Site icon Vistara News

Raja Marga Column : ಏಷ್ಯಾ ಕಪ್‌ ಗೆದ್ದಾಯ್ತು, ಭಾರತ ತಂಡ ವಿಶ್ವಕಪ್‌ ಕೂಡಾ ಗೆಲ್ಲಬಹುದೇ? ಸವಾಲು ಮತ್ತು ಸಾಧ್ಯತೆ ಇಲ್ಲಿದೆ

Raja Maga Mohammad Siraj

ಸೆ. 17ರಂದು ನಡೆದ ಫೈನಲ್‌ ಪಂದ್ಯದಲ್ಲಿ (Asia Cup cricket final) ಭಾರತ ಏಷ್ಯಾ ಕಪ್‌ ಗೆದ್ದೇ ಗೆಲ್ಲುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಇಷ್ಟೊಂದು ಸುಲಭದಲ್ಲಿ ನಮ್ಮ ಹುಡುಗರು ಗೆಲ್ಲುತ್ತಾರೆ (India Champion in Asia cup 2023) ಅನ್ನೋದು ಗೊತ್ತಿರಲಿಲ್ಲ! ಐವತ್ತು ಓವರ್‌ಗಳ ಪಂದ್ಯವಾದರೂ 15 ಓವರ್‌ಗೆ ಶ್ರೀಲಂಕಾವನ್ನು ನಿರ್ಬಂಧಿಸುತ್ತಾರೆ, 10 ವಿಕೆಟ್‌ಗಳಿಂದ ಗೆಲ್ಲುತ್ತಾರೆ ಎನ್ನುವ ಕಲ್ಪನೆಯನ್ನೂ (Raja Marga Column) ಯಾರೂ ಮಾಡಿರಲಿಲ್ಲ. ಇದಕ್ಕೆ ಮೂಲ ಕಾರಣ ಮೊಹಮ್ಮದ್ ಸಿರಾಜ್ – ದ ಫೈಟಿಂಗ್ ಸ್ಪಿರಿಟ್!
(Mohammad Siraj-The fighting spirit!)

ಹೌದು, ಭಾನುವಾರದ ವಿಜಯದ ಶ್ರೇಯಸ್ಸು ಖಂಡಿತವಾಗಿಯೂ ಈ ಹುಡುಗನಿಗೆ ದೊರೆಯಬೇಕು. ಹೈದರಾಬಾದಿನ ಒಬ್ಬ ಬಡ ರಿಕ್ಷಾ ಡ್ರೈವರ್ ಮಗನಾಗಿ ಕಷ್ಟದ ಬಾಲ್ಯವನ್ನು ಕಳೆದ ಆತ RCB ತಂಡದಲ್ಲಿ ಐಪಿಎಲ್ ಆಡುತ್ತಾ ಹೋರಾಟದ ಮೂಲಕ ತನ್ನ ಕ್ರಿಕೆಟ್ ಬದುಕನ್ನು ಕಟ್ಟಿಕೊಂಡವನು. 7-1-21-6 ಒಂದು ಘಾತಕವಾದ ಸ್ಪೆಲ್. ಅದು ಏಷಿಯಾ ಕಪ್ ಫೈನಲಿನಲ್ಲಿ ಬಂತು ಎನ್ನುವಾಗ ಆತನ ಬಗ್ಗೆ ಹೆಮ್ಮೆ ಮೂಡುತ್ತದೆ. ಮುಂದಿನ ವಿಶ್ವಕಪ್ ಕೂಟದಲ್ಲಿ ಕೂಡ ಬುಮ್ರ ಮತ್ತು ಸಿರಾಜ್ ಅವರ ಆರಂಭಿಕ ಸ್ಪೆಲ್ ಭಾರತಕ್ಕೆ ನಿರ್ಣಾಯಕ ಆಗಬಹುದು.

