Site icon Vistara News

Raja Marga Column : ಕೆಲವು ಪ್ರತಿಭಾವಂತರು ಬದುಕಿನಲ್ಲಿ ಗೆಲ್ಲುವುದಿಲ್ಲ; ಯಾಕೆ? ಇಲ್ಲಿದೆ ಕಾರಣ

Titanic Movie scene

ಎಷ್ಟೋ ಜನ ಅದ್ಭುತವಾದ ಪ್ರತಿಭಾವಂತರು ತಮ್ಮ ಜೀವನದಲ್ಲಿ ಸೋಲಲು ಮುಖ್ಯ ಕಾರಣ ಎಂದರೆ ವೃತ್ತಿಪರತೆಯ ಕೊರತೆ ಎಂದು ನನ್ನ ಭಾವನೆ. ನಿಮ್ಮ ವೃತ್ತಿಪರತೆ (Profesionalism) ಅನ್ನುವುದು ನಿಮ್ಮ ಸಾಧನೆಯ ದಾರಿಯಲ್ಲಿ ಒಂದು ಶಕ್ತಿಶಾಲಿಯಾದ ಇಂಧನ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಒಂದಿಷ್ಟು ನಿದರ್ಶನಗಳ ಮೂಲಕ ನಿಮಗೆ ವಿವರಣೆ ಕೊಡುತ್ತಾ ಹೋಗುತ್ತೇನೆ (Raja Marga Column).

1) ಟೈಟಾನಿಕ್ ಹಡಗು ಮತ್ತು ಅದರಲ್ಲಿ ಅರಳಿದ ಪ್ರೀತಿ

ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ 1997ರ ಟೈಟಾನಿಕ್ ಸಿನಿಮಾ ನೀವು ನೋಡಿದ್ದೀರಿ ಎಂದಾದರೆ ಆ ದೃಶ್ಯವನ್ನು ನೀವು ಮರೆಯಲು ಸಾಧ್ಯವೇ ಇಲ್ಲ! ಹಡಗಿನಲ್ಲಿ ಜೊತೆಯಾಗಿ ಪ್ರಯಾಣಿಸುವಾಗ ಹುಟ್ಟಿದ ಪ್ರೀತಿ ಆ ಯುವ ಪ್ರೇಮಿಗಳದ್ದು. ಆ ಹಂತದಲ್ಲಿ ಆ ಹುಡುಗ ಒಳ್ಳೆಯ ಚಿತ್ರಕಾರ ಎಂದು ಆ ಹುಡುಗಿಗೆ ತಿಳಿಯುತ್ತದೆ. ಆಕೆ ಒಂದು ವಿಚಿತ್ರವಾದ ಕೋರಿಕೆಯನ್ನು ಅವನ ಮುಂದೆ ಇಡುತ್ತಾಳೆ.

ತಾನು ಎಲ್ಲ ಬಟ್ಟೆ ಬಿಚ್ಚಿ ಒಂದು ವಜ್ರದ ಹಾರ ಮಾತ್ರ ಧರಿಸಿ ಮಲಗುತ್ತೇನೆ. ನೀನು ನನ್ನ ಒಂದು ಚಿತ್ರವನ್ನು ಬಿಡಿಸಬೇಕು ಎಂದು ವಿನಂತಿ ಮಾಡುತ್ತಾಳೆ. ಒಪ್ಪಿಕೊಂಡ ಹುಡುಗ ಪೇಪರ್ ಮತ್ತು ಪೆನ್ಸಿಲ್ ತೆಗೆದುಕೊಂಡು ಸಿದ್ಧನಾಗುತ್ತಾನೆ. ಆಕೆ ಆತನ ಮುಂದೆ ಪೂರ್ತಿ ಬೆತ್ತಲಾಗಿ ಮಲಗುತ್ತಾಳೆ.
ಈ ಸನ್ನಿವೇಶ ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಕೆಲವು ಅಚ್ಚರಿಯ ಸಂಗತಿಗಳು ತಿಳಿಯಬಹುದು.

