Site icon Vistara News

Bihar Politics | ಬಿಹಾರದಲ್ಲಿ ಸುಶೀಲ್​ ಮೋದಿಯನ್ನು ಬಿಜೆಪಿ ಕಡೆಗಣಿಸಿದ್ದರ ಪರಿಣಾಮವೇ ಇದು?

Sushil Modi Bihar

ಪಟನಾ: ರಾಜ್ಯಸಭಾ ಸಂಸದ, ಬಿಜೆಪಿ ನಾಯಕ ಸುಶೀಲ್​ ಮೋದಿ ರಾಜಕೀಯ ಚಾಣಾಕ್ಷರಲ್ಲಿ ಒಬ್ಬರು. ಪ್ರತಿಪಕ್ಷಗಳ ನಡೆಯನ್ನು ಸೂಕ್ಷ್ಮವಾಗಿ ಅರಿಯಬಲ್ಲವರು. ವಿಪಕ್ಷಗಳ ಹೆಜ್ಜೆಯನ್ನು ಅರಿಯುವ ಸಾಮರ್ಥ್ಯ ಅವರಿಗೆ ಕರಗತ. ತಮ್ಮ ಸಾಮರ್ಥ್ಯ, ಆಕ್ರಮಣಕಾರಿ ಕಾರ್ಯತಂತ್ರಗಳ ಮೂಲಕ, ಪ್ರಮುಖ ಮಾಹಿತಿಗಳನ್ನೆಲ್ಲ ಕ್ಷಣಾರ್ಧದಲ್ಲಿ ಸಂಗ್ರಹಿಸಿಬಿಡುತ್ತಾರೆ. ಸದಾ ಪ್ರತಿಪಕ್ಷಗಳ ಮೇಲೆ ಕಣ್ಣಿಡುವ ಸುಶೀಲ್​ ಮೋದಿ, ಯಾವುದೇ ಒಂದು ವಿವಾದಾತ್ಮಕ ವಿಷಯಗಳು ಎದ್ದಾಗ ಅದಕ್ಕೆ ಸಂಬಂಧಪಟ್ಟ ಸಾಕ್ಷಿಯನ್ನೆಲ್ಲ ತ್ವರಿತವಾಗಿ ಸಂಗ್ರಹಿಸಿ, ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾರೆ. ಹಾಗೇ, ಟ್ವಿಟರ್​​ನಲ್ಲಿ ಕೂಡ ಸದಾ ಸಕ್ರಿಯವಾಗಿರುತ್ತಾರೆ.

ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಹಾಳಾಗಿ, ಮಹಾ ಘಟ್​ ಬಂಧನ್​ ಸರ್ಕಾರ ರಚನೆಯಾದ ಹೊತ್ತಲ್ಲಿ, ಸುಶೀಲ್​ ಮೋದಿ ಬಗ್ಗೆ ಇಷ್ಟು ನಿರೂಪಣೆ ಯಾಕೆ? ಎಂಬ ಪ್ರಶ್ನೆ ಮೂಡಬಹುದು !-ಹಾಗೇ, ಪ್ರತಿಪಕ್ಷಗಳ ಸಣ್ಣ ನಡೆಯನ್ನೂ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರುವ ಸುಶೀಲ್​ ಮೋದಿ ಇದ್ದಾಗ್ಯೂ ಬಿಹಾರ ಬಿಜೆಪಿಗೆ ಅದು ಹೇಗೆ ಕೈತಪ್ಪಿ ಹೋಯಿತು ಎಂಬುದೂ ಸಹಜ ಕುತೂಹಲ. ಆದರೆ, ಸುಶೀಲ್​ ಮೋದಿಯನ್ನು ಬಿಹಾರ ಸಕ್ರಿಯ ರಾಜಕಾರಣದಲ್ಲಿ ಇಡದೆ, ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇ ಬಿಜೆಪಿಗೆ ಮುಳ್ಳಾಯಿತು ಎಂಬುದೇ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.. ಮತ್ತು ಉತ್ತರ !