ಈ ವರ್ಷ ಭಾರತದಲ್ಲಿ ಕ್ರಿಕೆಟ್ ದೀಪಾವಳಿ

ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಜೋರು. ಅದೇ ಹೊತ್ತಿಗೆ ಈ ಬಾರಿ ಭಾರತದಲ್ಲಿ 13ನೆಯ ವಿಶ್ವಕಪ್ ಕ್ರಿಕೆಟ್ ಕೂಟವು ತೆರೆದುಕೊಳ್ಳುತ್ತಿದೆ. ಈ ಬಾರಿ ಆತಿಥ್ಯ ಕೂಡ ಭಾರತ ಅನ್ನೋದು ನಮಗೆ ಹೆಮ್ಮೆ. ಭಾರತ ಆತಿಥ್ಯ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆದರೂ ಕ್ರಿಕೆಟ್ ನಮ್ಮಲ್ಲಿ ಒಂದು ಧರ್ಮ ಎಂದೇ ಕರೆಯಲ್ಪಡುತ್ತದೆ. ಇಷ್ಟೊಂದು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ! ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಿನಿಮಾ ಸ್ಟಾರ್‌ಗಳಿಗಿಂತ ಹೆಚ್ಚು ಜನಪ್ರಿಯರು. ಚುಟುಕು ಕ್ರಿಕೆಟ್ ಪಂದ್ಯಗಳು ಎಂದಾಗ ಭಾರತದ ಕ್ರಿಕೆಟ್ ಗ್ರೌಂಡುಗಳು ತುಂಬಿ ತುಳುಕುವುದು ಖಂಡಿತ. ಅದರಲ್ಲಿಯೂ ಭಾರತ ಪಾಕ್ ಪಂದ್ಯವು ನಡೆಯುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ (ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ, ಅಹ್ಮದಾಬಾದ್) ಯಾವ ರೀತಿ ತುಂಬಿ ನಿಲ್ಲಬಹುದು ಎಂದು ಊಹೆ ಮಾಡಲು ನಮಗೆ ಕಷ್ಟ ಆಗಬಹುದು. ಇಂದು ಎಲ್ಲ ಕ್ರಿಕೆಟ್ ತಂಡಗಳಲ್ಲಿಯೂ ಹೊಡಿ ಬಡಿ ಬ್ಯಾಟರ್‌ಗಳು ಇರುವ ಕಾರಣ ಈ ಬಾರಿಯ ಕ್ರಿಕೆಟ್ ದೀಪಾವಳಿ ಇನ್ನೂ ಹೆಚ್ಚು ಸದ್ದು ಮಾಡಬಹುದು.

ಈ ಬಾರಿ ಭಾರತ ತಂಡ ಹೇಗೆ?

1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಈಗಾಗಲೇ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕಪ್ತಾನರು. ಈ ಬಾರಿ ರೋಹಿತ್ ಶರ್ಮಾ ಕಪ್ತಾನ ಆಗಿ ಒಳ್ಳೆಯ ನಾಯಕತ್ವದ ಅರ್ಹತೆ ಹೊಂದಿದ್ದಾರೆ. ಮುಂಬೈ ತಂಡಕ್ಕೆ ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಕಪ್ತಾನ ಅವರು. ಆದ್ದರಿಂದ ಭಾರತಕ್ಕೆ ನಾಯಕತ್ವದ ಸ್ಟ್ರಾಂಗ್ ಬೇಸ್ ಇದೆ. ಭಾರತದ ಅತ್ಯುತ್ತಮ ಆಟಗಾರ ರಾಹುಲ್ ದ್ರಾವಿಡ್ ಅವರ ಅಪಾರ ಅನುಭವ ಮತ್ತು ಕ್ರಿಕೆಟ್ ಪಾಠಗಳು ಭಾರತಕ್ಕೆ ವರವಾಗಿ ಬರುತ್ತವೆ. ಕೋಚಿಂಗ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ.

ಉತ್ತಮ ಸಮತೋಲನದ ತಂಡ

ಆರಂಭಿಕ ಆಟಗಾರರಾಗಿ ರೋಹಿತ್ ಮತ್ತು ಶುಭ್‌ಮನ್‌ ಗಿಲ್ ಏಷ್ಯಾ ಕಪ್ ಪಂದ್ಯದಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಗಿಲ್ ಅವರ ಸರಾಸರಿ 65ರ ಮೇಲೆ ದಾಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಿಲ್ ಸಿಡಿಸಿದ ಶತಕ ತುಂಬಾನೇ ಅತ್ಯುತ್ತಮ ಆಗಿತ್ತು. ಪಾಕ್ ವಿರುದ್ಧ ಕೊಹ್ಲಿ ಮತ್ತು ರಾಹುಲ್ ಹೊಡೆದ ಶತಕಗಳು ಹೆಚ್ಚು ಕಾಲ ಸ್ಮರಣೆಯಲ್ಲಿ ಉಳಿಯುವಂತದ್ದು.

ದೊಡ್ಡ ದೊಡ್ಡ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ನಿರೀಕ್ಷೆ ಮೀರಿ ಹಿಂದೆ ಮಿಂಚಿದ್ದಾರೆ. ಆದ್ದರಿಂದ ಅವರ ಫಾರ್ಮ್ ಬಗ್ಗೆ ತಲೆ ಹೆಚ್ಚು ಕೆಡಿಸುವ ಅಗತ್ಯ ಇಲ್ಲ.

ಮಿಡಲ್ ಆರ್ಡರ್ ಕೆ.ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ ಪಾಂಡ್ಯ ಅವರಿಂದ ಬಲಿಷ್ಠಗೊಂಡಿದೆ. ಏಷಿಯಾ ಕಪ್ ಪಂದ್ಯಗಳಲ್ಲಿ ರಾಹುಲ್ ಅವರ ಕೀಪಿಂಗ್ ಕ್ಲಿಕ್ ಆಗಿದೆ. ಸೂರ್ಯ ಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರು ಕೂಡ ಪ್ರತಿಭಾವಂತರು. ಅವರ ಮೇಲೆ ನಿರೀಕ್ಷೆ ಬೆಟ್ಟದಷ್ಟು ಇದೆ.