Kambalahalli Movie

ತನ್ನ ಪ್ರೇಮ ದೇವತೆ ತನ್ನ ಮುಂದೆ ಬೆತ್ತಲಾಗಿ ಮಲಗಿದರೂ ಆ ಹುಡುಗ ಒಂದಿಷ್ಟೂ ವಿಚಲಿತನಾಗದೆ ತನ್ನ ಕಲೆಯಲ್ಲಿ ಮುಳುಗಿಬಿಡುತ್ತಾನೆ. ಅವಳೂ ಹಾಗೆಯೇ ಆತನ ಪ್ರೀತಿಯನ್ನು ತನ್ನ ಕಣ್ಣ ರೆಪ್ಪೆಯಲ್ಲಿ ಬಂಧಿಸಿ ಕಣ್ಣು ಮುಚ್ಚಿ ಮಲಗಿ ಬಿಡುತ್ತಾಳೆ. ಇಬ್ಬರೂ ಸಭ್ಯತೆಯ ಗೆರೆಯನ್ನು ದಾಟದೆ ತಮ್ಮ ಪ್ರೀತಿಯನ್ನು ಗೆಲ್ಲಿಸುತ್ತಾರೆ! ವೃತ್ತಿಪರತೆಯ ಅದ್ಭುತವಾದ ಉದಾಹರಣೆ ಇದು.

2) ಅನಿರುದ್ಧ ಮತ್ತು ಅರುಂಧತಿ ಎಂಬ ಅಣ್ಣ ತಂಗಿಯರು

ಬೆಂಗಳೂರಿನಲ್ಲಿ ನಾನು ಒಂದು ನಾಟಕ ನೋಡಲು ಕೂತಿದ್ದೆ. ಅದು ಒಂದು ಅದ್ಭುತ ಪ್ರೇಮಕಾವ್ಯ ನಾಟಕ. ಅದರಲ್ಲಿ ಇಬ್ಬರು ಪ್ರೇಮಿಗಳ ಪಾತ್ರ ವಹಿಸಿದವರು ಸ್ವತಃ ಒಡಹುಟ್ಟಿದವರಾಗಿದ್ದ ಅನಿರುದ್ಧ (ವಿಷ್ಣು ಸರ್ ಅಳಿಯ) ಮತ್ತು ಆತನ ತಂಗಿ ಅರುಂಧತಿ. ಅಣ್ಣ ತಂಗಿಯರು ಉತ್ಕಟ ಪ್ರೇಮಿಗಳ ಪಾತ್ರ ವಹಿಸುವುದು ತುಂಬ ಕಷ್ಟ! ಬಾಲ್ಯದಿಂದ ಜೊತೆಯಾಗಿ ಬೆಳೆದವರು ಅವರು. ಅದು ಕೂಡ ಆ ನಾಟಕದಲ್ಲಿ ತುಂಬಾ ರೊಮ್ಯಾಂಟಿಕ್ ಸನ್ನಿವೇಶಗಳು ಇದ್ದವು. ಆದರೂ ತಮ್ಮ ಪಾತ್ರಗಳನ್ನು ಜೀವಂತವಾಗಿ ಅಭಿನಯಿಸಿದ ಅನಿರುದ್ಧ ಮತ್ತು ಅರುಂಧತಿ ಅವರಿಗೆ ನಮ್ಮ ಅಭಿನಂದನೆ ಇರಲಿ.

Kambalahalli Movie

3) ಸೋನು ನಿಗಮ್ ಎಂಬ ಗಾನ ಗಂಧರ್ವ

ಕರ್ನಾಟಕದ ಅತ್ಯಂತ ಜನಪ್ರಿಯ ಉತ್ಸವ ಆದ ಹಂಪಿ ಉತ್ಸವದಲ್ಲಿ ಒಂದು ವರ್ಷ ಸೋನು ನಿಗಮ್ ಅವರು ಹಾಡಲು ಆಮಂತ್ರಿತ ಆಗಿದ್ದರು. ಸಹಜವಾಗಿ ಲಕ್ಷ ಲಕ್ಷ ಜನರು ಸೇರಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ಸೋನು ನಿಗಂ ಇದ್ದ ಹೆಲಿಕಾಪ್ಟರ್ ಕೆಳಗೆ ಇಳಿಯಲೇ ಇಲ್ಲ. ದಟ್ಟವಾದ ಮೋಡಗಳ ನಡುವೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಸುಮಾರು ಅರ್ಧ ಘಂಟೆ ತಿರುಗಿತು. ಜನರಲ್ಲಿ ಆತಂಕ ಹೆಚ್ಚಿತ್ತು. ಸ್ವತಃ ಸೋನು ಬೆವತು ಹೋಗಿದ್ದರು. ಆ ಹಂತದಲ್ಲಿ ಯಾವ ದುರ್ಘಟನೆ ಕೂಡ ನಡೆಯಬಹುದಿತ್ತು.