ಸುಶೀಲ್​ ಮೋದಿ ಕಡೆಗಣನೆ !
ಯಾವುದೇ ರಾಷ್ಟ್ರೀಯ ಪಕ್ಷವಿರಲಿ, ಪ್ರಾದೇಶಿಕ ರಾಜಕೀಯ ಪಕ್ಷವಿರಲಿ. ಅತ್ಯಂತ ವಾಸ್ತವಿಕವಾಗಿ ಅವುಗಳನ್ನು ವಿಶ್ಲೇಷಿಸಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯಾಗಿದ್ದ ಸುಶೀಲ್​ ಮೋದಿ, ಅದರ ಆಧಾರದ ಮೇಲೆ ಆಡಳಿತ ಸರ್ಕಾರಕ್ಕೆ ಸಲಹೆ-ಸೂಚನೆ ಕೊಡುತ್ತಿದ್ದರು. 2017ರಿಂದ 2020ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ, ಹಣಕಾಸು ಇಲಾಖೆಯನ್ನೂ ನಿರ್ವಹಣೆ ಮಾಡಿದ್ದಾರೆ. ಆದರೆ ಇಷ್ಟೆಲ್ಲ ಆದರೂ ಬಿಜೆಪಿ ಅವರನ್ನು ಕಡೆಗಣಿಸಿದೆ ಎಂಬ ಮಾತು ಬಲವಾಗಿ ಕೇಳಿಬಂದಿದೆ. ಪ್ರತಿಪಕ್ಷಗಳ ನಾಯಕರೇ ಅದನ್ನು ಹೇಳುತ್ತಿದ್ದರು. ಇಷ್ಟೆಲ್ಲ ಆದ ಮೇಲೆ 2020ರಲ್ಲಿ ಸುಶೀಲ್​ ಮೋದಿಯನ್ನು ಬಿಜೆಪಿ ರಾಜ್ಯಸಭೆಗೆ ಕಳಿಸಿತು. ಅದಾದ ಮೇಲೆ ಅವರು ಬಿಹಾರವನ್ನು ಬಿಟ್ಟರು. ಇಲ್ಲಿನ ರಾಜಕಾರಣದಿಂದ ದೂರವೇ ಆದರು. ಆಗ ನಿತೀಶ್​ ಕುಮಾರ್​ ಕೂಡ ಒಂದೆರಡು ಸಂದರ್ಭದಲ್ಲಿ ಮೋದಿಯನ್ನು ನೆನಪಿಸಿಕೊಂಡಿದ್ದುಂಟು. ‘ಈ ಹೊತ್ತಲ್ಲಿ ಸುಶೀಲ್​ ಮೋದಿ ಇರಬೇಕಿತ್ತು. ಅವರು ಯಾವುದೇ ವಿಷಯವನ್ನು ನೋಡುವ ದೃಷ್ಟಿಕೋನವೇ ಬೇರೆ’ ಎಂದು ನಿತೀಶ್​ ಹೇಳುತ್ತಿದ್ದರು.

ಲಾಲೂ ಪ್ರಸಾದ್​ ಯಾದವ್ ಕುಟುಂಬವೇ ಟಾರ್ಗೆಟ್
ಈ ಹಿಂದೆ ನಿತೀಶ್​ ಕುಮಾರ್​ ಅವರು ಲಾಲೂ ಪ್ರಸಾದ್​ ಯಾದವ್​ ಜತೆ ಸೇರಿ ಮಹಾಘಟ್​ ಬಂಧನ್​ ಸರ್ಕಾರ ಮಾಡಿದ ಸಂದರ್ಭದಲ್ಲಿ, ಲಾಲೂ ಪ್ರಸಾದ್​ ಪಕ್ಕದಿಂದ ನಿತೀಶ್​ ಕುಮಾರ್​ರನ್ನು ಮತ್ತೆ ಎಳೆದುಕೊಂಡು ಬರುವಲ್ಲಿ ಸುಶೀಲ್​ ಮೋದಿ ಪಾತ್ರ ದೊಡ್ಡದು. ಲಾಲೂ ಪ್ರಸಾದ್​ ಯಾದವ್​ ಕುಟುಂಬದ ಭ್ರಷ್ಟಾಚಾರ, ಅವರು ಗಳಿಸಿಕೊಂಡ ಅಕ್ರಮ ಹಣದ ಬಗ್ಗೆ ಜನರಿಗೆ ತಿಳಿಸಿದರು. ಸೋಷಿಯಲ್ ಮೀಡಿಯಾ ಅಕೌಂಟ್​ಗಳು, ಸಾಲುಸಾಲು ಸುದ್ದಿಗೋಷ್ಠಿಗಳ ಮೂಲಕ ಲಾಲೂ ಪ್ರಸಾದ್ ಯಾದವ್​ ಅವರ ಅಕ್ರಮಗಳನ್ನು ಹೇಳಿದ್ದೇ ಹೇಳಿದ್ದು !. ಪಟನಾ ಮೃಗಾಲಯಕ್ಕಾಗಿ, ಮಾಲ್​ನ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಮಣ್ಣು ಹಗರಣಗಳ ಸಾಕ್ಷಿಗಳನ್ನು ಸುಶೀಲ್​ ಮೋದಿ ಒದಗಿಸಿದರು. ಇವೆರಡು ಕೇಸ್​​ನ ತನಿಖೆ ನಡೆಯುತ್ತಿದ್ದಾಗಲೇ, ಲಾಲೂ ಕುಟುಂಬದ ಉಳಿದೆಲ್ಲ ಭ್ರಷ್ಟ ವ್ಯವಹಾರಗಳನ್ನೂ ದಾಖಲೀಕರಿಸಿದ್ದರು. ರಾಬ್ರಿ ದೇವಿ 18 ಫ್ಲ್ಯಾಟ್​​ಗಳನ್ನು ಹೊಂದಿದ್ದಾರೆ ಎಂಬುದನ್ನೂ ಮೊದಲು ಹೇಳಿದ್ದು ಸುಶೀಲ್​ ಮೋದಿಯೇ. ಇಷ್ಟೆಲ್ಲ ಆಗಿದ್ದು 2017ರಲ್ಲಿ.

