Site icon Vistara News

Raja Marga Column : ಬದುಕಿನ ಅಗ್ನಿ ಪರೀಕ್ಷೆಗಳೇ ನಮ್ಮನ್ನು ಸ್ಟ್ರಾಂಗ್‌ ಮಾಡೋ ಶಕ್ತಿಗಳು

Raja Marga Column Challeges in life

Raja Marga Column : ಎರಡು ದಶಕಗಳ ಹಿಂದೆ ಸ್ಟೈಲ್ ಕಿಂಗ್ ರಜನೀಕಾಂತ್ (Style King Rajnikanth) ಅವರ ತಮಿಳು ಸಿನಿಮಾ ‘ಬಾಬಾ’ (Baba Movie) ಬಿಡುಗಡೆ ಆಗಿತ್ತು. ರಜನಿಕಾಂತ್ ಅವರೇ ಕಥೆ ಬರೆದು ನಿರ್ಮಾಣ ಮಾಡಿದ ಸಿನಿಮಾ ಅದು. ರಜನಿ ಅವರ ಅಭಿಮಾನಿಗಳಿಗೆ ಏನೆಲ್ಲ ಬೇಕೋ ಅದೆಲ್ಲವೂ ಆ ಸಿನಿಮಾದಲ್ಲಿ ಇತ್ತು. ಆದರೆ ಅದು ಬಾಕ್ಸ್ ಆಫೀಸಿನಲ್ಲಿ ಸಂಪೂರ್ಣವಾಗಿ ಮುಗ್ಗರಿಸಿತು. ವಿತರಕರು ತುಂಬಾ ನಷ್ಟವನ್ನು ಅನುಭವಿಸಿದಾಗ ರಜನೀ ಅವರನ್ನೆಲ್ಲ ಮನೆಗೆ ಕರೆದು ಅವರಿಗಾದ ನಷ್ಟವನ್ನು ತುಂಬಿಸಿಕೊಟ್ಟರು. ಆರು ತಿಂಗಳು ಮನೆಯಲ್ಲಿ ಕೂತು ಆತ್ಮಾವಲೋಕನ ಮಾಡಿದರು. ಆ ಸೋಲಿನಿಂದ ಅವರು ಕಲಿತ ಜೀವನದ ಪಾಠ ಎಂದರೆ ಮುಂದೆ ಯಾವತ್ತೂ ಅವರು ಸಿನಿಮಾ ನಿರ್ಮಾಣ ಮಾಡಲು ಹೋಗಲೇ ಇಲ್ಲ! ಅಭಿನಯ ಮಾತ್ರ ನನ್ನ ಫೀಲ್ಡ್ ಎಂದು ಅರ್ಥ ಮಾಡಿಕೊಂಡರು.

ಮುಂದೆ ಶಿವಾಜಿಯಿಂದ ಆರಂಭ ಮಾಡಿ ಮೊನ್ನೆಯ ಜೈಲರ್ ವರೆಗೆ ಅವರ ಎಲ್ಲ ಸಿನಿಮಾಗಳು ಗೆಲ್ಲುತ್ತಾ ಹೋದವು. ಕೇವಲ ಒಂದು ಸೋಲು ಅವರ ಪ್ರತಿಭೆ, ಸಾಮರ್ಥ್ಯಗಳನ್ನು ಬರಿದು ಮಾಡಲಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.

Raja Marga Column : ಎಲ್ಲಿ ಬೀಳುತ್ತೇವೋ ಅಲ್ಲಿಯೇ ಏಳಬೇಕು ಎನ್ನುತ್ತಾರೆ ರವಿಚಂದ್ರನ್

ಕನ್ನಡ ನಟ, ನಿರ್ಮಾಪಕ ರವಿಚಂದ್ರನ್ (Actor Ravichandran) ತನ್ನ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಕೋಟಿ ಕೋಟಿ ದುಡ್ಡು ಹಾಕಿ ‘ಶಾಂತಿ ಕ್ರಾಂತಿ’ ಎಂಬ ಸಿನಿಮಾ ನಿರ್ಮಾಣ ಮಾಡಿದರು. ಅದು ಸೋತು ಸುಣ್ಣವಾಯಿತು. ಬೇರೆ ಯಾರಾದರೂ ಸಿನಿಮಾ ಸಹವಾಸ ಬೇಡ ಎಂದು ಓಡಿ ಹೋಗುವ ಪ್ರಸಂಗ ಇತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಾಳ್ಮೆ ಕಳೆದುಕೊಳ್ಳಲಿಲ್ಲ.

