Site icon Vistara News

Income Tax Raid : ಭ್ರಷ್ಟರೊಳಗಿನ ದಾಖಲೆ ಶೂರ; ಒಬ್ಬನಿಂದಲೇ 290 ಕೋಟಿ ನಗದು ವಶ!

Dheerendra Kumar Sahu

ನವದೆಹಲಿ: ಶುಕ್ರವಾರದಿಂದ (ಡಿಸೆಂಬರ್​8 ರಿಂದ) ಮೂರು ರಾಜ್ಯಗಳಲ್ಲಿ (ಒಡಿಶಾ, ಜಾರ್ಖಂಡ್​ ಮತ್ತು ಪಶ್ಚಿಮ ಬಂಗಾಳ) ನಡೆದ ಆದಾಯ ತೆರಿಗೆ ದಾಳಿಯಲ್ಲಿ ಕನಿಷ್ಠ 290 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾಗಿರುವ ಹಣವನ್ನು ಇನ್ನೂ ಎಣಿಸಬೇಕಾಗಿರುವುದರಿಂದ ಮತ್ತು ಹಣವನ್ನು ಬಚ್ಚಿಟ್ಟಿರುವ ಕೆಲವು ಸ್ಥಳಗಳ ಬಗ್ಗೆ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ದೊರೆತಿರುವುದರಿಂದ ಈ ಮೊತ್ತವು ಹೆಚ್ಚಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಒಡಿಶಾದ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ ಹಣ ಇದಾಗಿದ್ದು ಅವರ ಸಂಪತ್ತಿನ ಮೂಲಗಳ ಮೇಲೆ ದಾಳಿ ಮುಂದುವರಿದಿದೆ.

ಸಾಹು ಅವರಿಗೆ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಮತ್ತು ಒಡಿಶಾ ಮೂಲದ ಡಿಸ್ಟಿಲರಿ ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದೆ. ಮೂರು ಸ್ಥಳಗಳಲ್ಲಿ ಏಳು ಕೊಠಡಿಗಳು ಮತ್ತು ಒಂಬತ್ತು ಲಾಕರ್ ಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಹಣವನ್ನು ಕಬೋರ್ಡ್ ಮತ್ತು ಇತರ ಪೀಠೋಪಕರಣಗಳಲ್ಲಿ ತುಂಬಿರುವುದು ಕಂಡುಬಂದಿದೆ. ಹೆಚ್ಚಿನ ನಗದು ಮತ್ತು ಆಭರಣಗಳು ಕಂಡುಬರುವ ಇತರ ಸ್ಥಳಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತೆರಿಗೆ ಅಧಿಕಾರಿಗಳ ಹೇಳಿದ್ದಾರೆ.

ಶನಿವಾರ ಬೌಧ್ ಡಿಸ್ಟಿಲರಿ ಮತ್ತು ಅದಕ್ಕೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆದಿದೆ. ಬಲದೇವ್ ಸಾಹು ಇನ್ಫ್ರಾ, ಬೌಧ್ ಡಿಸ್ಟಿಲರಿಯ ಸಮೂಹ ಕಂಪನಿ ಮತ್ತು ಅದೇ ಡಿಸ್ಟಿಲರಿ ಮಾಲೀಕತ್ವದ ಅಕ್ಕಿ ಗಿರಣಿಯಲ್ಲಿ ದಾಳಿ ನಡೆದಿದೆ. ಇದೇ ವೇಲೆ ಜಾರ್ಖಂಡ್​ನಲ್ಲಿ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಬಿಐ ತನಿಖೆಗೆ ಒತ್ತಾಯ

