Site icon Vistara News

Raja Marga Column : ಭಿಕ್ಷುಕ, ಚಿನ್ನದ ಬಟ್ಟಲು ಮತ್ತು ಮಾನಸಿಕ ಬಡತನ!

Raja Marga Column Beggar1

Raja Marga Column : ಆ ಭಿಕ್ಷುಕನು ಊರಿನ ನಡುವೆ ಇರುವ ಒಂದು ದೊಡ್ಡ ದೇವಸ್ಥಾನದ ಮುಂದೆ (Beggar in front of a Temple) ಕೂತು ದಿನವೂ ಭಿಕ್ಷೆ ಬೇಡುತ್ತಿದ್ದ. ಅದರ ಜೊತೆಗೆ ದಿನವೂ ದೇವರ ಕಡೆಗೆ ಕೈಜೋಡಿಸಿ ‘ದೇವರೇ, ನನಗ್ಯಾಕೆ ಈ ಬಡತನವನ್ನು ಕೊಟ್ಟಿದ್ದೀ? ನನಗ್ಯಾಕೆ ಈ ಕಷ್ಟ?’ ಎಂದು ಬೇಡುತ್ತಿದ್ದ. ಇದನ್ನು ಕೇಳಿ ಕೇಳಿ ದೇವರಿಗೆ ಭಾರೀ ದುಃಖ ಆಗುತ್ತಿತ್ತು. ಕೊನೆಗೆ ದೇವರು ಅವನಿಗೆ ಸಹಾಯ ಮಾಡಲು (God helps Beggar) ಮುಂದಾಗುತ್ತಾರೆ.

ಒಂದು ದಿನ ಬೆಳಿಗ್ಗೆ ಅವನು ತನ್ನ ಹಾಸಿಗೆಯಿಂದ ಏಳುವಾಗ ದೇವರು ಅವನ ತಲೆದಿಂಬಿನ ಪಕ್ಕದಲ್ಲಿ ಒಂದು ಲಕ್ಷ ರೂಪಾಯಿಯ ಕಟ್ಟು ಇಡುತ್ತಾರೆ. ಬೆಳಿಗ್ಗೆ ಎದ್ದು ಆ ದುಡ್ಡನ್ನು ನೋಡಿ ಭಿಕ್ಷುಕನು ಭಾರಿ ಸಂತೋಷ ಪಡುತ್ತಾನೆ. ತಕ್ಷಣ ಅಂಗಡಿಗೆ ಹೋಗಿ ಒಂದು ಬೆಳ್ಳಿಯ ಬಟ್ಟಲನ್ನು ಖರೀದಿ ಮಾಡುತಾನೆ ಮತ್ತು ಅದೇ ಜಾಗದಲ್ಲಿ ಭಿಕ್ಷೆ ಬೇಡುತ್ತಾನೆ! ಮತ್ತೆ ಅದೇ ಮಾತು ಮುಂದುವರೆಯುತ್ತದೆ.

‘ದೇವರೇ, ನನಗ್ಯಾಕೆ ಈ ಬಡತನ ಕೊಟ್ಟಿದ್ದೀ? ನನಗ್ಯಾಕೆ ಈ ಕಷ್ಟ?’

ದೇವರಿಗೆ ಆ ಭಿಕ್ಷುಕನನ್ನು ಇನ್ನಷ್ಟು ಪರೀಕ್ಷೆ ಮಾಡಬೇಕು ಅನ್ನಿಸ್ತು. ಮರುದಿನ ರಾತ್ರಿ ಅದೇ ಭಿಕ್ಷುಕನ ತಲೆದಿಂಬಿನ ಪಕ್ಕದಲ್ಲಿ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಇಟ್ಟು ಬಿಡುತ್ತಾರೆ. ಬೆಳಿಗ್ಗೆ ಎದ್ದ ಆ ಭಿಕ್ಷುಕನು ಆ ದುಡ್ಡು ನೋಡಿ ಭಾರೀ ಖುಷಿ ಪಡುತ್ತಾನೆ. ಮತ್ತೆ ಪೇಟೆಗೆ ಹೋಗಿ ಒಂದು ಚಿನ್ನದ ಬಟ್ಟಲನ್ನು ಖರೀದಿ ಮಾಡಿ ಮತ್ತೆ ಅದೇ ಜಾಗದಲ್ಲಿ ಕೂತು ಭಿಕ್ಷಾಟನೆ ಮುಂದುವರೆಸುತ್ತಾನೆ! ಮತ್ತೆ ಅದೇ ಅಳಲು.

‘ ದೇವರೇ, ನನಗ್ಯಾಕೆ ಈ ಕಷ್ಟ?’

ಈ ಬಾರಿ ದೇವರು ಅವನ ಬಗ್ಗೆ ಇನ್ನಷ್ಟು ಉದಾರ ಆಗ್ತಾರೆ. ರಾತ್ರಿ ಅವನ ಹಾಸಿಗೆಯ ಪಕ್ಕದಲ್ಲಿ ಒಂದು ಕೋಟಿ ರೂಪಾಯಿ ಇಟ್ಟು ಕಣ್ಮರೆ ಆಗುತ್ತಾರೆ. ಇನ್ನು ಮುಂದೆ ಅವನು ಆ ಸಂಭಾಷಣೆ ಹೇಳೋದಿಲ್ಲ ಎಂದು ದೇವರು ಭಾವಿಸಿದ್ದರು. ಆದರೆ ಆ ಭಿಕ್ಷುಕನು ಆ ದುಡ್ಡಿನಲ್ಲಿ ಒಂದು ಹೊಸದಾದ ದೇವಸ್ಥಾನವನ್ನೇ ಕಟ್ಟಿ ಅದೇ ಚಿನ್ನದ ಬಟ್ಟಲು ಹಿಡಿದು ಮತ್ತೆ ಅಲ್ಲಿಯೇ ಕುಳಿತು ಭಿಕ್ಷಾಟನೆ ಮುಂದುವರೆಸುತ್ತಾನೆ!

ಮತ್ತೆ ಅದೇ ಸಂಭಾಷಣೆ – ದೇವರೇ, ನನಗೆ ಯಾಕೆ ಈ ಕಷ್ಟ ಕೊಟ್ಟೆ?

ಈ ಮನಸ್ಥಿತಿಗೆ ಮಾನಸಿಕ ದಾರಿದ್ರ್ಯ ಎನ್ನಬಹುದು

ಬಡತನದಲ್ಲಿ ಎರಡು ವಿಧವಾದ ಬಡತನ ಇದೆ. ಒಂದು ಆರ್ಥಿಕವಾದ ಬಡತನ. ಇನ್ನೊಂದು ಮಾನಸಿಕ ಬಡತನ. ಮಾನಸಿಕ ದಾರಿದ್ರ್ಯ. ಆರ್ಥಿಕ ಬಡತನಕ್ಕೆ ಪರಿಹಾರ ಇದೆ. ಆದರೆ ಮಾನಸಿಕ ದಾರಿದ್ರ್ಯಕ್ಕೆ ಮದ್ದೇ ಇಲ್ಲ.

ತಮ್ಮ ಕಷ್ಟವನ್ನು ಹೇಳಿಕೊಂಡು ಇನ್ನೊಬ್ಬರ ಮುಂದೆ ಕೈ ಚಾಚುವುದರಲ್ಲಿ ಅವರಿಗೆ ನಾಚಿಕೆಯೇ ಇರುವುದಿಲ್ಲ! ಸ್ವಾಭಿಮಾನದ ಲವಲೇಶವೂ ಇರುವುದಿಲ್ಲ. ಯಾರು ಎಷ್ಟೇ ಕೊಟ್ಟರೂ ಅವರಿಗೆ ಖುಷಿ ಆಗುವುದಿಲ್ಲ. ಈ ಅತೃಪ್ತ ಆತ್ಮಗಳನ್ನು ಖುಷಿ ಮಾಡಲು ಯಾರಿಗೂ ಸಾಧ್ಯವೇ ಇಲ್ಲ.