1983ರಲ್ಲಿ ವಿಶ್ವ ಕಪ್‌ ಗೆದ್ದ ಭಾರತ

ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಉತ್ತಮ ಕೊಡುಗೆ ಆಗಿ ಏಷ್ಯಾ ಕಪ್ಪಿನಲ್ಲಿ ಮಿಂಚಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಧಾಳಿ ಭಾರತೀಯ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ವಿಶ್ವದ ಎಲ್ಲ ಗ್ರೌಂಡ್‌ಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಶಾರ್ದೂಲ್ ಒಳ್ಳೆಯ ಆಲ್ರೌಂಡರ್ ಆಟಗಾರ. ಆತನ ಮೇಲೆ ಭರವಸೆ ಇಡಬಹುದು. ಹಾರ್ದಿಕ ಪಾಂಡ್ಯ ಬೌಲಿಂಗ್ ಕ್ಲಿಕ್ ಆದರೆ ಭಾರತಕ್ಕೆ ಗೆಲುವು ಸುಲಭ ಅನ್ನೋದು ಏಷಿಯಾ ಕಪ್ ಕೂಟದಲ್ಲಿ ಸಾಬೀತು ಆಗಿದೆ. ಭಾರತದ ಕ್ರಿಕೆಟ್ ತಂಡ ಈ ಬಾರಿ ಹಿಂದಿಗಿಂತ ಹೆಚ್ಚು ಸಮತೋಲನ ಹೊಂದಿದೆ. ವಿರಾಟ್ ಮತ್ತು ರೋಹಿತ್ ನಿಂತು ಆಡಿದರೆ ಎಷ್ಟು ದೊಡ್ಡ ಮೊತ್ತದ ಚೇಸಿಂಗ್ ಕೂಡ ಕಷ್ಟ ಅಲ್ಲ.

2011ರಲ್ಲಿ ಕಪ್‌ ಗೆದ್ದ ಭಾರತ

ಭಾರಕ್ಕೆ ಇರುವ ಸವಾಲುಗಳು

1) ನಿರ್ಣಾಯಕ ಪಂದ್ಯಗಳಲ್ಲಿ ಸೂರ್ಯ ಕುಮಾರ್‌ ಯಾದವ್, ಶ್ರೇಯಸ್ ಅಯ್ಯರ್ ಕೈ ಕೊಡುತ್ತಾರೆ.

2) ಅತಿಯಾಗಿ ಎಕ್ಸ್‌ಪರಿಮೆಂಟ್ ಮಾಡುವ ರಾಹುಲ್ ದ್ರಾವಿಡ್. ಏಷ್ಯಾ ಕಪ್ ಕೂಟದಲ್ಲಿ ಬಾಂಗ್ಲಾ ವಿರುದ್ಧ ಸೋಲಲು ಇದು ಕಾರಣ.

3) ಭಾರತದ ಫೀಲ್ಡಿಂಗ್ ನೇಪಾಳ ವಿರುದ್ಧದ ಪಂದ್ಯದಲ್ಲಿ ಕೈ ಕೊಟ್ಟಿತ್ತು. ಫೀಲ್ಡಿಂಗ್ ಇನ್ನೂ ಬಿಗಿ ಆಗಬೇಕು.

4) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್ ಹೆಚ್ಚು ಅಪಾಯಕಾರಿ ತಂಡಗಳು. ಅವುಗಳ ಎದುರು ಭಾರತ ಇತ್ತೀಚೆಗೆ ಹೆಚ್ಚು ಪಂದ್ಯ ಆಡಿಲ್ಲ. ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಟೀಮ್ ಈ ಬಾರಿ ಕೂಡ ಹೆಚ್ಚು ಸ್ಟ್ರಾಂಗ್ ಇದೆ. ಚಾಂಪಿಯನ್ ತಂಡ ಇಂಗ್ಲೆಂಡ್ ಈ ಬಾರಿ ಮಿರಾಕಲ್ ಮಾಡಬಹುದು.

5) ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅವರ ಫಿಟ್ನೆಸ್ ಬಗ್ಗೆ ಗೊಂದಲ ಇದೆ.

6) ಐವತ್ತು ಓವರ್ ಆಟ ಆದ ಕಾರಣ ನಿಂತು ಆಡುವ ಆಟ ಬೇಕು. ಐಪಿಎಲ್ ಕೂಟದ ಜೋಶ್‌ನಲ್ಲಿ ಹೋದರೆ ಅಪಾಯ ಹೆಚ್ಚು.

ಇದುವರೆಗೆ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಮೂರನೇ ಬಾರಿಗೆ ಟ್ರೋಫಿ ಎತ್ತಿ ಮಿಂಚಲಿ ಎನ್ನುವುದು ಶತಕೋಟಿ ಭಾರತೀಯರ ಹಾರೈಕೆ. ಗೆದ್ದು ಬಾ ಭಾರತ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕ್ರಿಕೆಟ್ ಮತ್ತು ಚೆಸ್‌ನಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಹಾಗೆಯೇ ಬದುಕಿನಲ್ಲಿ ಕೂಡಾ!

Exit mobile version