Site icon Vistara News

ಪ್ರತಿಪಕ್ಷಗಳಿಗೆ ಮಹಾ ಘಟ್​ ಬಂಧನ್ ಸಂಭ್ರಮ; ಬಿಜೆಪಿಯಿಂದ ಬಿಹಾರದಾದ್ಯಂತ ಪ್ರತಿಭಟನೆ

BJP Protest In Bihar

ಪಟನಾ: ಬಿಹಾರದಲ್ಲಿ ಜೆಡಿಯು-ಆರ್​​ಜೆಡಿ-ಕಾಂಗ್ರೆಸ್​​ನ ಮಹಾ ಘಟ್​ ಬಂಧನ್​ ಸರ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ಅಸ್ತಿತ್ವಕ್ಕೆ ಬರಲಿದೆ. ರಾಜಭವನದಲ್ಲಿ ನಿತೀಶ್​ ಕುಮಾರ್​ ಮುಖ್ಯಮಂತ್ರಿಯಾಗಿ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಿತೀಶ್ ಕುಮಾರ್​ 8ನೇ ಬಾರಿಗೆ ಸಿಎಂ ಹುದ್ದೆಗೇರಲಿರುವುದು ವಿಶೇಷ. ಗೃಹ ಇಲಾಖೆ ಕೂಡ ತನಗೇ ಬೇಕು ಎಂದು ಆರ್​ಜೆಡಿಯ ತೇಜಸ್ವಿ ಯಾದವ್​ ಕೇಳಿದ್ದರೂ, ನಿತೀಶ್ ಕುಮಾರ್ ಅದನ್ನು ಕೊಡಲು ಒಪ್ಪಿಲ್ಲ. ಗೃಹ ಖಾತೆಯನ್ನು ತಾವೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಪೀಕರ್ ಸ್ಥಾನ ಆರ್​​ಜೆಡಿಗೆ ದಕ್ಕಲಿದೆ.

ಇಂದು ನಿತೀಶ್​ ಕುಮಾರ್​ ಮತ್ತು ತೇಜಸ್ವಿ ಯಾದವ್​ ಜತೆ ಒಟ್ಟು 32 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದರಲ್ಲಿ ಕಾಂಗ್ರೆಸ್​​ಗೆ 4 ಸ್ಥಾನ, ಆರ್​ಜೆಡಿಗೆ 16 ಸ್ಥಾನ ಕೊಡಲಾಗಿದ್ದು, ಜೆಡಿಯು ಪಕ್ಷದ 13 ಶಾಸಕರಿಗೆ ಅವಕಾಶ ಸಿಗಲಿದೆ. ಇಂದು ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬುದರ ಪಟ್ಟಿ ಇನ್ನೂ ಹೊರಬಿದ್ದಿಲ್ಲ. ಒಟ್ಟಾರೆ ಮಹಾ ಘಟ್​ ಬಂಧನ್​ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹೊಸ ಸರ್ಕಾರ ರಚನೆಯ ಸಂಭ್ರಮವೂ ಮನೆ ಮಾಡಿದೆ.

ಬಿಜೆಪಿ ಪ್ರತಿಭಟನೆ
ಇನ್ನೊಂದೆಡೆ ಬಿಹಾರದಲ್ಲಿ ಬಿಜೆಪಿ, ಮಹಾ ಘಟ್​ ಬಂಧನ್​ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದೆ. ನಿತೀಶ್​ ಕುಮಾರ್​ ಅವರು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಇಂದು (ಆಗಸ್ಟ್ 10) ಇಡೀ ದಿನ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಪಟನಾದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರೆಲ್ಲ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ನಿತೀಶ್ ಕುಮಾರ್ ಮುರ್ದಾಬಾದ್​ ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನು ನಿತೀಶ್​ ಕುಮಾರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ರವಿ ಶಂಕರ್​ ಪ್ರಸಾದ್​ ‘ನಿತೀಶ್​ ಕುಮಾರ್​ ತಮ್ಮನ್ನು ತಾವು ಭ್ರಷ್ಟಾಚಾರ ವಿರೋಧಿ, ಕಾಂಗ್ರೆಸ್ ಸಿದ್ಧಾಂತ ಇಷ್ಟಪಡದವನು ಎಂದೇ ಹೇಳಿಕೊಂಡು ಬಂದಿದ್ದರು. ಆದರೆ ಈಗ ಮಾಡಿದ್ದೇನು? ಅಂಥ ಕಾಂಗ್ರೆಸ್​, ಭ್ರಷ್ಟಾಚಾರದೊಂದಿಗೇ ರಾಜಿಯಾದರು’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Bihar Politics | ನಿತೀಶ್ ಕುಮಾರ್​​ ಹೋಗೋದು ಬಿಜೆಪಿಗೆ ಗೊತ್ತಿತ್ತು, ಆದರೆ ಆ ನಿರೀಕ್ಷೆ ಇರಲಿಲ್ಲ !

Exit mobile version