Site icon Vistara News

Lok Sabha Election 2024: ಮೋದಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ: ಡಾ. ಸಿ.ಎನ್. ಮಂಜುನಾಥ್

Lok Sabha Election 2024 Pm Modi to bring about a historic change in medical field Dr CN Manjunath

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದ ಬಿಜೆಪಿ ಆಡಳಿತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಐತಿಹಾಸಿಕ ಬದಲಾವಣೆಗಳು ಆಗಿವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ವಿವರಿಸಿದರು. ಅಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆಲುವು ನಿಶ್ಚಿತ ಎಂದು ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ. ಸಿ.ಎನ್.‌ ಮಂಜುನಾಥ್, ಸ್ವಾತಂತ್ರ್ಯ ಬಂದಾಗ ಜೀವಿತಾವಧಿ (ಲೈಫ್ ಸ್ಪಾನ್) 37 ವರ್ಷ ಇದ್ದಿದ್ದು, ಈಗ ಸುಮಾರು 70 ವರ್ಷಕ್ಕೆ ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳಾಗಿವೆ. ಚಿಕಿತ್ಸಾ ವ್ಯವಸ್ಥೆ ಕೂಡ ಚೆನ್ನಾಗಿ ಮುಂದುವರಿಯುತ್ತಿದೆ ಎಂದು ವಿಶ್ಲೇಷಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಆಡಳಿತ ಆರಂಭಿಸುವ ಮೊದಲು ದೇಶದಲ್ಲಿ 5 ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ) ಇತ್ತು. ಇವತ್ತು 23 ಏಮ್ಸ್ ಇದೆ. ಭಾರತದಲ್ಲಿ ಹಾರ್ಟ್ ಅಟ್ಯಾಕ್, ಡಯಾಬಿಟಿಸ್, ಹೈ ಬ್ಲಡ್ ಪ್ರೆಶರ್, ಸ್ಟ್ರೋಕ್, ಕ್ಯಾನ್ಸರ್, ಸ್ಕ್ರೀನ್ ಅಡಿಕ್ಷನ್‍ನಂಥ ಲೈಫ್ ಸ್ಟೈಲ್ ಡಿಸೀಸ್ ಹೆಚ್ಚಾಗಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಈಗ ಹಾರ್ಟ್ ಅಟ್ಯಾಕ್‍ಗೆ ಸಿಲುಕುತ್ತಿದ್ದಾರೆ. ಹಾರ್ಟ್ ಅಟ್ಯಾಕ್ ತಡೆಯಲು ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಬಳಸುತ್ತಾರೆ. ಮೋದಿಯವರು ಆಡಳಿತಕ್ಕೆ ಬರುವ ಮೊದಲು ಸ್ಟೆಂಟ್ ಬೆಲೆ 1 ಲಕ್ಷ, 70 ಸಾವಿರ ರೂಪಾಯಿ ಇತ್ತು. ಅದನ್ನು ಈಗ 30 ಸಾವಿರ ರೂಪಾಯಿಗೆ ಇಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನರಿಗೆ ಹೃದಯಾಘಾತ ಆಗುತ್ತಿದೆ. ಹಾರ್ಟ್ ಅಟ್ಯಾಕ್ ಕೇವಲ ಶ್ರೀಮಂತರ ಕಾಯಿಲೆಯಲ್ಲ. ಅದು ಬಡವರ ಕಾಯಿಲೆಯೂ ಆಗಿದ್ದು, ಸ್ಟೆಂಟ್ ದರ ಇಳಿಸಿದ್ದರಿಂದ ಬಹಳಷ್ಟು ಜನರಿಗೆ ಪ್ರಯೋಜನ ಆಗಿದೆ. ನಮ್ಮ ದೇಶದಲ್ಲಿ 14 ಕೋಟಿ ಜನರು ಸಕ್ಕರೆ ಕಾಯಿಲೆಯಿಂದ (ಡಯಾಬಿಟಿಸ್) ಬಳಲುತ್ತಿದ್ದಾರೆ. ಇನ್ನೂ 14 ಕೋಟಿ ಜನರು ಡಯಾಬಿಟಿಸ್ (ಪ್ರಿ ಡಯಾಬಿಟಿಕ್) ಸನಿಹದಲ್ಲಿದ್ದಾರೆ ಎಂದು ಹೇಳಿದರು.