Raja Marga Column : ಅವರು ಪದೇ ಪದೇ ಹೇಳುವ ಮಾತುಗಳು ಈ ರೀತಿ ಇವೆ

  1. ದೇವರು ನಮಗೇ ಕಷ್ಟ ಕೊಡುವುದು.
  2. ನಮ್ಮಂತವರಿಗೆ ಯಾರೂ ಸಹಾಯ ಮಾಡುವುದಿಲ್ಲ.
  3. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿಯಬೇಕು. ದೊಡ್ಡ ದೊಡ್ಡ ಕನಸು ನಮ್ಮಂತವರಿಗೆ ಅಲ್ಲ (ಈ ಡೈಲಾಗ್ ಅವರು ತಮ್ಮ ಮಕ್ಕಳಿಗೆ ಪದೇ ಪದೇ ಹೇಳುವುದು) ಅಂದರೆ ಅವರ ಪ್ರಕಾರ ಮಕ್ಕಳು ಕನಸು ಕಾಣುವುದೇ ತಪ್ಪು ಅನ್ನುವುದು ಅವರ ಭಾವನೆ.
  4. ನಮ್ಮ ಹಣೆಯ ಬರಹವೇ ಸರಿಯಿಲ್ಲ.
  5. ದೇವರು ಕೊಡುವವರಿಗೇ ಜಾಸ್ತಿ ಕೊಡುತ್ತಾನೆ.
  6. ನಮ್ಮ ತಲೆಯ ಮೇಲೆ ನಮ್ಮದೇ ಕೈ.
  7. ನಾವು ಹಿಂದಿನ ಯಾವ ಜನ್ಮದಲ್ಲಿ ಯಾವುದೋ ತಪ್ಪು ಮಾಡಿದ್ದೇವೆ. ಅದಕ್ಕಾಗಿ ನಮಗೆ ಈ ಕಷ್ಟ.

ಭರತ ವಾಕ್ಯ

ನಾನು ಮೊದಲೇ ಹೇಳಿದ ಹಾಗೆ ಅವರನ್ನು ಖುಷಿ ಮಾಡಲು ಸಾಧ್ಯವೇ ಇಲ್ಲ. ಅವರು ಅತೃಪ್ತ ಆತ್ಮಗಳು. ಮಾನಸಿಕವಾಗಿ ದರಿದ್ರರು. ಎಷ್ಟು ಕೊಟ್ಟರೂ ಅವರು ಖುಷಿ ಆಗುವುದಿಲ್ಲ. ಇರುವುದರಲ್ಲಿ ಖುಷಿ ಆಗಿರೋದು ಅವರಿಗೆ ಗೊತ್ತೇ ಇಲ್ಲ. ಅಂಥವರಿಂದ ನಾವು ದೂರ ಇದ್ದಷ್ಟು ಒಳ್ಳೆಯದು.

ಇದನ್ನೂ ಓದಿ: Raja Marga Column : ತುಂಬ Tension ಆಗ್ತಿದ್ಯಾ? ಒತ್ತಡ ಕಡಿಮೆ ಮಾಡಲು ಇಲ್ಲಿದೆ 20 ಟಿಪ್ಸ್‌

ಭಾರೀ ದೊಡ್ಡ ಬಂಗಲೆಯಲ್ಲಿ ವಾಸವಾಗಿರುವ ವ್ಯಕ್ತಿಗಿಂತ ಗುಡಿಸಲಲ್ಲಿ ವಾಸವಾಗಿರುವ ವ್ಯಕ್ತಿ ಹೆಚ್ಚು ಖುಷಿ ಆಗಿರುತ್ತಾನೆ. ಏಕೆಂದರೆ ಸಂತೋಷ ಅನ್ನುವುದು ಒಂದು ಅದ್ಭುತ ಮೈಂಡ್ ಸೆಟ್. ಅದು ನಾವು ಹೊಂದಿರುವ ವಸ್ತುಗಳಿಂದ ದೊರೆಯುವುದೇ ಇಲ್ಲ. ನಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಅಷ್ಟೇ. ಭಾರೀ ಯಶಸ್ವೀ ಬದುಕಿಗಿಂತ ನೆಮ್ಮದಿಯ ಬದುಕು ಹೆಚ್ಚು ಅರ್ಥಪೂರ್ಣ ಆಗಿರುತ್ತದೆ ಅನ್ನೋದು ಸತ್ಯ.

Exit mobile version