Site icon Vistara News

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Agniveers

Central Government reserves 10 per cent constable posts for ex-Agniveer in central armed police forces

ನವದೆಹಲಿ: ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ (Agniveer Scheme) ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, ‘ಅಗ್ನಿವೀರ್’ ಗಳಿಗೆಗೆ ಒಂದು ದೊಡ್ಡ ಮೊತ್ತದ ‘ನಿವೃತ್ತಿ’ ಪ್ಯಾಕೇಜ್ ಸಹ ಪಾವತಿಸಲಾಗುತ್ತದೆ. ಇದೀಗ ಭಾರತೀಯ ಸೇನೆ ಈ ಅಗ್ನಿವೀರ್‌ ಯೋಜನೆಯಲ್ಲಿ ಕೆಲವು ಬದಲಾವಣೆಯನ್ನು ಸೂಚಿಸಿದೆ. ಅದೇನು ಏನೇನು ಎನ್ನುವ ವಿವರ ಇಲ್ಲಿದೆ.

ಸಂಖ್ಯೆಯ ಹೆಚ್ಚಳ

ಪ್ರಸ್ತುತ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವಿದೆ. ಉಳಿದ ಶೇ. 75ರಷ್ಟು ಮಂದಿ ನಿವೃತ್ತಿ ಪಡೆಯುತ್ತಾರೆ. ಇದು ಬದಲಾಗಬೇಕಿದೆ. ಉಳಿಸಿಕೊಳ್ಳುವವರ ಸಂಖ್ಯೆಯನ್ನು ಶೇ. 25ರಿಂದ ಶೇ. 60-70ಕ್ಕೆ ಏರಿಸಬೇಕು. ಇದರಿಂದ ಭಾರತೀಯ ಸೇನೆಗೆ ಅನುಭವಿ ಯೋಧರು ಲಭ್ಯರಾಗುತ್ತಾರೆ.

ಸೇವಾ ಅವಧಿಯ ಹೆಚ್ಚಳ

ಸದ್ಯ ಅಗ್ನಿವೀರರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 9 ತಿಂಗಳು ತರಬೇತಿಗೆ ಮೀಸಲಿಡಲಾಗಿದೆ. ತರಬೇತಿ ಕಳೆದು ಉಳಿದ ಅಭ್ಯರ್ಥಿಗಳು 3 ವರ್ಷ, 3 ತಿಂಗಳು ಸೇವೆ ಸಲ್ಲಿಸುತ್ತಾರೆ. ಇದು ಬದಲಾಗಬೇಕು. ಸೇವಾ ಅವಧಿಯನ್ನು 7-8 ವರ್ಷಗಳಾಗಿ ಹೆಚ್ಚಿಸಲು ಸೇನೆ ಶಿಫಾರಸ್ಸು ಮಾಡಿದೆ. ಈ ಅವಧಿಯಲ್ಲಿ ಅಗ್ನಿವೀರರು ಸಮಗ್ರ ತರಬೇತಿ ಮತ್ತು ಅನುಭವ ಪಡೆಯಲು ಸಾಧ್ಯವಾಗುತ್ತದೆ.

ತಾಂತ್ರಿಕ ವಿಭಾಗಗಳ ವಯೋಮಿತಿಯಲ್ಲಿ ಹೆಚ್ಚಳ

ಪ್ರಸ್ತುತ 17 ಮತ್ತು 21.5 ವಯೋಮಾನದವರನ್ನು ಅಗ್ನಿವೀರರನ್ನಾಗಿ ನೇಮಿಸಲಾಗುತ್ತದೆ. ಈ ಮಿತಿಯನ್ನು ಹೆಚ್ಚಿಸಲು ಸೇನೆ ಸಲಹೆ ನೀಡಿದೆ. ಸಿಗ್ನಲ್ಸ್‌, ಏರ್‌ ಡಿಫೆನ್ಸ್‌ ಮತ್ತು ಎಂಜಿನಿಯರ್‌ನಂತಹ ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡುವಾಗ ವಯೋಮಿತಿಯನ್ನು 23 ವರ್ಷಕ್ಕೆ ಏರಿಸಬೇಕು ಎಂದು ಸಲಹೆ ನೀಡಲಾಗಿದೆ.

ಅಂಗವಿಕಲರಿಗೆ ಹೆಚ್ಚಿನ ನೆರವು

ಪ್ರಸ್ತುತ ತರಬೇತಿ ಅವಧಿಯಲ್ಲಿ ಅಂಗವಿಕಲರಾಗುವ ಅಗ್ನಿವೀರರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಯಮಗಳಿಲ್ಲ. ಹೀಗಾಗಿ ತರಬೇತಿ ಅವಧಿಯಲ್ಲಿ ಅಂಗವೈಕಲ್ಯ ಅನುಭವಿಸುವವರಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕು. ಅಲ್ಲದೆ ಅಗ್ನಿವೀರರು ತಮ್ಮ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ಉತ್ತಮ ಉದ್ಯೋಗ ಹುಡುಕಿಕೊಳ್ಳಲು ನೆರವು ನೀಡಬೇಕು. ಇದಕ್ಕಾಗಿ ವೃತ್ತಿಪರ ಏಜೆನ್ಸಿ ಆರಂಭಿಸಬಹುದು.

ಕುಟುಂಬಗಳಿಗೆ ಸಹಾಯಹಸ್ತ

ಪ್ರಸ್ತುತ ಯುದ್ಧದಲ್ಲಿ ಮಡಿವ ಅಗ್ನಿವೀರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಯಾವುದೇ ಅವಕಾಶ, ನಿಯಮಗಳಿಲ್ಲ. ಹೀಗಾಗಿ ಹುತಾತ್ಮರಾಗುವ ಅಗ್ನಿವೀರರ ಕುಟುಂಬಕ್ಕೆ ನೆರವಾಗುವ ಭತ್ಯೆಯನ್ನು ಪರಿಚಯಿಸಲು ಸೇನೆ ಸಲಹೆ ನೀಡಿದೆ.

ಇದನ್ನೂ ಓದಿ: Agniveer: ಮೃತ ಅಗ್ನಿವೀರನ ಕುಟುಂಬಕ್ಕೆ ಸಲ್ಲುತ್ತಿದೆ ₹1.13 ಕೋಟಿ ಪರಿಹಾರ; ರಾಹುಲ್‌ ಆರೋಪ ಸುಳ್ಳು ಎಂದ ಸೇನೆ

ಹಲವರಿಂದ ವಿರೋಧ

ಅಲ್ಪಾವಧಿಗೆ ನೇಮಕಾತಿ ನಡೆಸಲಾಗುವ ಅಗ್ನಿಪಥ್ ಯೋಜನೆಯ ಬಗ್ಗೆ ಕೆಲವರು ಈ ಹಿಂದೆಯೇ ಅಪಸ್ವರ ಎತ್ತಿದ್ದಾರೆ. ಇದು ಉದ್ಯೋಗ ಅಭದ್ರತೆ ಮತ್ತು ಮಿಲಿಟರಿ ಸಿಬ್ಬಂದಿಯ ಅಪೂರ್ಣ ತರಬೇತಿಗೆ ಕಾರಣವಾಗಬಹುದು ಎಂದು ಕೆಲವರು ವಾದಿಸುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿರುವ ಜೆಡಿಯು ಮತ್ತು ಎಲ್‌ಜೆಪಿ (ಆರ್‌ವಿ) ಕೂಡ ಯೋಜನೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

Exit mobile version