ಹೈ ಬಿಪಿ, ಡಯಾಬಿಟಿಸ್, ಹಾರ್ಟ್ ಅಟ್ಯಾಕ್ ಉಳ್ಳವರು ಜೀವಿತಾವಧಿಯಿಡಿ ಔಷಧಿ ತೆಗೆದುಕೊಳ್ಳಬೇಕು. ಈ ಕಾಯಿಲೆಗಳು ಬಡವರಲ್ಲೂ ಇವೆ. ಕೈಗೆಟಕುವ ದರದಲ್ಲಿ ಔಷಧಿ ಸಿಗಬೇಕೆಂಬ ದೃಷ್ಟಿಯಿಂದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಕರ್ನಾಟಕದಲ್ಲಿ 1120 ಜನೌಷಧಿ ಕೇಂದ್ರಗಳಿವೆ. 1 ಸಾವಿರ ದರದ ಔಷಧಿ 100ರಿಂದ 150 ರೂಪಾಯಿಗೆ ಸಿಗುತ್ತಿದೆ ಎಂದು ಡಾ. ಸಿ.ಎನ್.‌ ಮಂಜುನಾಥ್ ವಿವರಿಸಿದರು.

270 ಕೋಟಿ ವ್ಯಾಕ್ಸಿನ್ ಡೋಸ್ ಕೊಡಲಾಯಿತು

ಕೋವಿಡ್ ಬಿಕ್ಕಟ್ಟನ್ನು ಮೋದಿಯವರು ನಿಭಾಯಿಸಿದ ರೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಅಮೆರಿಕ, ಜಪಾನ್, ಚೀನಾ, ಯುರೋಪ್ ರಾಷ್ಟ್ರಗಳಿಗಿಂತ ಚೆನ್ನಾಗಿ ನಾವು ಕೋವಿಡ್ ನಿಭಾಯಿಸಿದ್ದೇವೆ. ರಾಷ್ಟ್ರೀಯ- ರಾಜ್ಯ ಟಾಸ್ಕ್ ಫೋರ್ಸ್ ತಂಡ ರಚಿಸಿ, ನಿರಂತರ ವರ್ಚುವಲ್ ಸಭೆಗಳನ್ನು ನಡೆಸಿ ಅವರು ಇದನ್ನು ನಿಭಾಯಿಸಿದರು ಎಂದು ವಿಶ್ಲೇಷಣೆ ಮಾಡಿದರು. 270 ಕೋಟಿ ವ್ಯಾಕ್ಸಿನ್ ಡೋಸ್ ಕೊಡಲಾಯಿತು ಎಂದು ಡಾ. ಸಿ.ಎನ್.‌ ಮಂಜುನಾಥ್ ಹೇಳಿದರು.

ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಕ್ರಮಗಳಿಂದ ವೆಂಟಿಲೇಟರ್ ಉತ್ಪಾದನೆ, ರೋಗಿಗಳ ಚಿಕಿತ್ಸೆಗೆ ಬೇಕಾದ ಆಮ್ಲಜನಕ ಉತ್ಪಾದನೆ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ. ಇವತ್ತು ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಐಸಿಯು ಬೆಡ್ ಲಭ್ಯವಿದೆ ಎಂದು ಡಾ. ಸಿ.ಎನ್.‌ ಮಂಜುನಾಥ್ ತಿಳಿಸಿದರು.‌

ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಏರಿಕೆ

ಬಿಪಿಎಲ್ ರೋಗಿಗಳಿಗೆ ನೆರವಾಗುವ ಉಚಿತ ಚಿಕಿತ್ಸೆ ಕೊಡುವ ಆಯುಷ್ಮಾನ್ ಭಾರತ್ ಸ್ಕೀಮಿನಿಂದ ಕರ್ನಾಟಕ ರಾಜ್ಯದಲ್ಲಿ ಕಳೆದ ಆರೇಳು ವರ್ಷಗಳಲ್ಲಿ 1.32 ಕೋಟಿ ಜನರು ಚಿಕಿತ್ಸೆ ಪಡೆದಿದ್ದಾರೆ. ಇದೊಂದು ಉತ್ತಮ ಯೋಜನೆಯಾಗಿದೆ. 2014ಕ್ಕಿಂತ ಮೊದಲು ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ಇತ್ತು. ಈಗ 780 ವೈದ್ಯಕೀಯ ಕಾಲೇಜುಗಳಿವೆ. ಎಂಬಿಬಿಎಸ್ ಸೀಟುಗಳ ಸಂಖ್ಯೆ 51 ಸಾವಿರದಿಂದ 1 ಲಕ್ಷ 20 ಸಾವಿರಕ್ಕೆ ಏರಿಕೆ ಕಂಡಿದೆ ಎಂದು ಡಾ. ಸಿ.ಎನ್.‌ ಮಂಜುನಾಥ್ ಮಾಹಿತಿ ನೀಡಿದರು.

ಇದನ್ನೂ ಓದಿ: Lok Sabha Election 2024: ಬರ ಪರಿಹಾರ ಕೊಡುವಂತೆ ಕೇಂದ್ರಕ್ಕೆ ಸೂಚನೆ ಕೊಡಿ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮೊರೆ

ತಾಲೂಕು ಆಸ್ಪತ್ರೆಗಳಲ್ಲಿ ಹಾರ್ಟ್‌ ಅಟ್ಯಾಕ್‌ಗೆ ಚಿಕಿತ್ಸೆ

ವೈದ್ಯ ಸ್ನಾತಕೋತ್ತರ ಸೀಟುಗಳ ಸಂಖ್ಯೆಯೂ 30 ಸಾವಿರದಿಂದ 95 ಸಾವಿರಕ್ಕೆ ಏರಿದೆ. ಎಲ್ಲ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಇರುವುದರಿಂದ ರೋಗಿಗಳಿಗೆ ಸಮರ್ಪಕ, ಸಕಾಲಿಕ ಚಿಕಿತ್ಸೆ ಸಿಗುತ್ತಿದೆ. ಇದು ಅತ್ಯಂತ ಪ್ರಮುಖವಾದುದು. ಕೇಂದ್ರ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್‍ನಡಿ ಹಾರ್ಟ್ ಅಟ್ಯಾಕ್ ಆದವರಿಗೆ ಗೋಲ್ಡನ್ ಅವರ್‌ನಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಡಾ. ಸಿ.ಎನ್.‌ ಮಂಜುನಾಥ್ ಹೇಳಿದರು.

ನ್ಯಾಚುರೋಪತಿ ಮತ್ತು ಯೋಗಕ್ಕೆ ಸಂಬಂಧಿಸಿದ ಆರೋಗ್ಯ ಟೂರಿಸಂ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ. ಇದಕ್ಕಾಗಿ ಭಾರತಕ್ಕೆ ಭೇಟಿ ಕೊಡುವ ವಿದೇಶಿಯರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಡಾ. ಸಿ.ಎನ್.‌ ಮಂಜುನಾಥ್ ತಿಳಿಸಿದರು.

ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಮುನಿರತ್ನ, ರಾಜ್ಯ ವಕ್ತಾರ ಅಶೋಕ್ ಗೌಡ ಮತ್ತಿತರ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Exit mobile version