Site icon Vistara News

ಉಗ್ರರ ಜತೆ ಗುಂಡಿನ ಕಾಳಗ; ಕರ್ನಲ್, ಮೇಜರ್, ಡಿವೈಎಸ್‌ಪಿ ಹುತಾತ್ಮ

Colonel Manpreet Singh, Major Aashish Dhonchak, deputy superintendent of Jammu and Kashmir Police Humayun Bhat

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಕರ್ನಲ್ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದ (Kokernag area) ಅಡಗುತಾಣದಲ್ಲಿ ಉಗ್ರರು (Terrorists) ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದು, ಯೋಧರು ಅವರು ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ, ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಕಾಳಗ ನಡೆದಿದೆ(Gunfight With Terrorists). ಹುತಾತ್ಮರಾದ ಮೂವರ ಪೈಕಿ ಒಬ್ಬರು ಕರ್ನಲ್, ಮೊತ್ತಬ್ಬರು ಮೇಜರ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಇದ್ದಾರೆ.

ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಷ್ ಧೋಂಚಕ್, ಜಮ್ಮು-ಕಾಶ್ಮೀರ ಪೊಲೀಸ್‌ ಇಲಾಖೆಯ ಡೆಪ್ಯುಟಿ ಸೂಪರಿಟೆಂಡೆಂಟ್ ಹುಮಾಯೂನ್ ಭಟ್ ಅವರು ಗುಂಡಿನ ಕಾಳಗದಲ್ಲಿ ತೀವ್ರವಾಗ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅವರು ಕೊನೆಗೆ ಉಸಿರು ಚೆಲ್ಲಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವವಾದ ಕಾರಣ ಹುಮಾಯೂನ್ ಭಟ್ ಅವರು ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಲ್ ಮನಪ್ರೀತ್ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ ಯೂನಿಟ್ ಮುನ್ನಡೆಸುತ್ತಿದ್ದರು. ಸಿಂಗ್ ಅವರ ತಂಡವೇ ಮುಂಚೂಣಿಯಲ್ಲಿದ್ದು, ಉಗ್ರರ ಜತೆ ಕಾದಾಡುತ್ತಿತ್ತು. ಈ ವೇಳೆ, ಉಗ್ರರ ಗುಂಡು ಕರ್ನಲ್ ಅವರಿಗೆ ತಾಗಿತು ಮತ್ತು ಅವರು ತೀವ್ರವಾಗಿ ಗಾಯಗೊಂಡರು.

ಉಗ್ರರ ಅಡಗುತಾಣದ ನಿಖರ ಮಾಹಿತಿಯ ಹಿನ್ನೆಲೆಯಲ್ಲಿ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಸೆಪ್ಟೆಂಬರ್ 12 ಮತ್ತು 13 ರ ಮಧ್ಯರಾತ್ರಿಯಲ್ಲಿ ಅನಂತನಾಗ್‌ನ ಗರೋಲ್ ಪ್ರದೇಶದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಮಧ್ಯೆ ನಿಲ್ಲಿಸಲಾಗಿತ್ತು. ಬುಧವಾರ ಬೆಳಗ್ಗೆ ಮತ್ತೆ ಭಯೋತ್ಪಾದಕರು ಅಡಗುತಾಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯ ನಂತರ, ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Terrorists Killed | ಜಮ್ಮುವಿನಲ್ಲಿ ನಾಲ್ವರು ಉಗ್ರರ ಹತ್ಯೆ; ಭದ್ರತಾ ಪಡೆ ಗುಂಡಿನ ದಾಳಿಗೆ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್​

ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರ ಮಾಡಲಾಯಿತು. ಅಲ್ಲದೇ, ಎನ್‌ಕೌಂಟರ್ ಸ್ಥಳಕ್ಕೆ ಡಿಜಿಪಿ, ಎಡಿಜಿಪಿ ಮತ್ತು 15 ಕಾರ್ಪ್ಸ್ ಕಮಾಂಡರ್ ಕೂಡ ಆಗಮಿಸಿ, ಪರಿಸ್ಥಿಯನ್ನು ಅವಲೋಕಿಸಿದರು. ಯೋಧರ ಸಾವಿಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version