Site icon Vistara News

Raja Marga Column : ಬ್ರಿಟಿಷ್ ವಿಜ್ಞಾನಿಗಳು ವಿಷ ಎಂದು ಕೊಟ್ಟ ದ್ರಾವಣವನ್ನು ಆ ವಿಜ್ಞಾನಿ ಗಟಗಟ ಕುಡಿದಿದ್ದರು!

Raja Marga Column Jagadish Chandra Bose

Raja Marga Column : 1910ರ ಇಸವಿ ಮೇ 10ನೇ ತಾರೀಕು. ಲಂಡನ್ನಿನ ಅತ್ಯಂತ ವೈಭವದ ರಾಯಲ್ ಸೊಸೈಟಿಯ (London Royal Society) ಸಭಾಂಗಣ. ಇಂಗ್ಲೆಂಡಿನ ಶ್ರೇಷ್ಠ ವಿಜ್ಞಾನಿಗಳು ಅಲ್ಲಿ ಸೇರಿ ಭಾರತೀಯ ವಿಜ್ಞಾನಿ (Indian Scientist) ಒಬ್ಬರ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಕುಳಿತಿದ್ದರು. ಸಭಾಂಗಣದಲ್ಲಿ ಗಾಢ ಮೌನವು ಆವರಿಸಿತ್ತು.

ಅವರು ತಾವೇ ಶೋಧಿಸಿದ್ದ ಕ್ರೆಸ್ಕೊಗ್ರಾಫ್ (Crescograph) ಎಂಬ ಯಂತ್ರದ ಮೂಲಕ ಸಸ್ಯಗಳಿಗೆ ಜೀವ ಮತ್ತು ಸಂವೇದನೆಗಳು ಇವೆ ಎಂದು ತೋರಿಸುವ ಪ್ರಯೋಗವನ್ನು ಮಾಡುತ್ತಿದ್ದರು. ಎಲ್ಲ ಸಸ್ಯಗಳು ಸಂಗೀತ, ಬೆಳಕಿನ ಕಿರಣ, ವಯರ್‌ಲೆಸ್ ಕಿರಣ, ವಿದ್ಯುತ್ಕಾಂತೀಯ ಕಿರಣ ಮೊದಲಾದುವುಗಳ ಸೂಕ್ಷ್ಮವಾದ ಸಂವೇದನೆಗಳಿಗೆ ಕೂಡ ಸ್ಪಂದಿಸುತ್ತವೆ (Planats reacts to stimulations) ಎಂದು ಅವರು ಭಾರತದಲ್ಲಿ ಸಾಬೀತು ಮಾಡಿ ತೋರಿಸಿಯಾಗಿತ್ತು. ಅದೇ ರೀತಿ ವಿಷವನ್ನು ಹಾಕಿದರೆ ಸಸ್ಯಗಳು ಮನುಷ್ಯರಂತೆ ನರಳಿ ಸಾಯುತ್ತವೆ ಎಂದು ಕೂಡ ಅವರು ಸಾಬೀತು ಮಾಡಿದ್ದರು.

ಅದೇ ಪ್ರಯೋಗವನ್ನು ಅವರು ಇಂಗ್ಲೆಂಡಿನಲ್ಲಿ ಪ್ರಾತ್ಯಕ್ಷಿಕೆ ಮಾಡುತ್ತಿದ್ದರು. ಅವರು ಒಂದು ಹಸಿರು ಗಿಡವನ್ನು ತಮ್ಮ ಯಂತ್ರಕ್ಕೆ ಕನೆಕ್ಟ್ ಮಾಡಿ ಅಲ್ಲಿನ ವಿಜ್ಞಾನಿಗಳಿಗೆ ಬ್ರೋಮೈಡ್ ದ್ರಾವಣ (Bromide solution) ತರಲು ಹೇಳಿದರು. ಅದು ವಿಷದ ದ್ರಾವಣ.

