Site icon Vistara News

ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ

Justin Trudeau

India violating Vienna Convention Says Canada PM Justin Trudeau

ಒಟ್ಟಾವ: ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ (Sikhs For Justice) ಸಂಘಟನೆಯ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಭಾರತ ಆಗ್ರಹಿಸಿದ ಬೆನ್ನಲ್ಲೇ ಕೆನಡಾ ಸರ್ಕಾರವು ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಆರಂಭವಾದ ಬಳಿಕ ಖಲಿಸ್ತಾನಿ ಉಗ್ರ ಬೆದರಿಕೆ ಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರವು ತನಿಖೆ ಹಾಗೂ ಭದ್ರತೆಗೆ ಕೆನಡಾ ಸರ್ಕಾರವನ್ನು ಒತ್ತಾಯಿಸಿತ್ತು.

“ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ಹಾಕಿರುವ ಪ್ರಕರಣವನ್ನು ಕೆನಡಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮ್ಮ ದೇಶದ ಭದ್ರತಾ ಸಂಸ್ಥೆಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿವೆ. ಹಾಗೆಯೇ, ಏರ್‌ ಇಂಡಿಯಾ ವಿಮಾಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ವಿಮಾನಗಳ ಸ್ಫೋಟದ ಬೆದರಿಕೆಯನ್ನು ನಾವು ಸಹಿಸುವುದಿಲ್ಲ” ಎಂದು ಕೆನಡಾ ಸಾರಿಗೆ ಸಚಿವ ಪ್ಯಾಬ್ಲೊ ರೊಡ್ರಿಗ್ಯೂಸ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ

ಭಾರತದ ಆಗ್ರಹ ಏನಾಗಿತ್ತು?

ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ವಿಡಿಯೊ ಕುರಿತು ಒಟ್ಟಾವದಲ್ಲಿರುವ ಭಾರತದ ಹೈ ಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಪ್ರತಿಕ್ರಿಯಿಸಿದ್ದರು. “ಕೆನಡಾದಿಂದ ಭಾರತಕ್ಕೆ ಆಗಮಿಸುವ, ಭಾರತದಿಂದ ಕೆನಡಾಗೆ ತೆರಳುವ ಏರ್‌ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂಬುದಾಗಿ ಭಾರತ ಕೆನಡಾ ಸರ್ಕಾರಕ್ಕೆ ಕೋರುತ್ತದೆ. ಈ ಕುರಿತು ಕೆನಡಾ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗುತ್ತಿದೆ.” ಎಂದು ತಿಳಿಸಿದ್ದರು. ಭಾರತದಿಂದ ಕೆನಡಾ ನಗರಗಳಾದ ಟೊರಂಟೊ, ವ್ಯಾಂಕವರ್‌ಗೆ ವಾರದಲ್ಲಿ ಹಲವು ವಿಮಾನಗಳು ಸಂಚರಿಸುತ್ತವೆ. ಹಾಗಾಗಿ ಭಾರತವು ಕೆನಡಾ ಸರ್ಕಾರಕ್ಕೆ ಭದ್ರತೆ ಒದಗಿಸುವಂತೆ ಆಗ್ರಹಿಸಿತ್ತು.

ಇದನ್ನೂ ಓದಿ: ಇಂದಿರಾ ಗಾಂಧಿ ಜನ್ಮದಿನದಂದು ಏರ್‌ ಇಂಡಿಯಾ ವಿಮಾನ ಸ್ಫೋಟಕ್ಕೆ ಖಲಿಸ್ತಾನಿ ಉಗ್ರರ ಸಂಚು; ವಿಡಿಯೊ ರಿಲೀಸ್!

ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಪೋಸ್ಟ್‌ ಮಾಡಿದ್ದ. “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version