ಅದೇ ವರ್ಷದಲ್ಲಿ ಬಂದ ‘ರಾಮಾಚಾರಿ ‘ ಅವರಿಗಾದ ನಷ್ಟವನ್ನು ತುಂಬಿಕೊಟ್ಟಿತ್ತು. ಮುಂದೆ ಕೂಡ ‘ಏಕಾಂಗಿ’ ಎಂಬ ಅಪರೂಪದ ಸಿನಿಮಾ ಮಾಡಿ ಮತ್ತೆ ಕೈ ಖಾಲಿ ಮಾಡಿ ಕೂತರು. ಆದರೆ ಸುಮ್ಮನೆ ಕೂರುವ ಜಾಯಮಾನ ಅವರದ್ದು ಅಲ್ಲವೇ ಅಲ್ಲ! ಇಲ್ಲಿ ಕಳೆದುಕೊಂಡದ್ದನ್ನು ಇಲ್ಲಿಯೇ ಹಿಂದೆ ಪಡೆಯಬೇಕು ಎನ್ನುತ್ತಾರೆ ಅವರು.

ಡಾಕ್ಟರ್ ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿಕೊಂಡು ಕಾಡಿನಲ್ಲಿ 108 ದಿನ ಬಂಧಿಸಿಟ್ಟ ಕರಾಳ ದಿನಗಳನ್ನು ನೆನಪು ಮಾಡಿಕೊಳ್ಳಿ. ಆಗ ಒಂದು ಕಡೆ ಕಾಲಿನ ಮೊಣಗಂಟು ನೋವು, ಇನ್ನೊಂದೆಡೆ ನಿಯಂತ್ರಣ ತಪ್ಪಿದ ಡಯಾಬಿಟಿಸ್ ಅವರನ್ನು ಹೈರಾಣ ಮಾಡಿದರೂ ಆ ಮಹಾನ್ ನಟ ತನ್ನ ಅಂತಃಸತ್ವವನ್ನು ಕಳೆದುಕೊಳ್ಳಲಿಲ್ಲ ಅನ್ನೋದು ಅಷ್ಟೇ ಅದ್ಭುತ.

Raja Marga Column : ಸಚಿನ್ ಬದುಕಿನಲ್ಲಿಯೂ ಹಲವು ಪರೀಕ್ಷೆಗಳು ಬಂದಿದ್ದವು

ಸಚಿನ್ ತೆಂಡೂಲ್ಕರ್ (Sachin tendulkar) ಅವರ ಕ್ರಿಕೆಟ್ ಬದುಕಿನಲ್ಲಿ ತೀವ್ರವಾಗಿ ಕಾಡಿದ ಟೆನ್ನಿಸ್ ಎಲ್ಬೋ ಕಾಯಿಲೆ ನೆನಪು ಮಾಡಿಕೊಳ್ಳಿ. ಒಂದು ಬ್ಯಾಟ್ ಎತ್ತಲೂ ಆಗದ ಸ್ಥಿತಿ ಅದು. ಸಚಿನ್ ಆ ಸವಾಲನ್ನು ಗೆದ್ದದ್ದು ಗ್ರೇಟ್ ಅಲ್ವಾ. ಮಹಾನ್ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಮೇಲೆ ಕೂಡ ಬಂದಿತ್ತು ಬಾಲ್ ಟ್ಯಾಂಪರಿಂಗ್ ಆರೋಪ! ಅದನ್ನು ಅವರು ಗೆದ್ದಿರುವ ರೀತಿ ಎಷ್ಟೊಂದು ಗ್ರೇಟ್ ಅಲ್ವಾ?

ಅಮಿತಾಬ್ ತನ್ನ ಮೊದಲ ಏಳು ಸಿನಿಮಾಗಳು ಸತತವಾಗಿ ಸೋತಾಗ, ಕಮಲಹಾಸನ್ ತನ್ನ ಮೊದಲ ಎಂಟು ಸಿನಿಮಾಗಳು ಸೋತಾಗ ಸಿನೆಮಾ ರಂಗವನ್ನು ಬಿಟ್ಟು ಹೋಗಿದ್ದರೆ ನಮಗೆ ಇಂದು ಆ ಲೆಜೆಂಡ್ ನಟರು ಸಿಗ್ತಾ ಇದ್ದರಾ? ಯೋಚನೆ ಮಾಡಿ.

ಇದನ್ನೂ ಓದಿ: Raja Marga Column : ಮರೆಯಾದ ಗೋಲ್ಡನ್ ವಾಯ್ಸ್ : ಬಿನಾಕಾ ಗೀತಮಾಲಾದ ಅಮೀನ್ ಸಯಾನಿ

ಆ ಸಂದರ್ಭದಲ್ಲಿ ನಿಮ್ಮವರೂ ನಿಮ್ಮವರಾಗಿರುವುದಿಲ್ಲ!