Raja Marga Column : ಬ್ರಿಟಿಷ್ ವಿಜ್ಞಾನಿಗಳು ಬಿಸಿ ದ್ರಾವಣವನ್ನು ತಂದುಕೊಟ್ಟರು

ಆಗ ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಒಬ್ಬ ಭಾರತೀಯ ವಿಜ್ಞಾನಿಯು ಕೀರ್ತಿ ಪಡೆಯುವುದು ಅಲ್ಲಿದ್ದ ಆಂಗ್ಲ ವಿಜ್ಞಾನಿಗಳಿಗೆ ಒಂದಿಷ್ಟೂ ಇಷ್ಟ ಇರಲಿಲ್ಲ. ಅವರನ್ನು ಅಪಮಾನ ಮಾಡಲು ಅವರು ಸೇರಿ ಒಂದು ಉಪಾಯ ಮಾಡಿದರು. ಬಿಸಿ ಸಕ್ಕರೆಯ ದ್ರಾವಣವನ್ನು ತಂದು ಅವರ ಕೈಯ್ಯಲ್ಲಿ ಕೊಟ್ಟು ಬ್ರೋಮೈಡ್ ದ್ರಾವಣ ಅಂದರು.

ಅದನ್ನು ಸಸ್ಯಗಳ ಮೇಲೆ ಬೋಸರು ಪ್ರಯೋಗ ಮಾಡುತ್ತ ಹೋದಂತೆ ಸಸ್ಯವು ಯಾವ ಸ್ಪಂದನೆಯನ್ನೂ ಕೊಡಲಿಲ್ಲ. ಹಸಿರು ಗಿಡವು ನರಳುವುದು ಗೋಚರ ಆಗಲೇ ಇಲ್ಲ.

ಆ ವಿಜ್ಞಾನಿಯು ಹಿಂದೆ ಮುಂದೆ ನೋಡದೆ ದ್ರಾವಣವನ್ನು ಗಟಗಟನೆ ಕುಡಿದೇ ಬಿಟ್ಟರು!

ಆ ಭಾರತೀಯ ವಿಜ್ಞಾನಿಗೆ ತಾನು ಮೋಸ ಹೋಗಿರುವುದು ಕೂಡಲೇ ಗೊತ್ತಾಯ್ತು. ಅವರು ಮೈಕ್ ತೆಗೆದುಕೊಂಡು ಸಿಡಿಗುಂಡಿನ ಹಾಗೆ ನುಡಿದೇ ಬಿಟ್ಟರು. ‘ನನಗೆ ನನ್ನ ಸಂಶೋಧನೆಯ ಮೇಲೆ ನಂಬಿಕೆ ಇದೆ. ನೀವು ಕೊಟ್ಟ ವಿಷವು ನನ್ನ ಸಸ್ಯವನ್ನು ಸಾಯಿಸಿಲ್ಲ ಅಂದಾದರೆ ಅದು ನನ್ನನ್ನೂ ಏನೂ ಮಾಡದು’ ಎಂದು ಆ ಬಿಸಿ ದ್ರಾವಣವನ್ನು ಎಲ್ಲರ ಮುಂದೆ ಗಟಗಟನೆ ಕುಡಿದೇ ಬಿಟ್ಟರು! ಅದು ಬಿಸಿ ಸಕ್ಕರೆಯ ದ್ರಾವಣ ಆಗಿತ್ತು.

