ಜಮ್ಮು: ಭಾರತೀಯ ಜನತಾ ಪಾರ್ಟಿ(BJP) ಅಧಿಕಾರದಲ್ಲಿರುವುದಕ್ಕಾಗಿ ಮಾತ್ರವೇ ಭಗವಾನ್ ರಾಮನ (Bhagwan Ram) ಹೆಸರನ್ನು ಬಳಸಿಕೊಳ್ಳುತ್ತಿದೆ. ರಾಮ ಕೇವಲ ಹಿಂದೂಗಳಿಗಷ್ಟೇ ದೇವರಲ್ಲ, ಆತ ಎಲ್ಲರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ(Farooq Abdullah) ಹೇಳಿದ್ದಾರೆ.
ಭಗವಾನ್ ರಾಮ ಕೇವಲ ಹಿಂದೂಗಳಿಗೆ ಮಾತ್ರವೇ ದೇವರಲ್ಲ. ಈ ಸಂಗತಿಯನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ. ಭಗವಾನ್ ರಾಮ ಎಲ್ಲರಿಗೂ ದೇವರು. ಆತ ಮುಸ್ಲಿಮ್ನೇ, ಕ್ರಿಶ್ಚಿಯನ್, ಅಮೆರಿಕನ್ ಅಥವಾ ರಷ್ಯನ್ ಹೀಗೆ ಯಾರೇ ಆಗಿರಲಿ ಎಲ್ಲರಿಗೂ ಭಗವಾನ್ ಎಲ್ಲರಿಗೂ ದೇವರು ಎಂದು ಜಮ್ಮುವಿನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡುತ್ತಾ ತಿಳಿಸಿದರು.
ಯಾರಾದರೂ ಬಂದು ತಾವು ರಾಮನ ಅನುಯಾಯಿಗಳು ಎಂದು ಹೇಳಿಕೊಂಡರೆ ಅವರು ಮೂರ್ಖರು. ರಾಮನ ಹೆಸರಿನಲ್ಲಿ ಮಾರಾಟ ಮಾಡಲು ಅವರು ಮುಂದಾಗಿದ್ದಾರೆ. ಅವರಿಗೆ ರಾಮನ ಬಗ್ಗೆ ಯಾವುದೇ ಪ್ರೀತಿ ಇಲ್ಲ. ಅವರಿಗೆ ಅಧಿಕಾರಬೇಕಷ್ಟೇ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್ ನಡೆಯುವ ಸಮಯದಲ್ಲಿ ರಾಮ ಮಂದಿರ ಉದ್ಘಾಟಿಸಿ, ಜನರ ಗಮನವನ್ನು ಬೇರೇಡೆಗೆ ಸೆಳೆಯುತ್ತಾರೆಂದು ಎಂದು ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿದರು.
ಇದನ್ನೂ ಓದಿ: Rahul Gandhi | ರಾಹುಲ್ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್ ಅಬ್ದುಲ್ಲಾ
ಬಿಜೆಪಿಯೇತರ ಪಕ್ಷಗಳ ನಡುವಿನ ಒಗ್ಗಟ್ಟಿನ ಕುರಿತು ಮಾತನಾಡಿದ ಅವರು, ನಮ್ಮ ಒಗ್ಗಟ್ಟಿಗೆ ಯಾವುದೇ ಅಡ್ಡಿ ಇಲ್ಲ. ಅದು ಕಾಂಗ್ರೆಸ್, ಎನ್ಸಿ ಅಥವಾ ಪ್ಯಾಂಥರ್ಸ್ ಆಗಿರಲಿ. ನಾವು ಜನರಿಗಾಗಿ ಹೋರಾಡುತ್ತೇವೆ ಮತ್ತು ಸಾಯುತ್ತೇವೆ, ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಹೇಳಿದರು.