Site icon Vistara News

KC Venugopal : ಬಿಜೆಪಿ ಅಭ್ಯರ್ಥಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೆ. ಸಿ ವೇಣುಗೋಪಾಲ್​

KC Venugopal

ಅಲಪ್ಪುಳ: ಕೇರಳದ ಅಲಪ್ಪುಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ಕಾಂಗ್ರೆಸ್​ ಮುಖಂಡ ಕೆ. ಸಿ ವೇಣುಗೋಪಾಲ್ (KC Venugopal)​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ತಮ್ಮನ್ನು ಗಣಿ ಮಾಫಿಯಾ ಜತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಶೋಭಾ ಸುರೇಂದ್ರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಈ ಹಲವಾರು ಆರೋಪಗಳನ್ನು ಮಾಡಿದ್ದರು.

ರಾಜಸ್ಥಾನದ ರಾಜ್ಯಸಭಾ ಸಂಸದ ಕೆ.ಸಿ.ವೇಣುಗೋಪಾಲ್ ಅವರು ವೈಯಕ್ತಿಕವಾಗಿ ಅಲಪ್ಪುಳ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರ ಕಚೇರಿ ಮೂಲಗಳು ದೃಢಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ ಸುರೇಂದ್ರನ್, ಕೆ.ಸಿ.ವೇಣುಗೋಪಾಲ್ ಅವರ ಕಾನೂನು ಕ್ರಮಗಳನ್ನು ಎದುರಿಸುವೆ ಎಂದಿದ್ದಾರೆ. ತಮ್ಮ ಬಳಿ ಇರುವ ಪುರಾವೆಗಳ ಆಧಾರದ ಮೇಲೆ ಆರೋಪಗಳನ್ನು ಮಾಡಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕನ ವಿರುದ್ಧ ತಮ್ಮ ಆರೋಪಗಳನ್ನು ಮತ್ತೊಂದು ಬಾರಿ ಪುನರುಚ್ಛರಿಸಿದ್ದಾರೆ.

ಬಿಜೆಪಿ ಸೇರಿದ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್

ದೆಹಲಿ: ಲೋಕಸಭಾ ಚುನಾವಣೆ(Lok Sabha Election 2024)ಯ ಹೊಸ್ತಿಲಿನಲ್ಲಿ ಕಾಂಗ್ರೆಸ್‌ (Congress)ಗೆ ಮತ್ತೊಂದು ಹಿನ್ನಡೆಯಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಕಪೂರ್ (Ajay Kapoor) ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ, ಉತ್ತರ ಪ್ರದೇಶದ ಕಾನ್ಪುರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಜಯ್‌ ಕಪೂರ್‌ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಇದನ್ನೂ ಓದಿ : Lok Sabha Election 2024 : ದಕ್ಷಿಣ ಕನ್ನಡ ಬಿಜೆಪಿ ಟಿಕೆಟ್‌ ಪಡೆದ ಕ್ಯಾ. ಬ್ರಿಜೇಶ್‌ ಚೌಟ ಯಾರು? ಇಲ್ಲಿದೆ ವಿವರ

ಅಜಯ್‌ ಕಪೂರ್‌ ಹೇಳಿದ್ದೇನು?

ಬಳಿಕ ಬಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜಯ್‌ ಕಪೂರ್, ಇದು ಪುನರ್ಜನ್ಮವಿದ್ದಂತೆ ಎಂದು ವ್ಯಾಖ್ಯಾನಿಸಿದರು. “ದೇಶದ ಪ್ರಧಾನಿ ಮೋದಿ ಅವರ ಕುಟುಂಬವನ್ನು ಸೇರುವ ಮೂಲಕ ನಾನು ಭಾವಪರವಶನಾಗಿದ್ದೇನೆ” ಎಂದು ಭಾವುಕರಾದರು. ʼʼಕಾಂಗ್ರೆಸ್ ಜತೆಗಿನ 35 ವರ್ಷಗಳ ಸುದೀರ್ಘ ಒಡನಾಟದಲ್ಲಿ ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ದೇಶದ ಪ್ರಗತಿಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಮೋದಿ ಅವರ ಕುಟುಂಬವನ್ನು ಸೇರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.

ಅಜಯ್‌ ಕಪೂರ್‌ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ. “ನಾನು 35 ವರ್ಷಗಳಿಂದ ಕಾಂಗ್ರೆಸ್‌ಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಈಗ ನನ್ನ ಹುದ್ದೆ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿʼʼ ಎಂದು ಅವರು ಬರೆದುಕೊಂಡಿದ್ದಾರೆ.

ಮೋದಿ ಯುಗ ಪುರುಷ

ಪ್ರಧಾನಿ ಮೋದಿ ಅವರನ್ನು ಅಜಯ್‌ ಕಪೂರ್‌ ‘ಯುಗಪುರುಷ’ ಎಂದು ಬಣ್ಣಿಸಿದರು. ಉಳಿದ ರಾಜಕೀಯ ಜೀವನವನ್ನು ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. “ಇದು ನನ್ನ ಹೊಸ ಜೀವನದ ಪ್ರಾರಂಭ. ನಾನು ನನ್ನ ಮುಂದಿನ ಜೀವನವನ್ನು ಬಿಜೆಪಿ ನಾಯಕತ್ವಕ್ಕೆ ಅರ್ಪಿಸುತ್ತೇನೆ. ಪ್ರಧಾನಿ ಮೋದಿ ಅವರ ಕುಟುಂಬದ ಸದಸ್ಯನಾಗಿ, ನಾನು ಬಿಜೆಪಿ ಮತ್ತು ಸಮಾಜಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ” ಎಂದು ಹೇಳಿದರು.

ಅಜಯ್‌ ಕಪೂರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ʼʼಕಾಂಗ್ರೆಸ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕಪೂರ್ ಸುಮಾರು ಆರು ವರ್ಷಗಳ ಕಾಲ ಬಿಹಾರದ ಉಸ್ತುವಾರಿಯಾಗಿದ್ದರು. ಅವರು ಬಿಜೆಪಿಗೆ ಆಗಮಿಸಿರುವುದರಿಂದ ಬಿಹಾರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆʼʼ ಎಂದು ಹೇಳಿದರು.

Exit mobile version