ಒಡಿಶಾ ಬಿಜೆಪಿ ಘಟಕವು ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ, ಜತೆಗೆ ಆಡಳಿತಾರೂಢ ಬಿಜೆಡಿಯಿಂದ ಸ್ಪಷ್ಟೀಕರಣವನ್ನು ಕೋರಿದೆ. ಬಿಜೆಪಿ ವಕ್ತಾರ ಮನೋಜ್ ಮೊಹಾಪಾತ್ರ ಮಾತನಾಡಿ. ಒಡಿಶಾದ ಪಶ್ಚಿಮ ಪ್ರದೇಶದ ಮಹಿಳಾ ಸಚಿವೆಯೊಬ್ಬರು ದಾಳಿ ನಡೆಯುತ್ತಿರುವ ನಡುವೆಯೇ ಸಾಹು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಸ್ಥಳೀಯ ನಾಯಕರು ಮತ್ತು ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಪೋಷಣೆಯಿಲ್ಲದೆ ಈ ತೆರಿಗೆ ವಂಚನೆ ಸಾಧ್ಯವಾಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

“ಒಡಿಶಾದ ಅಬಕಾರಿ ಇಲಾಖೆ, ಜಾಗೃತ ದಳ, ಗುಪ್ತಚರ ವಿಭಾಗ ಮತ್ತು ಆರ್ಥಿಕ ಅಪರಾಧ ವಿಭಾಗವು ರಾಜ್ಯದಲ್ಲಿ ಏನು ಮಾಡುತ್ತಿದೆ ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ನ ಲೂಟಿಯ ಬಗ್ಗೆ ಮೋದಿ ಲೇವಡಿ

ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 300 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ ಎಂಬ ವರದಿಯನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್​ನ ಮುಖ ಪುಟದಲ್ಲಿ ವರದಿ ಮತ್ತು ಹಣದ ರಾಶಿಯ ಚಿತ್ರವನ್ನು ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಮೊದಲು ಚಿತ್ರಗಳನ್ನು ನೋಡಿ. ಬಳಿಕ ವಿರೋಧ ಪಕ್ಷದ ನಾಯಕರ (ಇಂಡಿಯಾ ಒಕ್ಕೂಟ) ಭಾಷಣಗಳನ್ನು ಆಲಿಸಿ ಜನರನ್ನು ಕೇಳಿ ಎಂದು ಟಾಂಗ್ ಕೊಟ್ಟಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ , “ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ನಂತರ ತಮ್ಮ ನಾಯಕರ ಪ್ರಾಮಾಣಿಕ ‘ಭಾಷಣಗಳನ್ನು’ ಕೇಳಬೇಕು…” ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : Mahua Moitra: ಮಹುವಾ ಮೋಯಿತ್ರಾ ವಿರುದ್ಧ ಸರ್ಕಾರಿ ತನಿಖೆಗೆ ಸದನ ಸಮಿತಿ ಶಿಫಾರಸು

ನಂತರ ಅವರು ಸಾರ್ವಜನಿಕರಿಂದ ಲೂಟಿ ಮಾಡಿದ ಎಲ್ಲಾ ಹಣವನ್ನು ತಮ್ಮ ಸರ್ಕಾರವು ವಸೂಲಿ ಮಾಡಲಿದೆ ಎಂದು ಭರವಸೆ ನೀಡಿದರು. “ಸಾರ್ವಜನಿಕರಿಂದ ಏನನ್ನು ಲೂಟಿ ಮಾಡಲಾಗಿದೆಯೋ, ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ, ಇದು ಮೋದಿಯವರ ಭರವಸೆ” ಎಂದು ಅವರು ಬರೆದುಕೊಂಡಿದ್ದಾರೆ.

ಪಿಎಂ ಮೋದಿ ಟ್ವೀಟ್​​ನಲ್ಲಿ ಹಲವಾರು ಎಮೋಜಿಗಳನ್ನು ಕೂಡ ಸೇರಿಸಿದ್ದಾರೆ. ಇದು ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ಅವರ ಆಯ್ಕೆ ಮಾಡಿಕೊಂಡಿರುವ ಹೊಸ ಮಾದರಿಯಾಗಿದೆ.

Exit mobile version