Kambalahalli Movie

ಕೊನೆಗೂ ಹೆಲಿಕಾಪ್ಟರ್ ಇಳಿಯಿತು. ಅರ್ಧ ಘಂಟೆ ಸೋನು ನಿಗಮ್ ಒತ್ತಡದಲ್ಲಿ ಬೆಂದು ಹೋಗಿದ್ದರು. ನೇರವಾಗಿ ವೇದಿಕೆಯ ಹಿಂಭಾಗಕ್ಕೇ ಬಂದು ಪದ್ಮಾಸನದಲ್ಲಿ ಕುಳಿತು ಧ್ಯಾನಮಗ್ನ ಆಗಿಬಿಟ್ಟರು. ಕೆಲವೇ ನಿಮಿಷಗಳಲ್ಲಿ ಸೋನು ನಿಗಮ್ ನಗುನಗುತ್ತಾ ವೇದಿಕೆಯ ಮೇಲೆ ಬಂದರು. ಅವರು ಅನುಭವಿಸಿದ ಒತ್ತಡ, ಆತಂಕ ಎಲ್ಲವೂ ಮಾಯವಾಗಿತ್ತು! ಮುಂದೆ ಮೂರು ಘಂಟೆ ಹಂಪಿ ಭವ್ಯ ವೇದಿಕೆಯಲ್ಲಿ ಸೋನು ನಿಗಂ ಹಾಡಿದ್ದೇ ಹಾಡಿದ್ದು! ಜನಗಳು ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು! ಅದು ಸೋನು ನಿಗಮ್ ಅವರ ವೃತ್ತಿಪರತೆ.

4) ಶ್ರೇಯಾ ಘೋಷಾಲ್ ಎಂಬ ಸ್ವರ ದೇವತೆ!

ಬೆಂಗಳೂರು ಗಣೇಶನ ಉತ್ಸವದ ಒಂದು ಪೆಂಡಾಲಿನಲ್ಲಿ ಹಾಡಲು ಶ್ರೇಯಾ ಘೋಷಾಲ್ ಅವರಿಗೆ ಸಮಿತಿಯು ಆಮಂತ್ರಣ ನೀಡಿತ್ತು. ಶ್ರೇಯಾ ಘೋಷಾಲ್ ಒಪ್ಪಿದ್ದರು. ಆದರೆ ಸಂಘಟಕರ ಆತಂಕ ಬೇರೆಯೇ ಇತ್ತು. ಬೆಂಗಳೂರು ಆದ ಕಾರಣ ಕನ್ನಡ ಹಾಡುಗಳನ್ನು ಆಕೆ ಹಾಡಬೇಕು ಮತ್ತು ಹೆಚ್ಚು ಭಕ್ತಿಗೀತೆ ಹಾಡಲಿ ಎಂದು ಅವರು ಆಸೆ ಪಟ್ಟಿದ್ದರು. ಆದರೆ ಅದನ್ನು ಆಕೆಗೆ ತಲುಪಿಸುವುದು ಹೇಗೆ?

ಆದರೆ ಶ್ರೇಯಾ ಘೋಷಾಲ್ ಅವರ ಆಪ್ತ ಸಹಾಯಕರು ʻಭಯ ಪಡಬೇಡಿ. ಮ್ಯಾಡಮ್ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ!” ಎಂದರು.

Kambalahalli Movie

ಅಂದಿನ ಕಾರ್ಯಕ್ರಮಕ್ಕೆ ಶ್ರೇಯಾ ಘೋಷಾಲ್ ನಗು ತುಳುಕಿಸುತ್ತ ವೇದಿಕೆ ಹತ್ತಿದರು. ಸಂಘಟಕರಿಗೆ ಭಾರೀ ಆಶ್ಚರ್ಯ ಎಂದರೆ ಅಂದು ಶ್ರೇಯಾ ಘೋಷಾಲ್ ಹಾಡಿದ್ದು 90% ಕನ್ನಡದ ಹಾಡುಗಳನ್ನು ಮತ್ತು ಗಣಪತಿಯ ಹಾಡುಗಳನ್ನು ! ಪ್ರತಿಯೊಂದು ಕಾರ್ಯಕ್ರಮಕ್ಕೂ ಭಾರೀ ಸಿದ್ಧತೆಗಳನ್ನು ಮಾಡಿಕೊಂಡು ಶ್ರೇಯಾ ಬರುತ್ತಾರೆ ಅನ್ನುವುದೇ ಅಚ್ಚರಿಯ ಸಂಗತಿ! ಅಂದು ಅವರು ಸಾಕಷ್ಟು ಹೊಸ ಹಾಡುಗಳನ್ನು ಕಲಿತು ಬಂದಿದ್ದರು! ಯಾವ ವೇದಿಕೆಯಲ್ಲಿ ಯಾವ ಹಾಡುಗಳನ್ನು ಹಾಡಬೇಕು, ಯಾವ ಪ್ರೇಕ್ಷಕರಿಗೆ ಯಾವ ಹಾಡುಗಳನ್ನು ಹಾಡಬೇಕು ಎನ್ನುವುದನ್ನು ಆಕೆಯ ಮೂಲಕ ಕಲಿಯಬೇಕು. ಅದಕ್ಕೆ ಅವರನ್ನು ಲತಾ ಮಂಗೇಷ್ಕರ್ ಅವರು ತನ್ನ ಉತ್ತರಾಧಿಕಾರಿ ಎಂದು ಕರೆದದ್ದು!

