ಪಾಟ್ನಾ: ಆರ್ಜೆಡಿ ನಾಯಕ, ಶಾಸಕ ಯದುವಂಶ ಕುಮಾರ್ (Yaduvansh Kumar Yadav) ಅವರ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಬ್ರಾಹ್ಮಣರು ಭಾರತದವರಲ್ಲ, ಅವರು ರಷ್ಯಾದಿಂದ ಬಂದು ನೆಲೆಸಿದವರು ಎಂದು ಯದುವಂಶ ಕುಮಾರ್ ಹೇಳಿದ ಮಾತುಗಳೀಗ ವ್ಯಾಪಕ ಟೀಕೆಗೆ ಗುರಿಯಾಗಿವೆ. ಇತ್ತೀಚೆಗೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯದುವಂಶ ಕುಮಾರ್ ‘ಯಾವುದೇ ಬ್ರಾಹ್ಮಣರು ಭಾರತದವರಲ್ಲ, ರಷ್ಯಾ ಮತ್ತು ಇತರ ಕೆಲವು ಯುರೋಪಿಯನ್ ದೇಶಗಳಿಂದ ಇಲ್ಲಿಗೆ ಬಂದು ನೆಲೆಸಿದವರು ಎಂಬುದನ್ನು ಡಿಎನ್ಎ ಟೆಸ್ಟ್ ಸಾಬೀತುಪಡಿಸುತ್ತದೆ. ಬ್ರಾಹ್ಮಣರು ನಮ್ಮನ್ನು ಒಡೆದು, ಆಳಲು ಯತ್ನಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದರೆ ನಾವು ಬ್ರಾಹ್ಮಣರನ್ನು ಇಲ್ಲಿಂದ ಓಡಿಸಬೇಕು’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಯಾದವ ಸಮುದಾಯ ಮೂಲತಃ ಭಾರತದ್ದು ಎಂದಿದ್ದಾರೆ. ಆ ವಿಡಿಯೊ ವೈರಲ್ ಆದ ಬೆನ್ನಲ್ಲೇ ಆರ್ಜೆಡಿ ನಾಯಕನ ವಿರುದ್ಧ ಕ್ರೋಧ ವ್ಯಕ್ತವಾಗಿದೆ.
ಯದುವಂಶ ಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಮಾತುಗಳನ್ನಾಡಲು ಅವರಿಗೆ ನಾಚಿಕೆಯಾಗಬೇಕು. ದೇಶದಲ್ಲಿ ನಡೆಯುವ ಕೋಮು ಗಲಭೆ ಹಿಂದೆ ಇರುವುದು ಇಂಥ ವ್ಯಕ್ತಿಗಳ ಕೈವಾಡವೇ ಆಗಿದೆ ಎಂದು ಬಿಜೆಪಿ ನಾಯಕ ರಕ್ಷಿತ್ ಹೇಳಿದ್ದಾರೆ. ಬಿಜೆಪಿ ಶಾಸಕ ನೀರಜ್ ಕುಮಾರ್ ಬಬ್ಲು ಪ್ರತಿಕ್ರಿಯೆ ನೀಡಿ ‘ಆರ್ಜೆಡಿ ನಾಯಕನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತೋರುತ್ತದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್ಜೆಡಿ ನಾಯಕ ಮನೋಜ್ ಕುಮಾರ್ ಝಾ ಮತ್ತು ಜನತಾ ದಳ (ಯುನೈಟೆಡ್) ನಾಯಕ ಸಂಜಯ್ ಝಾ ಅವರು ಈ ಬಗ್ಗೆ ವಿವರಣೆ ನೀಡಬೇಕು. ಬ್ರಾಹ್ಮಣ ಸಮುದಾಯ ಭಾರತದ್ದೋ ಅಥವಾ ಬೇರೆ ದೇಶದ್ದೋ ಎಂದು ಅವರೇ ಹೇಳಬೇಕು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Land For Job Scam: ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮನೆಗೆ ಬಂದ ಸಿಬಿಐ ಅಧಿಕಾರಿಗಳು; ರಾಬ್ರಿ ದೇವಿ ವಿಚಾರಣೆ
ಜೆಡಿ(ಯು)ಗೆ ಇರುಸುಮುರುಸು
ಆರ್ಜೆಡಿ ನಾಯಕ ಯದುವಂಶ ಕುಮಾರ್ ಅವರ ಈ ಬ್ರಾಹ್ಮಣ ವಿರೋಧಿ ಹೇಳಿಕೆ ಆ ಪಕ್ಷದ ಮಿತ್ರ ಪಕ್ಷ ಜನತಾ ದಳ (ಯುನೈಟೆಡ್)ಕ್ಕೇ ಸರಿ ಹೋಗಲಿಲ್ಲ. ಪಕ್ಷದ ವಕ್ತಾರ ಅಭಿಷೇಕ್ ಕುಮಾರ್ ಝಾ ಅವರು ಪ್ರತಿಕ್ರಿಯೆ ನೀಡಿ, ‘ಆರ್ಜೆಡಿ ನಾಯಕನ ಹೇಳಿಕೆ ಅಸಹ್ಯವಾಗಿದೆ. ಪರಶುರಾಮ ಏನು ರಷ್ಯಾದಿಂದ ಬಂದವರೇ? ಸುಮ್ಮನೆ ಮಾಧ್ಯಮದವರ ಎದುರು ಸುದ್ದಿಯಾಗಲು ಇಂಥ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದ್ದಾರೆ.