Site icon Vistara News

CJI N V Ramana | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನಿರ್ಗಮನ

N V Ramana

16 ತಿಂಗಳ ಕಾಲ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ಅವರು ಆಗಸ್ಟ್ 26ರಂದು ನಿವೃತ್ತರಾಗಿದ್ದಾರೆ. ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ (CJI N V Ramana) ಅವರ ಸೇವೆಯಿಂದ ದೇಶಕ್ಕೆ ಸಾಕಷ್ಟು ಲಾಭವಾಗಿದೆ. 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು 2021 ಆಗಸ್ಟ್ 24ರಂದು ನೇಮಕವಾಗಿದ್ದು. ಕಾನೂನು ವಲಯದಲ್ಲಿ ಅವರು ನ್ಯಾಯ ಮತ್ತು ನಿಷ್ಠರತನಕ್ಕೆ ಹೆಸರುವಾಸಿ.

ಮುಖ್ಯ ನ್ಯಾಯಮೂರ್ತಿಯಾಗಿ ಎನ್. ವಿ. ರಮಣ ಅವರು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಕೆಲವು ಹೊಸ ಮನ್ವಂತರಗಳಿಗೆ ಕಾರಣವಾಗಿದ್ದಾರೆ. ರಮಣ ಅವರ ಕೆಲಸದ ಕೊನೆಯ ದಿನದಂದು ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರಕ್ಕೆ ಚಾಲನೆ ನೀಡಲಾಯಿತು. ಭಾರೀ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಪೆಗಾಸಸ್, ಶಿವಸೇನೆಯ ರಾಜಕೀಯ ಬಿಕ್ಕಟ್ಟು, ಯುಪಿಎಪಿಎ ಮತ್ತು ಬೇನಾಮಿ ಕಾನೂನಿನ ನಿರ್ದಿಷ್ಟ ಸೆಕ್ಷನ್ ರದ್ದು, ದೇಶದ್ರೋಹ ಕಾನೂನು ರದ್ದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿರ್ಣಾಯಕ ತೀರ್ಪು ನೀಡುವಲ್ಲಿ ರಮಣ ಅವರ ಕೊಡುಗೆ ಹಿರಿದಾಗಿದೆ.

ತಮ್ಮ ಕೆಲಸದ ಕೊನೆಯ ದಿನವಾದ ಆಗಸ್ಟ್ 26ರಂದು ಐದು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಚುನಾವಣಾ ಉಚಿತ ಕೊಡುಗೆ, 2007ರ ಗೋರಖಪುರ ದಂಗೆ ಪ್ರಕರಣ, ಕರ್ನಾಟಕದ ಮೈನಿಂಗ್ ಕೇಸ್, ರಾಜಸ್ಥಾನದ ಮೈನಿಂಗ್ ಲೀಸ್ ಮತ್ತು ದಿವಾಳಿ ಕಾನೂನಿಗೆ ಸಂಬಂಧಿಸಿದಂತೆ ಪ್ರರಕರಣದಲ್ಲಿ ತೀರ್ಪು ನೀಡಿದ್ದಾರೆ.

ಸುದ್ದಿಯಿಂದ ತೀರ್ಪು ಬರೆಯುವವರೆಗೂ
ಸಿಜೆಐ ಎನ್ ವಿ ರಮಣ ಅವರು ತಮ್ಮ ನ್ಯಾಯ ಪರಿಪಾಲನೆಯ ಮೂಲಕವೇ ಖ್ಯಾತವೆತ್ತವರು. ಅವರು ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೆಗಿನ ಜೀವನ ಹಾದಿ ಕೂಡ ರೋಚಕವಾಗಿದೆ. ವಕಿಲೀಕಿ ಆರಂಭಿಸುವ ಮುನ್ನ ಅವರು ಪತ್ರಕರ್ತರರಾಗಿದ್ದರು. ‘ಸುದ್ದಿ’ ಬರೆಯುತ್ತಿದ್ದ ವ್ಯಕ್ತಿಯೊಬ್ಬರು ‘ತೀರ್ಪು’ ಬರೆಯುವವರೆಗೂ ಬೆಳೆದ ರೀತಿ ಯಾರನ್ನಾದರೂ ಪ್ರಭಾವಿಸುತ್ತದೆ. ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಸೇವೆಯನ್ನು ಬಂದ್‌ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್‌.ವಿ.ರಮಣ ನೇತೃತ್ವದ ಪೀಠ. ಸಂವಿಧಾನದಡಿಯಲ್ಲಿ ಇಂಟರ್ನೆಟ್‌ ಸೇವೆಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್‌ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತ್ತು.

