Site icon Vistara News

ಬಿಹಾರ ಕಾನೂನು ಸಚಿವರಿಗೇ ಬಂಧನ ಭೀತಿ; ಸಂಪುಟದ ಶೇ.72ರಷ್ಟು ಮಂತ್ರಿಗಳ ವಿರುದ್ಧ ಇದೆ ಕ್ರಿಮಿನಲ್​ ಕೇಸ್​

Law Minister

ನವ ದೆಹಲಿ: ಬಿಹಾರದಲ್ಲಿ ಆಗಸ್ಟ್​ 16ರಂದು ಮಹಾ ಘಟ್​ ಬಂಧನ್​ ಸರ್ಕಾರದ ಸಂಪುಟ ರಚನೆಯಾಗಿದ್ದು, ಜೆಡಿಯು ಪಕ್ಷದ 11, ಆರ್​ಜೆಡಿಯ 16, ಕಾಂಗ್ರೆಸ್​​ನ ಇಬ್ಬರು ಶಾಸಕರು, ಎಚ್​ಎಎಂನ ಒಬ್ಬ ಮತ್ತು ಒಬ್ಬ ಸ್ವತಂತ್ರ ಶಾಸಕ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೇ, ಖಾತೆ ಹಂಚಿಕೆಯೂ ಆಗಿದೆ. ಅದರಲ್ಲೀಗ ಕಾನೂನು ಇಲಾಖೆಯನ್ನು ಯಾವ ಸಚಿವನಿಗೆ ಕೊಡಲಾಗಿತ್ತೋ, ಅವರೇ ಜೈಲುಪಾಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಆರ್​ಜೆಡಿ ಸಚಿವ ಕಾರ್ತಿಕೇಯ ಸಿಂಗ್​ ವಿರುದ್ಧ ಒಂದು ಕಿಡ್ನ್ಯಾಪ್​ ಕೇಸ್​​ ದೇಖಲಾಗಿದ್ದು, ಆಗಸ್ಟ್​ 16ಕ್ಕೆ ಕೋರ್ಟ್​ಗೆ ಬಂದು ಶರಣಾಗುವಂತೆ ವಾರೆಂಟ್​ ನೀಡಲಾಗಿತ್ತು. ಆದರೆ ಅವರು ಕೋರ್ಟ್​ಗೆ ಹೋಗದೆ, ಇತ್ತ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಕಾರ್ತಿಕೇಯ ವಿರುದ್ಧ ಅಪಹರಣ ಕೇಸ್​ ಇರುವುದಾಗಲೀ, ಅವರಿಗೆ ವಾರೆಂಟ್ ಜಾರಿಯಾಗಿದ್ದಾಗಲೀ ಮುಖ್ಯಮಂತ್ರಿ ನಿತೀಶ್ ಕುಮಾರ್​ಗೆ ಗೊತ್ತೇ ಇಲ್ಲ.

ಕಾರ್ತಿಕೇಯ ಸಿಂಗ್ ವಿರುದ್ಧ ಕಿಡ್ನ್ಯಾಪ್​ ಕೇಸ್​ ದಾಖಲಾಗಿದ್ದು 2014ರಲ್ಲಿ. ರಾಜೀವ್ ರಂಜನ್​ ಎಂಬ ಬಿಲ್ಡರ್​​ನನ್ನು ಅಪಹರಿಸಿದ ಆರೋಪದಡಿ ಒಟ್ಟು 11 ಮಂದಿ ವಿರುದ್ಧ ಪಟನಾದ ಬಿಹ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ಕೇಸ್​​ಗೆ ಸಂಬಂಧಪಟ್ಟ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ತನ್ನ ಮೇಲಿನ ಆರೋಪ ಸುಳ್ಳು ಎಂದೇ ಕಾರ್ತಿಕೇಯ ಸಿಂಗ್​ ಹೇಳುತ್ತ ಬಂದಿದ್ದರೂ, ಆಗಸ್ಟ್​ 16ರೊಳಗೆ ಕೋರ್ಟ್​ಗಾಗಲೀ, ಪೊಲೀಸ್ ಠಾಣೆಗಾಗಲೀ ಬಂದು ಶರಣಾಗಬೇಕು ಎಂದು ವಾರೆಂಟ್​ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕಾರ್ತೀಕ್​ ಈ ಕೇಸ್​​ನಲ್ಲಿ ಆರೋಪಿಯಲ್ಲ ಎಂದೇ ಅವರ ಪರ ವಕೀಲರೂ ವಾದಿಸುತ್ತಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಿತೀಶ್​ ಕುಮಾರ್​ ನನಗೇನೂ ಗೊತ್ತಿಲ್ಲ ಎಂದೇ ವಾದಿಸಿದ್ದಾರೆ.

ಶೇ.72 ಸಚಿವರ ವಿರುದ್ಧ ಕ್ರಿಮಿನಲ್​ ಕೇಸ್​
ಇದೀಗ ರಚನೆಯಾಗಿರುವ ಮಹಾ ಘಟ್​ ಬಂಧನ್​ ಸರ್ಕಾರದಲ್ಲಿನ ಶೇ. 72ರಷ್ಟು ಸಚಿವರ ವಿರುದ್ಧ ಕ್ರಿಮಿನಲ್​ ಕೇಸ್​ ಇರುವುದು ದೃಢಪಟ್ಟಿದೆ. ಅಂದರೆ ಸಂಪುಟ ಸೇರಿದ 31 ಸಚಿವರಲ್ಲಿ 27 ಮಂದಿ ತಮ್ಮ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿ ಮಾಡಿದೆ.ಅದರಲ್ಲೂ 17 ಮಂದಿ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್​ ಕೇಸ್​ ಇದೆ ಎನ್ನಲಾಗಿದೆ. ಅದರಲ್ಲೂ ಆರ್​ಜೆಡಿಯ 15 ಸಚಿವರ ವಿರುದ್ಧವೂ ಒಂದಲ್ಲ ಒಂದು ಕೇಸ್ ಇದ್ದು 11 ಸಚಿವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣವಿದೆ. ಹಾಗೇ, ಜೆಡಿಯುದ 11 ಸಚಿವರಲ್ಲಿ ನಾಲ್ವರು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಇರುವುದನ್ನು ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ: Bihar Politics | ಜೆಡಿಯು ಬಿಟ್ಟು ಹೋದ ಮೇಲೆ ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಿತಿಯೇನು?

Exit mobile version