“ಇನ್ನು ಮುಂದೆ ಯಾವುದೇ ಭಾರತೀಯ ವಿಜ್ಞಾನಿಯನ್ನೂ ಕೂಡ ಮೋಸ ಮಾಡಲು ಹೋಗಬೇಡಿ!” ಎಂದು ಹೇಳಿ ಅವರು ತಮ್ಮ ಪ್ರಯೋಗವನ್ನು ಮುಂದುವರೆಸಿದರು ಮತ್ತು ತನ್ನ ಶ್ರೇಷ್ಠವಾದ ಸಂಶೋಧನೆಯು ಎಷ್ಟು ಗಟ್ಟಿ ಇದೆ ಎಂದು ಜಗತ್ತಿಗೆ ತೋರಿಸಿಕೊಟ್ಟರು. ಮುಂದೆ ಅದೇ ಇಂಗ್ಲೆಂಡಿನ ರಾಯಲ್ ಸೊಸೈಟಿ ಅವರಿಗೆ ತನ್ನ ಫೆಲೋಶಿಪ್ ಗೌರವ ನೀಡಿತ್ತು ಅಂದರೆ ಅದು ಭಾರತದ ಗೆಲುವು ಆಗಿತ್ತು.

ಅವರೇ ಭಾರತದ ಶ್ರೇಷ್ಠ ಸಸ್ಯ ವಿಜ್ಞಾನಿ ಡಾಕ್ಟರ್ ಜಗದೀಶ್ ಚಂದ್ರ ಬೋಸ್ (Jagadish Chandra Bose). ಅವರು ನಿಜವಾಗಿ ಭಾರತದ ಹೆಮ್ಮೆ.

ಕೇಂಬ್ರಿಜ್ ವಿವಿಯಲ್ಲಿ ಅವರು ಕಲಿತು ಬಂದಿದ್ದರು!

ಡಾಕ್ಟರ್ ಜಗದೀಶ್ ಚಂದ್ರ ಬೋಸರು ಹುಟ್ಟಿದ್ದು 1858ನೇ ಇಸವಿ ನವೆಂಬರ್ 30ರಂದು. ವೈದ್ಯಕೀಯ ಪದವಿಯನ್ನು ಪಡೆಯಲು ಕೇಂಬ್ರಿಜ್ ವಿವಿಯಲ್ಲಿ ಓದಲು ಲಂಡನ್ನಿಗೆ ಹೋಗಿದ್ದ ಅವರು ಅನಾರೋಗ್ಯದ ಕಾರಣ ತಮ್ಮ ಕೋರ್ಸ್ ಬದಲಾವಣೆ ಮಾಡಬೇಕಾಯಿತು. ಅವರು ಸ್ನಾತಕೋತ್ತರ ವಿಜ್ಞಾನದ ಪದವಿಯನ್ನು ಪಡೆದು ಭಾರತಕ್ಕೆ ಮರಳಿದರು. ಬ್ರಿಟಿಷ್ ಆಡಳಿತವಿದ್ದ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓರ್ವ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಅವರು ನೇಮಕವನ್ನು ಪಡೆದರು. ಒಳ್ಳೆಯ ಪ್ರಾಧ್ಯಾಪಕ ಎಂಬ ಕೀರ್ತಿಯನ್ನು ಕೂಡ ಪಡೆದರು.

ಸ್ವಾಭಿಮಾನಿ ಪ್ರತಿಭಟನೆ ಮಾಡಿದ್ದರು ಬೋಸ್

ಆದರೆ ಆ ಕಾಲೇಜಿನಲ್ಲಿ ಬ್ರಿಟಿಷ್ ಅಧ್ಯಾಪಕರಿಗೆ ಕೊಡುತ್ತಿದ್ದ ವೇತನದ 2/3 ವೇತನವನ್ನು ಭಾರತೀಯ ಪ್ರಾಧ್ಯಾಪಕರಿಗೆ ಅಲ್ಲಿ ನೀಡಲಾಗುತ್ತಿತ್ತು. ಸ್ವಾಭಿಮಾನಿ ಆಗಿದ್ದ ಬೋಸರು ಇದನ್ನು ಪ್ರತಿಭಟಿಸಿ ವೇತನ ಪಡೆಯದೇ ದುಡಿಯಲು ಆರಂಭ ಮಾಡಿದರು. ಮೂರು ವರ್ಷಗಳ ತನಕ ಅವರ ಈ ಪ್ರತಿಭಟನೆಯು ಮುಂದುವರೆಯಿತು. ಕೊನೆಗೆ ಕಾಲೇಜು ಆಡಳಿತ ಮಂಡಳಿ ಅವರಿಗೆ ಸರೆಂಡರ್ ಆಗಿ ಬ್ರಿಟಿಷ್ ಶಿಕ್ಷಕರಿಗೆ ಸಮಾನವಾದ ವೇತನ ನೀಡಲು ಒಪ್ಪಿತು, ಮಾತ್ರವಲ್ಲ ಅವರ ಮೂರು ವರ್ಷಗಳ ವೇತನವನ್ನು ಬಡ್ಡಿ ಸಹಿತ ಪಾವತಿ ಮಾಡಿತು.

