Site icon Vistara News

Ashok Chavan Resigns to Congress: ಕಾಂಗ್ರೆಸ್‌ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್, ಬಿಜೆಪಿ ಸೇರ್ಪಡೆ ಚರ್ಚೆ

ashok chavan

ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ್ ಚವಾಣ್ ಅವರು (Ashok Chavan Resigns to Congress) ಕಾಂಗ್ರೆಸ್‌ ತೊರೆದಿದ್ದಾರೆ. ಸಾರ್ವತ್ರಿಕ ಚುನಾವಣೆ (Lok Sabha Election 2024) ಮತ್ತು ರಾಜ್ಯ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಇದು ರಾಜ್ಯ ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದೆ. ಚವಾಣ್‌ ಬಿಜೆಪಿ (BJP) ಸೇರಲಿದ್ದಾರೆ ಎಂಬ ಮಾಹಿತಿ ದಟ್ಟವಾಗಿದೆ.

ಚವಾಣ್‌ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಭೋಕರ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಚವಾಣ್ ಅವರು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಅವರು ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಹುಶಃ ಈ ಹಿರಿಯ ನಾಯಕನಿಗೆ ರಾಜ್ಯಸಭೆಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ.

ಚವಾಣ್‌ ಅವರು ಬಿಜೆಪಿಗೆ ಸೇರಿದರೆ, ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕಳೆದ ತಿಂಗಳು ಪಕ್ಷವನ್ನು ತೊರೆದು ಏಕನಾಥ್ ಶಿಂಧೆ (Eknath shinde) ನೇತೃತ್ವದ ಶಿವಸೇನೆಗೆ ಸೇರಿದ ನಂತರ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಎರಡನೇ ದೊಡ್ಡ ಪಕ್ಷಾಂತರ ಅನಿಸಲಿದೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಬಾಬಾ ಸಿದ್ದಿಕ್ ಕೂಡ ಪಕ್ಷವನ್ನು ತೊರೆದು ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ತೆರಳಿದ್ದರು.

ಈ ಹಿಂದೆ, ಚವಾಣ್ ಬಿಜೆಪಿಗೆ ಸೇರುವ ಬಗ್ಗೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಕೇಳಲಾಗಿತ್ತು. “ಅಶೋಕ್ ಚವಾಣ್ ಬಗ್ಗೆ ನಾನು ಮಾಧ್ಯಮಗಳಿಂದ ಕೇಳಿದ್ದೇನೆ. ಕಾಂಗ್ರೆಸ್‌ನಿಂದ ಹಲವಾರು ಉತ್ತಮ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ಕೆಲವು ದೊಡ್ಡ ನಾಯಕರು ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಅವರು ಖಂಡಿತವಾಗಿಯೂ ಬಿಜೆಪಿ ಸೇರಲಿದ್ದಾರೆ” ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಮುಖ್ಯಸ್ಥ ನಾನಾ ಪಟೋಲೆ ಅವರೊಂದಿಗೆ ಚವಾಣ್ ಅವರು ಭಿನ್ನಾಭಿಪ್ರಾಯ ಹೊಂದಿದ್ದರು. ಅದು ಅವರ ಹೊಸ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರರಾವ್ ಚವಾಣ್ ಅವರ ಪುತ್ರನಾದ ಅಶೋಕ್ ಚವಾಣ್, ನಾಂದೇಡ್ ಪ್ರದೇಶದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ. ಪ್ರಸ್ತುತ ಪಕ್ಷಾಂತರದಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಪ್ರದೇಶದಲ್ಲಿ ಹಾನಿಯಾಗಲಿದೆ.

ಇದನ್ನೂ ಓದಿ: Gun Fire : ಶಿಂಧೆ ಬಣದ ಶಿವಸೇನಾ ನಾಯಕನ ಮೇಲೆ ಗುಂಡು ಹಾರಿಸಿದ ಮಹಾರಾಷ್ಟ್ರ ಬಿಜೆಪಿ ಶಾಸಕ

Exit mobile version