ಬಿಹಾರದಲ್ಲಿ 2017ರಲ್ಲಿ ಮಹಾ ಘಟ್​ ಬಂಧನ್​ ಸರ್ಕಾರವನ್ನು ಪತನ ಮಾಡಿ, ನಿತೀಶ್​ ಕುಮಾರ್​ ಮತ್ತೆ ಬಿಜೆಪಿಗೆ ಸೇರುವಂತೆ ಮಾಡಿದ ನಂತರ, ಇವರ ಆಕ್ರಮಣಮಕಾರಿ ವಾಗ್ದಾಳಿ, ದಾಖಲೆಗಳೊಂದಿಗೆ ಲಾಲೂ ಪ್ರಸಾದ್​ ಕುಟುಂಬವನ್ನು ಅಲ್ಲಾಡಿಸಿದ್ದನ್ನು ನೋಡಿದ ಮೇಲೆ, ಕೇಂದ್ರ ಬಿಜೆಪಿ ಸರ್ಕಾರಕ್ಕೂ ಇವರ ಸಾಮರ್ಥ್ಯ ಅರ್ಥವಾಗಿತ್ತು. ಪ್ರತಿಪಕ್ಷಗಳಂತೂ ಸುಶೀಲ್​ ಮೋದಿಯನ್ನು ಒಬ್ಬ ವಿಲನ್​​ನಂತೆ ನೋಡುತ್ತಿದ್ದವು. ಹಾಗೇ, ಅವರ ಸಾಮರ್ಥವನ್ನು ಮೆಚ್ಚಿಕೊಂಡಿದ್ದೂ ಇದೆ. ಇಷ್ಟೆಲ್ಲ ಆದ ಮೇಲೆ ಕೂಡ ಬರುಬರುತ್ತ ಸುಶೀಲ್​ ಮೋದಿಯನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಲಾಯಿತು. ಬಿಹಾರ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡಲಿಲ್ಲ. ಹೀಗೆ ಸುಶೀಲ್​ ಮೋದಿಯನ್ನು ಬಿಹಾರ ಸಕ್ರಿಯ ರಾಜಕಾರಣದಿಂದ ದೂರವಿಟ್ಟಿದ್ದಕ್ಕೆ, ಈಗ ಬಿಜೆಪಿ ಬೆಲೆ ತೆರುತ್ತಿದೆ ಎಂಬುದು ರಾಜಕೀಯ ವಲಯದಿಂದ ಕೇಳಿ ಬರುತ್ತಿರುವ ಅಭಿಪ್ರಾಯ.

ಇದನ್ನೂ ಓದಿ: Bihar politics | ಬಿಹಾರ ಕ್ಯಾಬಿನೆಟ್‌ನಲ್ಲಿ ಆರ್‌ಜೆಡಿಗೆ ಸಿಂಹಪಾಲು?

Exit mobile version