ಆ ಅಗ್ನಿಪರೀಕ್ಷೆಗಳು ಯಾರ ಬದುಕಿನಲ್ಲಿಯೂ ತಪ್ಪಿದ್ದು ಇಲ್ಲ. ದೇವರಾದ ಶ್ರೀರಾಮನ ಬದುಕಿನಲ್ಲಿಯೂ ಹಲವು
ಅಗ್ನಿಪರೀಕ್ಷೆಗಳು ಬಂದದ್ದು ಇವೆ. ಆಗ ರಾಮ ದೇವರು ಅವುಗಳನ್ನು ಹೇಗೆ ಎದುರಿಸಿದರು ಅನ್ನುವುದನ್ನು ಸ್ವಲ್ಪ ಗಮನಿಸಿ. ಅಪವಾದಗಳು, ಮಾನಸಿಕ ತುಮುಲಗಳು ಬಂದಾಗ ಅವುಗಳನ್ನು ನಾವು ಹೇಗೆ ಗೆಲ್ಲಬೇಕು ಎಂದು ಯೋಚಿಸಿ. ಆಗ ನಿಮಗೆ ತುಂಬಾ ನೋವು ಕೊಡುವ ಸಂಗತಿ ಎಂದರೆ ನಮ್ಮವರೂ ನಮ್ಮವರಾಗಿ ಇರುವುದಿಲ್ಲ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನುವ ಗೊಂದಲ ನಮ್ಮನ್ನು ನೋವಿಗೆ ದೂಡುತ್ತದೆ. ಎಷ್ಟೋ ಬಾರಿ ನೀವು ಒಬ್ಬಂಟಿ ಎಂದು ಕೂಡ ನಿಮಗೆ ಅನ್ನಿಸಬಹುದು. ಆಗ ಭಾವನಾತ್ಮಕ ನಿರ್ಧಾರಗಳಿಗಿಂತ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ನೀವು ಗೆಲ್ಲುತ್ತೀರಿ.

ಆಗ ಒಂದೆಡೆ ಕೂತು ಆತ್ಮಾವಲೋಕನ ಮಾಡಿದರೆ ಅಥವಾ ಒಳ್ಳೆಯ ವ್ಯಕ್ತಿಗಳಿಂದ ಸಲಹೆಗಳನ್ನು ತೆಗೆದುಕೊಂಡು ಮುಂದುವರೆದರೆ ನೀವು ಬೌನ್ಸ್ ಬ್ಯಾಕ್ ಮಾಡುವುದು ಖಂಡಿತ. ನಿಮ್ಮೊಳಗಿನ ಗೆಳೆಯ (ಆತ್ಮಸಾಕ್ಷಿ) ಸ್ಟ್ರಾಂಗ್ ಆಗಿದ್ದರೆ ನೀವು ಒಬ್ಬಂಟಿ ಆಗುವುದೇ ಇಲ್ಲ.

ಕೊನೆಗೂ ಗೆಲ್ಲುವುದು ತಾಳ್ಮೆ, ತಾಳ್ಮೆ ಮತ್ತು ತಾಳ್ಮೆ ಮಾತ್ರ

ಅಗ್ನಿಪರೀಕ್ಷೆ ಗೆದ್ದು ಬೌನ್ಸ್ ಬ್ಯಾಕ್ ಮಾಡಿ ಬಂದ ನಂತರ ನೀವು ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿರುತ್ತೀರಿ. ಇನ್ನೂ ಹೆಚ್ಚು ಮಂದಿಯ ಪ್ರೀತಿ ಪಡೆಯುತ್ತೀರಿ. ನಿಮ್ಮಿಂದ ದೂರ ಆದವರು ಅವರಾಗಿ ನಿಮ್ಮ ಹತ್ತಿರ ಬರುತ್ತಾರೆ. ನಿಮ್ಮ ನೋವುಗಳು ಬೇಗ ಮರೆತು ಹೋಗುತ್ತವೆ.

ಆದರೆ ಅಗ್ನಿಪರೀಕ್ಷೆಗಳು ಬಂದಾಗ ನೀವು ನಿಮ್ಮ ಅಂತಃಸತ್ವ ಮತ್ತು ನಂಬಿಕೆಗಳನ್ನು ಕಳೆದುಕೊಳ್ಳಬಾರದು ಅಷ್ಟೇ! ನಿಮ್ಮ ನಗು ನಿಮ್ಮ ಶತ್ರುಗಳ ಎದೆ ನಡುಗಿಸಬೇಕು ಆಷ್ಟೇ! ಒಳ್ಳೆದಾಗಲಿ ನಿಮಗೆ.

Exit mobile version