Site icon Vistara News

ಆ ಪರಶಿವನೂ ಶಿವಸೇನೆಯನ್ನು ಉಳಿಸಲಾರ; ಉದ್ಧವ್‌ ರಾಜೀನಾಮೆ ಬೆನ್ನಲ್ಲೇ ಕಂಗನಾ ಖಡಕ್‌ ಮಾತು

kangana ranaut

ಮುಂಬೈ : ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನವಾದ ಬೆನ್ನಲ್ಲೇ ಬಾಲಿವುಡ್​ ಕಾಂಟ್ರವರ್ಸಿ ಕ್ವೀನ್‌ ಕಂಗನಾ ರಣಾವತ್ ಮತ್ತೆ ಉದ್ಧವ್ ಠಾಕ್ರೆ ವಿರುದ್ಧ ಧ್ವನಿ ಎತ್ತಿದ್ದಾರೆ. ಬುಧವಾರ (ಜೂ.29) ಉದ್ಧವ್ ಠಾಕ್ರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕವೇ ನಟಿ ಕಂಗನಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದರಲ್ಲವರು ಇತಿಹಾಸವನ್ನು ನೆನಪಿಸಿದ್ದಾರೆ.

“1975ರ ನಂತರ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಸಮಯ ಇದು. 1975 (ತುರ್ತು ಪರಿಸ್ಥಿತಿ ಸಂದರ್ಭ)ರಲ್ಲಿ ಹಿರಿಯ ರಾಜಕಾರಣಿ ಜೆ.ಪಿ.ನಾರಾಯಣ್‌ ಅಂದಿನ ಚಕ್ರಾಧಿಪತ್ಯಕ್ಕೆ ಸವಾಲು ಹಾಕಿದರು. ನಂತರ ದಿನಗಳಲ್ಲಿ ಆ ಸಿಂಹಾಸನ ಉರುಳಿಬಿತ್ತು. 2020ರಲ್ಲಿಯೇ ನಾನು ಹೇಳಿದ್ದೆ, ಈ ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ. ಯಾರಾದರೂ ತಮ್ಮ ರಾಜಕೀಯ ಸ್ಥಾನ-ಮಾನದ ಅಹಂಕಾರದಿಂದ ಅದನ್ನು ಮುರಿದರೆ, ಅಂಥವರ ವೈಯಕ್ತಿಕ ಪ್ರತಿಷ್ಠೆ ಖಂಡಿತವಾಗಿಯೂ ನುಚ್ಚುನೂರಾಗುತ್ತದೆ ಎಂದು, ಈಗ ಅದೇ ಆಗಿದೆ. ಭಗವಾನ್‌ ಹನುಮಂತ ಶಿವನ 12ನೇ ಅವತಾರ ಎಂಬ ನಂಬಿಕೆಯಿದೆ. ಅಂಥ ಹನುಮಂತನನನ್ನು ಭಜಿಸುವ ಹನುಮಾನ್‌ ಚಾಲೀಸಾವನ್ನೇ ಶಿವಸೇನೆ ನಿಷೇಧಿಸಿತು. ಹೀಗಿರುವಾಗ ಆ ಪರಶಿವನೂ ಕೂಡ ಶಿವಸೇನೆಯನ್ನು ರಕ್ಷಿಸಲು ಸಾಧ್ಯವಿಲ್ಲ. ಹರ..ಹರ ಮಹದೇವ್‌” ಎಂದು ಕಂಗನಾ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ಇದನ್ನು ಓದಿ| ಕಂಗನಾ ಕಂಗಾಲು!: Dhaakad ಚಿತ್ರದ 8ನೇ ದಿನದ ಕಲೆಕ್ಷನ್‌ ₹4420, ನೋಡಿದ್ದು 20 ಜನ

2020ರಲ್ಲಿ ಮುಂಬೈನಲ್ಲಿದ್ದ ಕಂಗನಾ ರಣಾವತ್​ ಕಚೇರಿಯನ್ನು ಅಕ್ರಮವಾಗಿ ಕಟ್ಟಿಸಲಾಗಿದೆ ಎಂದು ಅದನ್ನು ಉದ್ಧವ್ ಠಾಕ್ರೆ ಸರ್ಕಾರ ನೆಲಸಮಗೊಳಿಸಿತ್ತು. ಈ ವೇಳೆ ಕಂಗನಾ, ಉದ್ಧವ್ ಠಾಕ್ರೆ ಸರ್ಕಾರದ ವಿರುದ್ದ ಅಕ್ರೋಶಭರಿತವಾಗಿ ಮಾತನಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ಹೀಗೆ ಕಚೇರಿಯನ್ನು ಧ್ವಂಸಗೊಳಿಸುವ ಮೂಲಕ ನನ್ನ ವಿರುದ್ಧ ಸೇಡು ತೀರಿಸಿಕೊಂಡಂತಾಯಿತು ಎಂದು ನೀವು ಭಾವಿಸಿದ್ದೀರಾ ಉದ್ಧವ್‌ ಠಾಕ್ರೆ? ಇಂದು ನನ್ನ ಬಂಗಲೆ ಕುಸಿದಿದೆ, ನಾಳೆ ನಿಮ್ಮ ಗರ್ವ ಮುರಿಯಲಿದೆ ಎಂದು ಶಾಪ ಹಾಕಿದ್ದರು. ಸದ್ಯ ಈಗ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ನಿಮ್ಮ ಮಾತು ಸರಿಯಾಗಿದೆ ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ನೆಟ್ಟಿಗರು ಕಂಗನಾ ವಿಡಿಯೊಗೆ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನು ಓದಿ| ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣವಚನ ಸ್ವೀಕಾರ ಇಂದು

.  

Exit mobile version