗ ಸಿದ್ದರಾಮಯ್ಯ ಅವರು “ರಿಪಬ್ಲಿಕ್‌ ಆಫ್‌ ಬಳ್ಳಾರಿ” ಎಂದು ಕರೆದಿದ್ದಲ್ಲದೆ, ರೆಡ್ಡಿ ಸಹೋದರರ ವಿರುದ್ಧ ತೊಡೆ ತಟ್ಟಿದ್ದರು. ಬಳಿಕ ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಬಿಜೆಪಿ ಅವರನ್ನು ತುಸು ದೂರವೇ ಇಟ್ಟಿತ್ತು.

ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕೆಂಬ ಆಸೆ ಇತ್ತಾದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದರು. ಈ ಪಕ್ಷದಿಂದ ತಾವೊಬ್ಬರೇ ಗೆದ್ದರೂ ಹಲವು ಕಡೆ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತವನ್ನೇ ಕೊಟ್ಟಿತ್ತು. ಅಲ್ಲದೆ, ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೂ ರೆಡಿ ಬಿಜೆಪಿಯನ್ನು ಬೆಂಬಲಿಸಲು ತಯಾರಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಒಲವು ತೋರದ ಕಾರಣ ಅವರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದರು. ಆದರೆ, ಅದಾದ ಬಳಿಕ ಅಮಿತ್‌ ಶಾ ಅವರು ರೆಡ್ಡಿಯನ್ನು ಕರೆಸಿಕೊಂಡು ಮಾತನಾಡಿದ್ದರು.

ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಈಗ ಕಾಂಗ್ರೆಸ್‌ ದೂರುವ ಹಾಗೂ ಇಲ್ಲ!

ಒಂದು ವೇಳೆ ಜನಾರ್ದನ ರೆಡ್ಡಿ ಅವರು ಬಿಜೆಪಿಯನ್ನು ಬೆಂಬಲಿಸಿದರೆ, ಇಲ್ಲವೇ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿದರೂ ಸಹ ಕಾಂಗ್ರೆಸ್‌ ದೂರುವ ಅವಕಾಶವನ್ನು ಕೈಚೆಲ್ಲಿ ಕುಳಿತಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ರೆಡ್ಡಿ ಜೈಲಿನಿಂದ ಬಂದವರು, ಅಕ್ರಮ ಗಣಿಗಾರಿಕೆ ಆರೋಪ ಹೊತ್ತವರು. ಇಂಥವರನ್ನು ಬಿಜೆಪಿ ಪೋಷಿಸುತ್ತಿದೆ ಎಂದು ಈ ಹಿಂದೆ ಕಾಂಗ್ರೆಸ್‌ ಆರೋಪ ಮಾಡಿತ್ತು. ಆದರೆ, ಈಚೆಗೆ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಬೆಂಬಲವನ್ನು ಕಾಂಗ್ರೆಸ್‌ ಪಡೆದುಕೊಂಡಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ರೆಡ್ಡಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಬಳಿಕ ತಮ್ಮ ಬೆಂಬಲವನ್ನು ಕಾಂಗ್ರೆಸ್‌ಗೆ ನೀಡಿದ್ದರು. ಈಗ ಒಂದು ವೇಳೆ ರೆಡ್ಡಿ ಬಿಜೆಪಿಯನ್ನು ಬೆಂಬಲಿಸಿದರೂ, ಪಕ್ಷ ಸೇರ್ಪಡೆಗೊಂಡರೂ ಕಾಂಗ್ರೆಸ್‌ಗೆ ಆರೋಪ ಮಾಡಲು ವಿಷಯ ಇಲ್ಲದಂತಾಗುತ್ತದೆ ಎಂಬ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ ಎಂದೇ ಹೇಳಲಾಗುತ್ತಿದೆ.

Exit mobile version