Site icon Vistara News

Bihar Politics | ನಿತೀಶ್ ಕುಮಾರ್​​ ಹೋಗೋದು ಬಿಜೆಪಿಗೆ ಗೊತ್ತಿತ್ತು, ಆದರೆ ಆ ನಿರೀಕ್ಷೆ ಇರಲಿಲ್ಲ !

Bihar Politics

ಪಟನಾ: ಬಿಜೆಪಿ ನಿರೀಕ್ಷಿಸದ ಹೆಜ್ಜೆಯನ್ನಿಟ್ಟಿದ್ದಾರೆ ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್​ !. ಬಿಜೆಪಿ ನಮ್ಮನ್ನು ತುಚ್ಛವಾಗಿ ನೋಡುತ್ತಿದೆ, ಎನ್​ಡಿಎ ಒಕ್ಕೂಟದ ಒಡೆದು ಆಳುವ ನೀತಿ ನಮಗೆ ಸಹಿಸಲಾಗುತ್ತಿಲ್ಲ ಎಂದೆಲ್ಲ ಹೇಳಿ, ಬಿಜೆಪಿಯಿಂದ ಮೈತ್ರಿ ಕಳೆದುಕೊಂಡಿರುವ ನಿತೀಶ್​ ಕುಮಾರ್​, ಬಿಹಾರದಲ್ಲಿ ಆರ್​ಜೆಡಿ-ಕಾಂಗ್ರೆಸ್​ ಜತೆ ಸೇರಿ ಮತ್ತೊಮ್ಮೆ ಮಹಾ ಘಟ್​ ಬಂಧನ್​ ರಚಿಸಿಕೊಂಡು ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನೂ ಐದು ಪಕ್ಷಗಳು ತಮ್ಮ ಬೆಂಬಲ ಘೋಷಿಸಿವೆ. ಇವ್ಯಾವವೂ ಬಿಜೆಪಿಯ ಗಮನಕ್ಕೆ ಸ್ವಲ್ಪವೂ ಬಾರದೆ ನಡೆದ ಬೆಳವಣಿಗೆಗಳಾ?- ತನ್ನ ಪಕ್ಕದಲ್ಲೇ ಕುಳಿತುಕೊಂಡು ಜೆಡಿಯು ಹೆಣೆದ ಬೆಲೆ ಬಿಜೆಪಿಗೆ ಕಾಣಿಸಲೇ ಇಲ್ಲವಾ? ಈ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.

ಬಿಜೆಪಿ ಮೂಲಗಳು ಹೇಳಿರುವ ಪ್ರಕಾರ, ಆ ಪಕ್ಷಕ್ಕೆ ಸಣ್ಣದೊಂದು ಸುಳಿವು ಸಿಕ್ಕಿತ್ತು. ಜೆಡಿಯು ಪಕ್ಷ ಎನ್​ಡಿಎ ಜತೆಗಿನ ಮೈತ್ರಿ ಕಳೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ, ಯಾವ ಕ್ಷಣದಲ್ಲಿ ಬೇಕಾದರೂ ಅದು ಹೊರಹೋಗಬಹುದು ಎಂಬ ಅನುಮಾನ ಬಿಜೆಪಿ ಪ್ರಮುಖರಿಗೆ ಬಂದಿತ್ತು. ಆದರೆ, ಹೀಗೆ ಹೊರಬಿದ್ದ ನಿತೀಶ್​ ಕುಮಾರ್​ ಮತ್ತೆ ಲಾಲೂ ಪ್ರಸಾದ್​ ಯಾದವ್​​ರ ಆರ್​ಜೆಡಿಯೊಂದಿಗೇ ಸ್ನೇಹಕ್ಕೆ ಕೈಚಾಚುತ್ತಾರೆ ಎಂಬ ಒಂದು ಸಣ್ಣ ಸುಳಿವಾಗಲೀ, ನಿರೀಕ್ಷೆಯಾಗಲೀ ಅವರಿಗೆ ಇರಲಿಲ್ಲ ಎಂದು ಹೇಳಲಾಗಿದೆ.

