Site icon Vistara News

ವಾಟ್​ ಎ ಜೋಕ್​ !; ಸುಶೀಲ್​ ಮೋದಿ ಹೇಳಿಕೆಗೆ ದೊಡ್ಡದಾಗಿ ನಕ್ಕು ಪ್ರತಿಕ್ರಿಯಿಸಿದ ನಿತೀಶ್​ ಕುಮಾರ್​

Nitish Kumar On Sushil Modi

ಪಟನಾ: ನಿತೀಶ್​ ಕುಮಾರ್​ ಉಪರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಅವರನ್ನು ಉಪರಾಷ್ಟ್ರಪತಿ ಮಾಡಬೇಕು ಎಂದು ಜೆಡಿಯು ಪಕ್ಷದ ಹಲವು ಪ್ರಮುಖರು ಬಿಜೆಪಿ ವರಿಷ್ಠರ ಎದುರು ಪ್ರಸ್ತಾಪ ಮಾಡಿದ್ದರು. ಆದರೆ ಬಿಜೆಪಿ ಉಪರಾಷ್ಟ್ರಪತಿ ಹುದ್ದೆಗೆ ಅವರನ್ನು ಅಭ್ಯರ್ಥಿ ಮಾಡಲಿಲ್ಲ. ಇದು ಕೂಡ ನಿತೀಶ್​ ಕುಮಾರ್​ ಅಸಮಾಧಾನಕ್ಕೆ ಪ್ರಮುಖ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ಸುಶೀಲ್​ ಕುಮಾರ್ ಮೋದಿ ಹೇಳಿದ್ದರು. ಈ ಹೇಳಿಕೆಗೆ ಇದೀಗ ನಿತೀಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ವಾಟ್​ ಎ ಜೋಕ್​ ! (ಇದೆಂಥಾ ತಮಾಷೆ)’ ಎಂದು ನಕ್ಕಿದ್ದಾರೆ.

ನಾನು ಉಪರಾಷ್ಟ್ರಪತಿ ಹುದ್ದೆ ಬಯಸಿದ್ದೆ ಎಂಬುದು ಪಕ್ಕಾ ಸುಳ್ಳು. ಇದೊಂದು ಬೋಗಸ್​. ನನಗೆ ಅಂಥ ಆಸೆಗಳು ಯಾವವೂ ಇರಲಿಲ್ಲ. ಬಿಜೆಪಿ ಆಯ್ಕೆ ಮಾಡಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅಭ್ಯರ್ಥಿಗಳಿಗೆ ನಾವೆಷ್ಟು ಬೆಂಬಲ ಕೊಟ್ಟೆವು, ಪೂರ್ಣ ಮನಸಿಂದ ಒಪ್ಪಿಕೊಂಡೆವು ಎಂಬುದನ್ನು ಎಲ್ಲರೂ ನೋಡಿದ್ದಾರೆ. ನನಗೇನಾದರೂ ಆ ಆಸೆಯಿದ್ದಿದ್ದರೆ ಉಪರಾಷ್ಟ್ರಪತಿ ಚುನಾವಣೆ ಆಗುವವರೆಗೂ ಕಾಯುತ್ತಿರಲಿಲ್ಲ. ಅಭ್ಯರ್ಥಿ ಆಯ್ಕೆಯಾಗುತ್ತಿದ್ದಂತೆ ಹೊರಗೆ ಬೀಳುತ್ತಿದ್ದೆ. ರಾಷ್ಟ್ರಪತಿ-ಉಪರಾಷ್ಟ್ರಪತಿ ಚುನಾವಣೆ ಮುಗಿದ ಮೇಲೆ ನಮ್ಮ ಆಂತರಿಕ ಸಭೆ ನಡೆದಿದ್ದು ಎಂದು ನಿತೀಶ್ ಕುಮಾರ್​ ಸ್ಪಷ್ಟಪಡಿಸಿದ್ದಾರೆ. ಹಾಗೇ, ‘ಅವರೆಲ್ಲ ನನ್ನ ಬಗ್ಗೆ ತುಂಬ ಮಾತಾಡಲಿ, ನನ್ನ ಬಗ್ಗೆ ಮಾತಾಡಿದಷ್ಟೂ ಅವರ ಸ್ಥಾನ ಇನ್ನಷ್ಟು ಉನ್ನತಿಗೆ ಹೋಗುತ್ತದೆ’ ಎಂದು ಟೀಕಿಸಿದ್ದಾರೆ.

ಆಗಸ್ಟ್​ 9ರಂದು ಸಂಜೆ ಬಿಜೆಪಿಯೊಂದಿಗೆ ಮೈತ್ರಿ ಕಡಿತಗೊಳಿಸಿಕೊಂಡಿದ್ದ ನಿತೀಶ್​ ಕುಮಾರ್​, ಮರುದಿನವೇ ಆರ್​ಜೆಡಿ-ಕಾಂಗ್ರೆಸ್ ಜತೆ ಸೇರಿ ಮಹಾ ಘಟ್​ ಬಂಧನ್​​ ಸರ್ಕಾರ ರಚನೆ ಮಾಡಿದ್ದಾರೆ. ಆರ್​ಜೆಡಿ ಜತೆ ಇರಲು ಸಾಧ್ಯವಿಲ್ಲ ಎಂದೇ 2017ರಲ್ಲಿ ಮಹಾ ಘಟ್​ ಬಂಧನ್​ ಬಿಟ್ಟು ಬಂದಿದ್ದ ನಿತೀಶ್​ ಕುಮಾರ್​ ಮತ್ತೆ ಅಲ್ಲಿಯೇ ಹೋಗಿದ್ದನ್ನು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ನಿತೀಶ್​ ಕುಮಾರ್​ ವಿರುದ್ಧ ವಾಗ್ದಾಳಿಯನ್ನೂ ನಡೆಸುತ್ತಿದ್ದಾರೆ. ‘ನಂಬಿಕೆ ದ್ರೋಹ ಮಾಡಿಬಿಟ್ಟಿರಿ ನೀವು’ ಎಂದು ಒತ್ತಿಒತ್ತಿ ಹೇಳುತ್ತಿದ್ದಾರೆ. ಹಾಗೇ, ಸುಶೀಲ್​ ಮೋದಿ ಕೂಡ ಅದನ್ನೇ ಹೇಳಿದ್ದರು. ಉಪರಾಷ್ಟ್ರಪತಿ ಹುದ್ದೆ ಸಿಗದೆ ಇದ್ದಿದ್ದಕ್ಕೆ ಮುನಿಸಿಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು.

ಇದನ್ನೂ ಓದಿ: Bihar Politics | ಬಿಹಾರದಲ್ಲಿ ಸುಶೀಲ್​ ಮೋದಿಯನ್ನು ಬಿಜೆಪಿ ಕಡೆಗಣಿಸಿದ್ದರ ಪರಿಣಾಮವೇ ಇದು?

Exit mobile version