Site icon Vistara News

ಮೈತ್ರಿ ಮುರಿಯುತ್ತಿದ್ದಂತೆ ಬಿಜೆಪಿ ವಿರುದ್ಧ ನಿತೀಶ್ ವಾಗ್ದಾಳಿ; ಕೆಟ್ಟ ಇತಿಹಾಸ ಇರುವ ಪಕ್ಷವೆಂದ ತೇಜಸ್ವಿ

Nitish kumar JDU

ಪಟನಾ: ರಾಜ್ಯಪಾಲರನ್ನು ಭೇಟಿಯಾಗಿ ಮಹಾ ಘಟ್​ ಬಂಧನ್​ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ‘ನನಗೆ ಏಳು ಪಕ್ಷಗಳಿಂದ 164 ಶಾಸಕರ ಬೆಂಬಲವಿದೆ’ ಎಂದು ನಿತೀಶ್​ ಕುಮಾರ್​ ಹೇಳಿದರು. ಹಾಗೇ, ‘ನಾನು ಎನ್​ಡಿಎ ಒಕ್ಕೂಟ ಬಿಡಲು ಖಂಡಿತ ಕಾರಣಗಳು ಇವೆ. ಬಿಹಾರವನ್ನು ರಕ್ಷಣೆ ಮಾಡುವುದೇ ನಮ್ಮ ಮೂಲ ಧ್ಯೇಯ. ಆದರೆ ಎನ್​ಡಿಎ ಸಮಾಜವನ್ನು ವಿಭಜಿಸುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ನಾನು ಎಂದಿಗೂ ರಾಜಿಯಾಗುವುದಿಲ್ಲ. ಮಹಾ ಘಟ್​ ಬಂಧನ್​​ದಲ್ಲಿ ನಾವೆಲ್ಲ ಸದಾ ಒಗ್ಗಟ್ಟಾಗಿರುತ್ತೇವೆ’ ಎಂದು ಹೇಳಿದ್ದಾರೆ.

ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​ ಮಾತನಾಡಿ, ‘ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನೆಲ್ಲ ನೆಲಸಮ ಮಾಡುತ್ತದೆ ಎಂದು ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು. ಬಿಜೆಪಿಗೆ ಬೆದರಿಕೆ ಹಾಕುವುದು ಮತ್ತು ಜನರನ್ನು ಖರೀದಿಸುವುದು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಬಿಜೆಪಿಯ ಈ ಅಜೆಂಡಾ ಬಿಹಾರದಲ್ಲಿ ಅನುಷ್ಠಾನಕ್ಕೆ ಬರಲು ಬಿಡಬಾರದು ಎಂಬುದೇ ನಮ್ಮೆಲ್ಲರ ಆಶಯವಾಗಿತ್ತು. 1990ರಲ್ಲಿ ಅಡ್ವಾಣಿಯವರ ರಾಮ ರಥಯಾತ್ರೆಯನ್ನು ಬಿಹಾರದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್​ ಯಾದವ್​ ನಿಲ್ಲಿಸಿದ್ದನ್ನು ದೇಶವೇ ನೋಡಿದೆ. ನಮ್ಮ ಆ ಪಟ್ಟನ್ನು ಎಂದಿಗೂ ಸಡಿಲಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಹೊರತು ಪಡಿಸಿ ಉಳಿದೆಲ್ಲ ಪಕ್ಷಗಳೂ ನಿತೀಶ್​ ಕುಮಾರ್​ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ನಿತೀಶ್​ ಕುಮಾರ್ ಅವರೇ ತಮ್ಮ ನಾಯಕ ಎಂದು ಒಪ್ಪಿಕೊಂಡಿವೆ. ಉತ್ತರ ಭಾರತದಲ್ಲಿ ಬಿಜೆಪಿಗೆ ಯಾವ ಪಕ್ಷವೂ ಸ್ನೇಹಿತನಾಗಿ ಉಳಿದಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಉದ್ವಿಗ್ನತೆ ಸೃಷ್ಟಿಸಿದೆ. ಬಿಜೆಪಿಗೆ ಒಂದು ಕೆಟ್ಟ ಇತಿಹಾಸವಿದೆ. ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳನ್ನು ಯಾವುದನ್ನೂ ಅದು ಉಳಿಸುವುದಿಲ್ಲ. ಅದಕ್ಕೆ ಉದಾಹರಣೆ ಪಂಜಾಬ್​ ಮತ್ತು ಮಹಾರಾಷ್ಟ್ರ ಎಂದೂ ತೇಜಸ್ವಿ ಯಾದವ್​ ಕಿಡಿಕಾರಿದರು.

ತೇಜ್​ ಪ್ರತಾಪ್​ ಯಾದವ್​ ಫುಲ್ ಖುಷ್​ !
ಲಾಲೂ ಪ್ರಸಾದ್​ ಯಾದವ್​ರ ಇನ್ನೊಬ್ಬ ಪುತ್ರ ತೇಜ್​ ಪ್ರತಾಪ್​ ಯಾದವ್ ಕೂಡ ಬಿಹಾರದಲ್ಲಾದ ಬೆಳವಣಿಗೆ ಬಗ್ಗೆ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ‘ಶೀಘ್ರವೇ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುತ್ತದೆ. ನಾನು ಈ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅದರಲ್ಲೂ ಯುವಕರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿಯಿಂದ ಬಿಹಾರದಲ್ಲಿ ಮತ್ತೆ ಮಹಾ ಘಟ್​ ಬಂಧನ್​ ಆಡಳಿತ ಬರುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bihar Politics | ಬಿಹಾರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮಹಾ ಘಟ್​ ಬಂಧನ್​ 2.0

Exit mobile version