ಇದನ್ನೂ ಓದಿ : Raja Marga Column : ಯಾರು ಏನೇ ಹೇಳಲಿ, ನೀವು ಕೇಕೆ ಹಾಕಿ ನಗೋದನ್ನು ಮರೀಬೇಡಿ!

ವಯರ್ ಲೆಸ್ ಸಂಶೋಧನೆ ಅವರು ಮಾಡಿದರೂ ಪೇಟೆಂಟ್ ಪಡೆಯಲಿಲ್ಲ!

ಬೋಸರು 1895ದಲ್ಲಿ ‘ವಯರ್‌ಲೆಸ್ ತಂತ್ರಜ್ಞಾನದ’ ಸಂಶೋಧನೆ ಮಾಡಿದ್ದರು. ಆದರೆ ಅದನ್ನು ಪೇಟೆಂಟ್ ಮಾಡಲಿಲ್ಲ.

ಯಾವುದೇ ವಿಜ್ಞಾನದ ಸಂಶೋಧನೆ ದುಡ್ಡು ಮಾಡಲು ಅಲ್ಲ. ಅದು ಲೋಕ ಕಲ್ಯಾಣಕ್ಕಾಗಿ ಇರಬೇಕು ಎಂದವರು ಹೇಳಿದ್ದರು. ಮುಂದೆ ಎರಡು ವರ್ಷಗಳ ನಂತರ ಅಂದರೆ 1897ರಲ್ಲಿ ಗೂಗ್ಲಿಮೋ ಮಾರ್ಕೊನಿ ಅದೇ ವಯ‌ರ್‌ಲೆಸ್ ತಂತ್ರಜ್ಞಾನವನ್ನು ಸಂಶೋಧಿಸಿ ಪೇಟೆಂಟ್ ಪಡೆದರು. ಅದರಿಂದಾಗಿ ಒಬ್ಬ ಭಾರತೀಯ ವಿಜ್ಞಾನಿಗೆ ದೊರಕಬೇಕಿದ್ದ ವಿಶ್ವಮಟ್ಟದ ಕೀರ್ತಿಯು ಸಿಗದೇ ಹೋಯಿತು! ಆದರೆ ಇದರಿಂದ ಬೋಸರು ಒಂದು ಎಳ್ಳಿನ ಮೊನೆಯಷ್ಟು ಕೂಡ ಬೇಸರ ಪಡಲಿಲ್ಲ!

‘ಪ್ರಯೋಗಶಾಲೆಯೇ ನನ್ನ ದೇವಾಲಯ’ ಎಂದು ಹೇಳಿದ ಮತ್ತು ಅದರಂತೆ ಬದುಕಿದ ಬೋಸರು 1937 ನವೆಂಬರ್ 23ರಂದು ಈ ಲೋಕದಿಂದ ನಿರ್ಗಮಿಸಿದರು. ಅವರ ಕೊಡುಗೆಗಳನ್ನು ಗಟ್ಟಿಯಾಗಿ ಸ್ಮರಿಸೋಣ.

Exit mobile version