Site icon Vistara News

Shraddha Murder Case | ವಿಕೃತ ಹಂತಕ ಅಫ್ತಾಬ್‌ ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ, ಗಲ್ಲಿಗೇರಿಸುವಂತೆ ವಕೀಲರ ಆಗ್ರಹ

Aftab Amin Poonawalla Narco Test

ನವದೆಹಲಿ: ಪ್ರಿಯತಮೆ ಶ್ರದ್ಧಾ ವಾಳ್ಕರ್‌ ದೇಹವನ್ನು 35 ಭಾಗಗಳಾಗಿ ಕತ್ತರಿಸಿ, ದೆಹಲಿಯ ಹಲವೆಡೆ ಎಸೆದು ವಿಕೃತಿ ಮೆರೆದ (Shraddha Murder Case) ಹಂತಕ ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ನ್ಯಾಯಾಲಯವು ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. ಹಾಗೆಯೇ, ಅಫ್ತಾಬ್‌ನನ್ನು ನಾರ್ಕೊ ಟೆಸ್ಟ್‌ಗೆ (ಮಂಪರು ಪರೀಕ್ಷೆ) ಒಳಪಡಿಸಲು ಕೂಡ ಸಾಕೇತ್‌ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಫ್ತಾಬ್‌ ಅಮೀನ್‌ನನ್ನು ಪೊಲೀಸರು ಸಾಕೇತ್‌ ಕೋರ್ಟ್‌ಗೆ ಹಾಜರುಪಡಿಸಿದರು. “ಶ್ರದ್ಧಾ ಹತ್ಯೆ ಕುರಿತ ತನಿಖೆಗೆ ಅಫ್ತಾಬ್‌ ಅಮೀನ್‌ ಸಹಕಾರ ನೀಡುತ್ತಿಲ್ಲ. ಹಾಗೆಯೇ, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳಬೇಕಿದೆ. ಹಾಗಾಗಿ, ಪೊಲೀಸ್‌ ಕಸ್ಟಡಿಯ ಅವಧಿಯನ್ನು ವಿಸ್ತರಿಸಬೇಕು” ಎಂದು ಪೊಲೀಸರು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಶ್ರದ್ಧಾಳನ್ನು ಭೀಕರವಾಗಿ ಹತ್ಯೆ ಮಾಡಿದ ಕಾರಣ ದೆಹಲಿ ಮಾತ್ರವಲ್ಲ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದು ಸೂಕ್ಷ್ಮ ಪ್ರಕರಣವಾದ ಕಾರಣ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಬದಲು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಬೇಕು ಎಂದು ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದರು. ಹಾಗಾಗಿ, ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯಿತು. ಆದರೂ, ಅಫ್ತಾಬ್‌ನನ್ನು ಗಲ್ಲಿಗೇರಿಸಬೇಕು ಎಂದು ಸಾಕೇತ್‌ ಕೋರ್ಟ್‌ನಲ್ಲಿ ಹಲವಾರು ವಕೀಲರು ಆಗ್ರಹಿಸಿದರು.

ಇದನ್ನೂ ಓದಿ | Delhi Crime | ವಿಕೃತ ಹಂತಕ ಅಫ್ತಾಬ್‌ ನಾರ್ಕೊ ಟೆಸ್ಟ್‌ಗೆ ಕೋರ್ಟ್‌ ಅಸ್ತು, ಏನಿದು ಪರೀಕ್ಷೆ?

Exit mobile version