Site icon Vistara News

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Lok Sabha Election 2024

Lok Sabha Election 2024

ಗಾಂಧಿನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾಣಿ (Nilesh Kumbhani) ಅವರ ನಾಮಪತ್ರ ತಿರಸ್ಕೃತಗೊಂಡು, ಎಲ್ಲ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಸೋಮವಾರ ಬಿಜೆಪಿಯ ಮುಖೇಶ್ ದಲಾಲ್ (Mukesh Dalad) ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚುನಾವಣೆಗೂ (Lok Sabha Election 2024) ಮುನ್ನವೇ ಬಿಜೆಪಿ ಒಂದು ಸೀಟನ್ನು ತನ್ನದಾಗಿಸಿಕೊಂಡಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪರೋಕ್ಷ ಕಾರಣರಾದ ನೀಲೇಶ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮುಖೇಶ್ ದಲಾಲ್ ಅವರನ್ನು ವಿಜೇತರೆಂದು ಘೋಷಿಸಿದ ಒಂದು ದಿನದ ಬಳಿಕ ಅಂದರೆ ಮಂಗಳವಾರ ಕಾಂಗ್ರೆಸ್‌ ಈ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಉದ್ದೇಶಪೂರ್ವಕವಾಗಿಯೇ ನಾಮಪತ್ರವನ್ನು ರದ್ದುಗೊಳಿಸಲಾಗಿದೆ ಎಂದು ಕೈ ಪಡೆ ನೀಲೇಶ್ ಕುಂಭಾಣಿ ವಿರುದ್ಧ ಆರೋಪ ಹೊರಿಸಿದೆ. ಅಲ್ಲದೆ ಅವರನ್ನು ʼದೇಶದ್ರೋಹಿʼ ಮತ್ತು ʼಪ್ರಜಾಪ್ರಭುತ್ವದ ಕೊಲೆಗಾರʼ ಎಂದು ಕರೆದಿದೆ. ನೀಲೇಶ್ ಕುಂಭಾಣಿ ಈ ವಾರ ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವೇನು?

ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ ತಿರಸ್ಕರಿಸಿದ್ದರು. ಅನುಮೋದಕರಾದ ರಮೇಶ್ ಪೋಲ್ರಾ ಅವರ ಮಾರಾಟ ಪತ್ರದ ಆಧಾರ ಮೇಲೆ, ಚಾಲನಾ ಪರವಾನಗಿಯ ಆಧಾರದ ಮೇಲೆ ಜಗದೀಶ್ ಸವಲಿಯಾ ಮತ್ತು ಅವರ ಪ್ಯಾನ್ ಕಾರ್ಡ್ ಆಧಾರದ ಮೇಲೆ ಧಮೇಲಿಯಾ ಅವರ ಸಹಿಗಳನ್ನು ಪರಿಶೀಲಿಸಿದರು. ಈ ವೇಳೆ ನಾಮನಿರ್ದೇಶನ ಪತ್ರದಲ್ಲಿನ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ದರ್ಶನಾ ಜರ್ದೋಶ್ ಬದಲಿಗೆ ಮುಕೇಶ್ ದಲಾಲ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಈ ಭದ್ರಕೋಟೆಯಲ್ಲಿ ಚುನಾವಣೆಗೆ ತಡೆ ಕೋರಿ ಕಾಂಗ್ರೆಸ್‌ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿತ್ತು. ಆದರೆ ನಂತರ ನಿಲೇಶ್ ಅವರೇ ಸ್ವತಃ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಚುನಾವಣೆಯ ಮೇಲೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪ್ರಭಾವ ಬೀರುತ್ತಿದ್ದು, ಇಲ್ಲಿ ಚುನಾವಣಾ ಪ್ರಕ್ರಿಯೆ ಮರು ಸ್ಥಾಪಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.

ಇದನ್ನೂ ಓದಿ: Lok Sabha Election 2024: ಬಿಜೆಪಿಗೆ ಸಿಕ್ಕಿತು ಮೊದಲ ಸೀಟು; ಗುಜರಾತ್‌ನ ಸೂರತ್‌ನಲ್ಲಿ ಪಕ್ಷದ ಅಭ್ಯರ್ಥಿ ಅವಿರೋಧ ಆಯ್ಕೆ!

ಇನ್ನು ಅವಿರೋಧವಾಗಿ ಆಯ್ಕೆಯಾದ ದಲಾಲ್ ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶುಭ ಕೋರಿದ್ದು, “ಅವಿರೋಧವಾಗಿ ಆಯ್ಕೆಯಾದ ಸೂರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುಖೇಶ್ ಭಾಯ್ ದಲಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಹೇಳಿದ್ದಾರೆ. ಇದು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ʼಐತಿಹಾಸಿಕ ವಿಜಯʼದ ಪ್ರಾರಂಭ ಎಂದು ಭೂಪೇಂದ್ರ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. “ಇದು ಗುಜರಾತ್‌ನ ಎಲ್ಲ 26 ಸ್ಥಾನಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸಲಿದೆ ಎನ್ನುದಕ್ಕೆ ಇದು ಸಾಕ್ಷಿʼʼ ಎಂದು ಗುಜರಾತ್ ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version