Site icon Vistara News

INDIA Bloc: ಇಂದು ಇಂಡಿಯಾ ಬ್ಲಾಕ್‌ 4ನೇ ಸಭೆ, ಒಂದೇ ಅಜೆಂಡಾ!

INDIA bloc leaders will meet today virtually

ಹೊಸದಿಲ್ಲಿ: ಇಂದು ರಾಜಧಾನಿಯಲ್ಲಿ ಇಂಡಿಯಾ ಮೈತ್ರಿಕೂಟ (INDIA Bloc) ಪಕ್ಷಗಳ ಸಭೆ ಅಶೋಕ ಹೋಟೆಲ್‌ನಲ್ಲಿ ನಡೆಯಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಎದುರಿಸುವುದು ಏಕೈಕ ಪ್ರಮುಖ ಅಜೆಂಡಾ ಆಗಿದೆ. ಅದಕ್ಕೆ ಜಂಟಿ ಕಾರ್ಯತಂತ್ರ ರೂಪಿಸುವಿಕೆ, ಸೀಟು ಹಂಚಿಕೆ, ಜಂಟಿ ಪ್ರಚಾರದ ನೀಲನಕ್ಷೆ ಇತ್ಯಾದಿಗಳು ಸಭೆಯಲ್ಲಿ ಚರ್ಚೆಯಾಗಲಿವೆ.

ನಿನ್ನೆ ವಿರೋಧ ಪಕ್ಷಗಳ 78 ಸಂಸತ್‌ ಸದಸ್ಯರನ್ನು ಚಳಿಗಾಲದ ಅಧಿವೇಶನದ (Parliament winter session) ಅಂತ್ಯದವರೆಗೆ ಸ್ಪೀಕರ್‌ ಅಮಾನತುಗೊಳಿಸಿದ್ದರು. ಇದಾಗಿ ಒಂದು ದಿನದ ನಂತರ, ಇಂಡಿಯಾ ಬ್ಲಾಕ್ ಸಭೆ ನಡೆಸುತ್ತಿದೆ. ಕಳೆದ ವಾರದ ಅಮಾನತಿನೊಂದಿಗೆ ಒಟ್ಟು 92 ಪ್ರತಿಪಕ್ಷ ಸಂಸದರನ್ನು ಈ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ. ಇವರಲ್ಲಿ 14 ಮಂದಿ ಸೌಲಭ್ಯ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಇದು ದೀರ್ಘಾವಧಿ ಅಮಾನತಿಗೂ ಶಿಫಾರಸು ಮಾಡಬಹುದು.

ಮೈತ್ರಿಕೂಟದ ಸಭೆಗೆ ಒಂದು ದಿನ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata banerjee) ಅವರು, 2024ರ ಸಾರ್ವತ್ರಿಕ ಚುನಾವಣೆಯ ನಂತರ ಇಂಡಿಯಾ ಬ್ಲಾಕ್‌ನ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯನ್ನು ಸೋಲಿಸಲು ಸೀಟು ಹಂಚಿಕೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.

ಬ್ಯಾನರ್ಜಿ ಅವರು ಸೋಮವಾರ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ಮತ್ತು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದರು. ಟಿಎಂಸಿ ಸಂಸದ ಮತ್ತು ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸೌತ್ ಅವೆನ್ಯೂ ನಿವಾಸದಲ್ಲಿ ಸುಮಾರು 45 ನಿಮಿಷ ಮೀಟಿಂಗ್‌ ನಡೆಯಿತು. ಮಂಗಳವಾರದಿಂದ 10 ದಿನಗಳ ವಿಪಸ್ಸನ ಧ್ಯಾನಕ್ಕಾಗಿ ಕೇಜ್ರಿವಾಲ್ ಅಜ್ಞಾತ ಸ್ಥಳಕ್ಕೆ ಹೋಗಲಿದ್ದಾರೆ.

ಇಂಡಿಯಾ ಬ್ಲಾಕ್ ಸಭೆಗೆ ಮುನ್ನ ನಡೆದದ್ದು

ಸಭೆಯ ಅಜೆಂಡಾದಲ್ಲಿ ಏನಿದೆ?

ಕೇವಲ ನಾಲ್ಕು ತಿಂಗಳು ಬಾಕಿ ಇರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸುವುದು ಮಹಾಮೈತ್ರಿಕೂಟದ ನಾಲ್ಕನೇ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಇದು ಕಾಂಗ್ರೆಸ್‌ಗೆ ನಿರ್ಣಾಯಕವಾಗಿದೆ. ವಿಶೇಷವಾಗಿ ಪಕ್ಷವು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶವನ್ನು ಕಳೆದುಕೊಂಡಿದೆ. “ಮೈ ನಹಿಂ, ಹಮ್” (ನಾನಲ್ಲ, ನಾವು) ಎಂಬ ಏಕತೆಯ ಥೀಮ್‌ನೊಂದಿಗೆ ಮುನ್ನಡೆಯಲು ಪಕ್ಷಗಳು ಉದ್ದೇಶಿಸಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಗ್ಗೂಡಿರುವ ವಿವಿಧ ವಿರೋಧ ಪಕ್ಷಗಳ ನಾಯಕರ ಮುಂದಿರುವ ಪ್ರಮುಖ ಸವಾಲೆಂದರೆ, ಪರ್ಯಾಯ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದು. ಬಣದ ಮುಂದಿರುವ ತಕ್ಷಣದ ಸವಾಲು ಎಂದರೆ ಸಂಚಾಲಕ, ವಕ್ತಾರ ಮತ್ತು ಸಾಮಾನ್ಯ ಕಾರ್ಯದರ್ಶಿಯ ಆಯ್ಕೆಗೆ ಒಮ್ಮತ ಮೂಡಿಸುವುದು.

ಇದನ್ನೂ ಓದಿ: Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!

Exit mobile version