Site icon Vistara News

CWC Meeting: ಪ್ಯಾಲೆಸ್ತೀನಿಯರಿಗೆ ಕಾಂಗ್ರೆಸ್ ಬೆಂಬಲ; ಸಿಡಬ್ಲೂಸಿಯಲ್ಲಿ ನಿರ್ಣಯ ಅಂಗೀಕಾರ

CWC Meeting express solidarity with Palestinian cause

ನವದೆಹಲಿ: ಇಸ್ರೇಲ್ ಮೇಲಿನ ಹಮಾಸ್ ಬಂಡುಕೋರರ ಭೀಕರ ದಾಳಿಯನ್ನು (Israel Palestine War) ಖಂಡಿಸಿದ್ದ ಕಾಂಗ್ರೆಸ್ ಪಕ್ಷವು(Congress Party), ಸೋಮವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ (CWC Meeting) ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡಿದೆ(Support To Palestine). ಈ ಕುರಿತಾಧ ನಿರ್ಣಯವನ್ನು ಅಂಗೀಕರಿಸಿರುವ ಕಾಂಗ್ರೆಸ್ ಕಾರ್ಯಕಾರಣಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉಂಟಾಗಿರುವ ಸಂಘರ್ಷದ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅಲ್ಲದೇ, ನಿರ್ಣಯದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡಿದೆ. ಕಾಂಗ್ರೆಸ್ ಪಕ್ಷವೂ ಮೊದಲಿನಿಂದ ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡುತ್ತಾ ಬಂದಿದೆ. ಅದೇ ನೀತಿಯನ್ನು ಈಗಲೂ ಮುಂದುವರಿಸಿದೆ. ಈ ಮಧ್ಯೆ, ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ”ಪ್ಯಾಲೆಸ್ತೀನ್ ಕುರಿತಾದ ನಿಲುವು ಕಾಂಗ್ರೆಸ್ ಪಕ್ಷದ್ದು, ವಾಜಪೇಯಿ ಅವರ ನಿಲುವು ಒಂದೇ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ವಿದೇಶಾಂಗ ನಿಲುವು ಒಂದೇ ಆಗಿರುತ್ತದೆ. ಈ ಕುರಿತು ಕಾರ್ಯಕಾರಿಣಿಯಲ್ಲಿ ಹೆಚ್ಚು ಚರ್ಚೆಯಾಗಿಲ್ಲ” ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ ಈಗ 1200ಕ್ಕೆ ಏರಿಕೆಯಾಗಿದೆ. ಮೂರನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧದಲ್ಲಿ ಸದ್ಯಕ್ಕೆ ಇಸ್ರೇಲ್ ಮೇಲುಗೈ ಸಾಧಿಸಿದೆ. ಗಾಜಾಪಟ್ಟಿಯಲ್ಲಿ ಹಮಾಸ್ ಬಂಡುಕೋರರ ಮೇಲೆ ವೈಮಾನಿಕ ದಾಳಿಯನ್ನು ಜಾರಿಯಲ್ಲಿಟ್ಟಿದೆ.

ಕಳೆದ ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟ ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಬಗ್ಗೆ ಕಾಂಗ್ರಸ್ ಕಾರ್ಯಕಾರಿಣಿ ತನ್ನ ನಿರಾಶೆ ಮತ್ತು ದುಃಖವನ್ನು ವ್ಯಕ್ತಪಡಿಸುತ್ತದೆ. ಕಾಂಗ್ರೆಸ್ ಕಾರ್ಯಕಾರಿಣಿ ಪ್ಯಾಲೆಸ್ತೀನಿಯನ್ ಜನರ ನೆಲ ಮತ್ತು ಹಕ್ಕುಗಳಿಗಾಗಿ ತನ್ನ ದೀರ್ಘಕಾಲದ ಬೆಂಬಲವನ್ನು ಮುಂದುವರಿಸುತ್ತದೆ ಮತ್ತು ಸ್ವ-ಆಡಳಿತ ಮತ್ತು ಘನತೆ ಮತ್ತು ಗೌರವದಿಂದ ಬದುಕಲು ಅವಕಾಶ ನೀಡುವಂತೆ ಹೇಳುತ್ತದೆ ಎಂದು ಕಾಂಗ್ರೆಸ್ ತನ್ನ ನಿರ್ಣಯದಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Israel Palestine War : ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಸಾವಿರಾರು ಕರಾವಳಿಗರು, ಹೇಗಿದೆ ಪರಿಸ್ಥಿತಿ?

ದೇಶಾದ್ಯಂತ ಜಾತಿ ಗಣತಿ- ಕಾಂಗ್ರೆಸ್ ಪಕ್ಷ ಭರವಸೆ

2024ರಲ್ಲಿ ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೆ ಬಂದರೆ, ಮಹಿಳಾ ಮೀಸಲಾತಿಯನ್ನು (Women reservation bill) ಇತರ ಹಿಂದುಳಿದ ವರ್ಗಕ್ಕೂ (OBC women) ವಿಸ್ತರಿಸಲಾಗುವುದು, ದೇಶಾದ್ಯಂತ ಜಾತಿಯಾಧರಿತ ಜನಗಣತಿಯನ್ನು (nationwide caste-based Census) ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಖರ್ಗೆ ಅವರು, ನಾವು 2024 ರಲ್ಲಿ ಅಧಿಕಾರಕ್ಕೆ ಬಂದಾಗ ಒಬಿಸಿ ಮಹಿಳೆಯರಿಗೆ ಮೀಸಲಾತಿಯನ್ನು ವಿಸ್ತರಿಸುವುದು ಸೇರಿದಂತೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ನಾವು ಸಂಕಲ್ಪ ಮಾಡುತ್ತೇವೆ. ಪರಿಣಾಮಕಾರಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳಿಗೆ ನಿರ್ಣಾಯಕವಾದ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿಯನ್ನು ಸಹ ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಾತಿಗಣತಿಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪಕ್ಷವು ಸೂಚಿಸಿದೆ ಎಂದು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version