5) ಪ್ರೇಮಾ, ದೇವರಾಜ್ ಮತ್ತು ಕಂಬಾಲಹಳ್ಳಿ ಸಿನೆಮಾ!

ಇಪ್ಪತ್ತು ವರ್ಷಗಳ ಹಿಂದೆ ಕಂಬಾಲ ಹಳ್ಳಿ ಎಂಬ ಕನ್ನಡ ಸಿನಿಮಾ ಬಂದಿತ್ತು. ಒಂದು ಹಳ್ಳಿಯಲ್ಲಿ ನಡೆದ ನರಮೇಧದ ಕಥೆ ಅದು! ಅದರಲ್ಲಿ ದೇವರಾಜ್ ಮತ್ತು ಪ್ರೇಮಾ ಸೊಗಸಾಗಿ ಅಭಿನಯ ಮಾಡಿದ್ದಾರೆ. ತುಂಬಾ ಅತೀ ಶೃಂಗಾರ ದೃಶ್ಯಗಳು ಆ ಸಿನಿಮಾದಲ್ಲಿ ಇವೆ. ಆದರೆ ಪ್ರೇಮಾ ಸಂದರ್ಶನವೊಂದರಲ್ಲಿ ಹೇಳಿದ ಪ್ರಕಾರ ಆ ಸಿನಿಮಾ ಶೂಟಿಂಗ್ ಹೊತ್ತಲ್ಲಿ ಯಾವುದೋ ಕಾರಣಕ್ಕೆ ಅವರಿಬ್ಬರೂ ಮನಸ್ತಾಪ ಮಾಡಿಕೊಂಡು ಮಾತು ಬಿಟ್ಟಿದ್ದರು! ಅದು ತೀವ್ರವಾದ ಸಂಘರ್ಷ.

ಕಂಬಾಲಹಳ್ಳಿ ಸಿನಿಮಾದ ದೃಶ್ಯ. ಚಿತ್ರಕೃಪೆ: ಚಿತ್ರಲೋಕ.ಕಾಮ್

ಆದರೆ ಕ್ಯಾಮೆರಾ ಮುಂದೆ ನಿಂತಾಗ ಪ್ರೇಮಾ ಶೃಂಗಾರ ದೇವತೆ ಆಗಿ ಬಿಡುತ್ತಿದ್ದರು ಮತ್ತು ದೇವರಾಜ್ ಅದಕ್ಕೆ ಪೂರಕವಾಗಿ ಸ್ಪಂದನೆ ಕೊಡುತ್ತಿದ್ದರು! ಆ ಸಿನಿಮಾ ನೋಡಿದರೆ ನಿಮಗೆ ಅವರಿಬ್ಬರ ವೃತ್ತಿಪರತೆ ಎದ್ದು ಕಾಣುತ್ತದೆ. ಇದು ವೃತಿಪರತೆಯ ಪರಾಕಾಷ್ಠೆ ಎಂದು ನನ್ನ ಭಾವನೆ!

ಇದನ್ನೂ ಓದಿ : Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ

ಭರತ ವಾಕ್ಯ

ಒಬ್ಬ ಕಲಾವಿದನಾಗಿ ಅಥವಾ ಸಾಧಕನಾಗಿ ನಮ್ಮ ವೃತ್ತಿಪರತೆ ಎಂದರೆ ಕಲೆಯನ್ನು ಮತ್ತು ತನ್ನ ವೃತ್ತಿಯನ್ನು ತೀವ್ರವಾಗಿ ಪ್ರೀತಿಸುವುದು, ತನ್ನ ಕಲೆಗೆ ಪೂರ್ಣವಾಗಿ ಸಮರ್ಪಣೆ ಆಗುವುದು ಮತ್ತು ತನ್ನ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ನೀಡಲು ಸಿದ್ಧನಾಗುವುದು. That’s all!

Exit mobile version