2013ರಲ್ಲಿ ಒಮ್ಮೆ ಬಿಜೆಪಿ ಮೈತ್ರಿ ಮುರಿದುಕೊಂಡಿದ್ದ ನಿತೀಶ್​ ಕುಮಾರ್​ ಕಾಂಗ್ರೆಸ್​-ಆರ್​ಜೆಡಿಯೊಂದಿಗೆ ಸೇರಿ ಮಹಾ ಘಟ್​ ಬಂಧನ್​ ರಚಿಸಿಕೊಂಡಿದ್ದರು. ಈ ಮಹಾಮೈತ್ರಿ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆರ್​ಜೆಡಿ ಬಗ್ಗೆ ತುಂಬ ಅಸಮಾಧಾನ ಹೊಂದಿಯೇ 2017ರಲ್ಲಿ ಮತ್ತೆ ಅದರ ಮೈತ್ರಿಯನ್ನೂ ಕಳೆದುಕೊಂಡಿದ್ದರು. ಕಾನೂನು-ಸುವ್ಯವಸ್ಥೆ ಸಾಧಿಸಲು ಮಹಾ ಘಟ್​ ಬಂಧನ್​ ಅಡ್ಡಿ ಎಂದು ಆರೋಪಿದ್ದರು. ಅಷ್ಟೇ ಅಲ್ಲ, 2020ರ ಬಿಹಾರ ವಿಧಾನಸಭೆ ಚುನಾವಣೆ ವೇಳೆ, ನಿತೀಶ್​ ಕುಮಾರ್​ ಆರ್​ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆರ್​ಜೆಡಿ ನಾಯಕ ಲಾಲೂ ಪ್ರಸಾದ್​ ಯಾದವ್​ ಮನೆತನದ ಭ್ರಷ್ಟಾಚಾರಗಳ ಬಗ್ಗೆ ಎತ್ತಾಡಿದ್ದರು. ಅಂಥ ನಿತೀಶ್​ ಈಗ ಮತ್ತೆ ಹೋಗಿ ಆರ್​ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ಅನಿರೀಕ್ಷಿತ ಎನ್ನಲಾಗಿದೆ.

NiLu ಕಂ ಬ್ಯಾಕ್​​!
ಬಿಹಾರದಲ್ಲಿ 2017ರಲ್ಲಿ ಆರ್​ಜೆಡಿ-ಜೆಡಿಯು ಬೇರ್ಪಡುವಾಗ ಈ ಎರಡೂ ಪಕ್ಷಗಳ ನಾಯಕರು ಪರಸ್ಪರ, ಅದೆಷ್ಟರ ಮಟ್ಟಿಗೆ ವಾಗ್ದಾಳಿ ನಡೆಸಿದ್ದರು ಎಂದರೆ, ಇನ್ನೆಂದೂ ಜನ್ಮದಲ್ಲಿ ಇವರಿಬ್ಬರು ಒಂದಾಗಲಾರರು ಎಂದೇ ಭಾವಿಸಲಾಗಿತ್ತು. ಲಾಲೂ ಪ್ರಸಾದ್​ ಯಾದವ್​​ ಅವರಂತೂ ನಿತೀಶ್​ ಕುಮಾರ್​​ರನ್ನು ಹಾವಿಗೆ ಹೋಲಿಸಿದ್ದರು. ‘ನಿತೀಶ್​ ಕುಮಾರ್​ ಒಂದು ಹಾವಿದ್ದಂತೆ. ಹಾವು ಪೊರೆ ಕಳಚುವಂತೆ ನಿತೀಶ್​ ಕುಮಾರ್ ಕೂಡ ಎರಡು ವರ್ಷಕ್ಕೊಮ್ಮೆ ಪಕ್ಷ ಬದಲಿಸುತ್ತಾರೆ’ ಎಂದು ಟೀಕಿಸಿದ್ದರು. ನಿತೀಶ್​ ಕುಮಾರ್​ ಕೂಡ ಲಾಲೂ ಪ್ರಸಾದ್​ ಯಾದವ್​ ಮತ್ತು ಅವರ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನೇ ಮಾಡಿ ಹೊರಬಂದಿದ್ದರು. ಆದರೆ ಅವೆಲ್ಲವನ್ನೂ ಮರೆತು ಈಗ ನಿತೀಶ್​ ಕುಮಾರ್​-ಲಾಲೂ ಪ್ರಸಾದ್​ ಯಾದವ್​ (NiLu) ಒಂದಾಗಿದ್ದಾರೆ. ಅಂದು ಲಾಲೂ ಪ್ರಸಾದ್ ಮಾಡಿರುವ ಟ್ವೀಟ್​​ನ್ನು ಬಿಜೆಪಿ ಈಗ ಎತ್ತಾಡಿ, ವ್ಯಂಗ್ಯ ಮಾಡುತ್ತಿದೆ.

ಇದನ್ನೂ ಓದಿ: Bihar politics | ನಿತೀಶ್‌ ಸಿಎಂ, ತೇಜಸ್ವಿ ಡಿಸಿಎಂ ಆಗಿ ಇಂದು 2 ಗಂಟೆಗೆ ಪ್ರಮಾಣ

Exit mobile version