Site icon Vistara News

Chandrayaan 3: ಚಂದ್ರಯಾನ-3 ಮಿಷನ್ ಜುಲೈ 13ಕ್ಕಲ್ಲ, 14ಕ್ಕೆ ಲಾಂಚ್! ದಿನಾಂಕ ಬದಲಿಸಿದ ಇಸ್ರೋ

Chandrayaan 3

ನವದೆಹಲಿ: ಬಹು ನಿರೀಕ್ಷೆಯ ಚಂದ್ರಯಾನ-3 (Chandrayaan 3) ಉಡಾವಣೆಯ ದಿನಾಂಕ ಮತ್ತು ಸಮಯವನ್ನು ಪರಿಷ್ಕರಿಸಲಾಗಿದೆ. ಹೊಸ ವೇಳಾ ಪಟ್ಟಿ ಪ್ರಕಾರ ಚಂದ್ರಯಾನ ಮಿಷನ್‌ಗೆ ಜುಲೈ 14 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಾಲನೆ ದೊರೆಯಲಿದೆ. ಈ ಮೊದಲು ಜುಲೈ 13ಕ್ಕೆ ಲಾಂಚ್ ನಿಗದಿಯಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – ISRO) ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ (satish dhawan space centre) ಕೇಂದ್ರದಲ್ಲಿ ಜಿಎಸ್‌ಎಲ್‌ವಿ ಮಾರ್ಕ್ 3 (GLSV Mark III) ಹೆವಿ-ಲಿಫ್ಟ್ ಲಾಂಚ್ ರಾಕೆಟ್ ಬಳಸಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಈ ಮಿಷನ್‌ಗೆ 615 ಕೋಟಿ ರೂ. ವೆಚ್ಚವಾಗಿದೆ.

ಚಂದ್ರಯಾನ-3 ಮಿಷನ್, ಚಂದ್ರನತ್ತ ಭಾರತದ ಮೂರನೇ ಪ್ರಾಜೆಕ್ಟ್ ಆಗಿದೆ. ಇದಕ್ಕೂ ಮೊದಲು 2019ರಲ್ಲಿ ಕೈಗೊಳ್ಳಲಾಯದ ಚಂದ್ರಯಾನ-2 ವಿಫಲವಾಗಿತ್ತು. ಅದರ ಬೆನ್ನಲ್ಲೇ ಚಂದ್ರಯಾನ 3 ಘೋಷಣೆ ಮಾಡಲಾಗಿತ್ತು. ಈಗ ಈ ಮಿಷನ್ ಆರಂಭಕ್ಕೆ ಘೋಷಣೆ ಮಾಡಲಾಗಿದೆ. 2019ರಲ್ಲಿ ಕೈಗೊಳ್ಳಲಾದ ಚಂದ್ರಯಾನ 2 ವೇಳೆ, ವಿಕ್ರಮ್ ಲ್ಯಾಂಡರ್ ಕಠಿಣವಾದ ಲ್ಯಾಂಡಿಂಗ್ ಅನ್ನು ಅನುಭವಿಸಿತು. ಅದು ರೋವರ್ ಅನ್ನು ಯೋಜಿಸಿದಂತೆ ನಿಯೋಜಿಸುವುದನ್ನು ಮಾಡಲಾಗಲಿಲ್ಲ. ಹಾಗಾಗಿ, ಆ ಮಿಷನ್ ವೈಫಲ್ಯ ಕಂಡಿತ್ತು.

ಜುಲೈನಲ್ಲಿ ಕೈಗೊಳ್ಳಲಾಗುವ ಚಂದ್ರಯಾನ-3 ಮಿಷನ್ ಬಗ್ಗೆ ಇಸ್ರೋ ಅಧಿಕಾರಿಗಳು ಹೆಚ್ಚು ಆಶಾವಾದಿಯಾಗಿದ್ದಾರೆ. ಈ ಮಿಷನ್, ಚಂದ್ರನ ಬಗ್ಗೆ ನಮ್ಮ ತಿಳಿವಳಿಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಚಂದ್ರನ ಮೇಲ್ಮೈನಲ್ಲಿ ರೋಬೋಟಿಕ್ ರೋವರ್‌ನ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ಮುಖ್ಯವ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಾಯಗಳನ್ನು ತಗ್ಗಿಸಲು ಮತ್ತು ಯಶಸ್ವಿ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಚಂದ್ರಯಾನ-3 ಕಠಿಣ ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಗಳಿಗೆ ಒಳಗಾಗಿದೆ. ಹಿಂದಿನ ಮಿಷನ್‌ನಿಂದ ಕಲಿತ ಪಾಠಗಳ ಆಧಾರದ ಮೇಲೆ ಚಂದ್ರನ ಪೇಲೋಡ್ ಕಾನ್ಫಿಗರೇಶನ್ ಸೇರಿದಂತೆ ಮಿಷನ್ ವಿನ್ಯಾಸವನ್ನು ಆಪ್ಟಿಮೈಸ್ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: ಚಂದ್ರಯಾನ-3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ: ಇಸ್ರೋ

ಚಂದ್ರಯಾನ 3 ಮಿಷನ್ ಯಶಸ್ವಿಗೊಳಿಸಲು ಪಣತೊಟ್ಟಿರುವ ಇಸ್ರೋ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಚಂದ್ರಯಾನ-2 ರೀತಿಯಲ್ಲಿ ಚಂದ್ರಯಾನ 3ರಲ್ಲೂ ಲ್ಯಾಂಡರ್ ಮತ್ತು ರೋವರ್‌ಗಳು ಇರಲಿವೆ. ಸಂವಹನ ರಿಲೇ ಉಪಗ್ರಹದಂತೆ ವರ್ತಿಸಲು ವಿನ್ಯಾಸಗೊಳಿಸಲಾದ ಪ್ರೊಪಲ್ಷನ್ ಮಾಡ್ಯೂಲ್, ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯಲ್ಲಿರುವವರೆಗೆ ಲ್ಯಾಂಡರ್ ಮತ್ತು ರೋವರ್ ಅನ್ನು ಒಯ್ಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ 3 ಮಿಷನ್ ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ಮಹತ್ವದ್ದಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version