ಅನೇಕ ತೀರ್ಪುಗಳು
ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಇದರಿಂದಾಗಿ ಹಾಲಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ನಿಯಮಿತವಾಗಿ ಬಹಿರಂಗಪಡಿಸುವಂತಾಯಿತು. ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್‌ ಸಲೇಮ್‌ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು.

ಸಂವಿಧಾನ ತಜ್ಞ
ಎನ್ ವಿ ರಮಣ ಅವರು ಸಂವಿಧಾನ ತಜ್ಞರೂ ಹೌದು. ಅವರ ತಜ್ಞತೆಯು ಸಾಂವಿಧಾನಿಕ ಬಿಕ್ಕಟ್ಟು ಎದುರಾದಾಗಲೆಲ್ಲ ನೆರವಿಗೆ ಬಂದಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ, ಕರ್ನಾಟಕ ಶಾಸಕರ ಅನರ್ಹ ಪ್ರರಣ, 2019ರಲ್ಲಿ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಇತ್ಯಾದಿ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್‌ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.

ವಕೀಲಿಕೆಯಿಂದ ವೃತ್ತಿ ಆರಂಭ
ಎನ್ ವಿ ರಮಣ ಅವರು ಆಂಧ್ರಪ್ರದೇಶ ಹೈಕೋರ್ಟ್‌, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

ಆಂಧ್ರ ಹೈಕೋರ್ಟ್‌ಗೆ ಜಡ್ಜ್
2000 ಜೂನ್‌ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್‌ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. 2013 ಸೆಪ್ಟೆಂಬರ್‌ 2ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದರು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ.

ಕೃಷಿಕ ಕುಟುಂಬದಲ್ಲಿ ಜನನ
ಆಂಧ್ರದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್‌ ವಿ ರಮಣ ಅವರು 1957 ಆಗಸ್ಟ್‌ 27ರಂದು ಜನಿಸಿದರು. ತಂದೆ ಗಣಪತಿ ರಾವ್‌ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್‌ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿದ್ದಾರೆ. ಪೊನ್ನಾವರಮ್‌ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು. ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಭಾಗಿಯಾಗಿದ್ದರು. ನಾಗರಿಕ ಹಕ್ಕುಗಳ ಪ್ರತಿಪಾದರು. ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ.

ವಿವಾದವೂ ಇದೆ!
ಈ ಹಿಂದೆ ಆಂಧ್ರದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಂದಿನ ಸಿಜೆಐಗೆ ಪುತ್ರ ಬರೆದು ರಮಣ ಅವರು ವಿರುದ್ಧ ಆರೋಪ ಮಾಡಿದ್ದರು. ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದರು. ಆಗ ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು.

ರಮಣ ಸೇವೆ ಅಂತ್ಯ
ಕಡಿಮೆ ಅವಧಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರೂ ಎನ್ ವಿ ರಮಣ ಅವರು ತಮ್ಮ ಮುಂದೆ ಬಂದ ಎಲ್ಲ ಪ್ರಕರಣಗಳಲ್ಲಿ ಐತಿಹಾಸಿಕ ಎನ್ನಬಹುದಾದ ರೀತಿಯಲ್ಲಿ ತೀರ್ಪು ನೀಡಿದ್ದಾರೆ. ಈ ಎಲ್ಲ ತೀರ್ಪುಗಳಲ್ಲಿ ಜನಪರತೆಯನ್ನು ಕಾಣಬಹುದು. ಹಲವು ಸಂದರ್ಭದಲ್ಲಿ ಶಾಸಕಾಂಗವನ್ನು ಅವರು ಕೆಣಕದೇ ಬಿಟ್ಟಿಲ್ಲ. ಸುಪ್ರೀಂ ಕೋರ್ಟ್ ಮಾತ್ರವೇ ಈ ದೇಶದ ಸಂವಿಧಾನ ನಿಜವಾದ ರಕ್ಷಕ ಎಂಬಂಥ ಮಾತುಗಳನ್ನು ಯಾವುದೇ ಮುಲಾಜಿಲ್ಲದೇ ಹೇಳಿದ್ದಾರೆ; ದೇಶದ್ರೋಹ ಕಾನೂನಿನ ಔಚಿತ್ಯವನ್ನು ಪ್ರಶ್ನಿಸಿದ್ದಾರೆ; ನ್ಯಾಯಮೂರ್ತಿಗಳ ವಿರುದ್ಧ ಟ್ರಾಲ್‌ಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ | CJI NV Ramana | ಎನ್​ ವಿ ರಮಣ ನಿವೃತ್ತಿ ದಿನ ಇಂದು; ಆ 27ಕ್ಕೆ ನ್ಯಾ.ಲಲಿತ್​ ಸಿಜೆಐ ಆಗಿ ಅಧಿಕಾರ ಸ್ವೀಕಾರ

Exit mobile version