Site icon Vistara News

LPG Cylinders Blast: ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಒಂದೇ ಕುಟುಂಬದ ಐವರ ಸಾವು

cylinder blast

cylinder blast

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಮನೆಯೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು (LPG Cylinders Blast) ಒಂದೇ ಕುಟುಂಬದ ಐವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಕಾಕೋರಿಯ ಹತಾ ಹಜರತ್‌ ಸಾಹೇಬ್‌ ಕಾಕೋರಿಯಲ್ಲಿ ಮಂಗಳವಾರ (ಮಾರ್ಚ್‌ 5) ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮುಶೀರ್‌ ಅಲಿ ಎಂಬವರ ಮನೆಯಲ್ಲಿನ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಸಂಭವಿಸಿದ ಈ ದುರಂತದಲ್ಲಿ ಒಟ್ಟು ಒಂಬತ್ತು ಜನರು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಐವರು ಮೃತಪಟ್ಟಿದ್ದು, ಈ ಪೈಕಿ ಮೂವರು ಮಕ್ಕಳೂ ಸೇರಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಮೃತರನ್ನು ಮುಶೀರ್‌ (50), ಹಸನ್‌ ಬಾನೊ (45), ರೈನಾ (7), ಹುಮಾ (4), ಹಿನಾ (2) ಎಂದು ಗುರುತಿಸಲಾಗಿದೆ. ಸಿಲಿಂಡರ್‌ ಸ್ಫೋಟದಿಂದ ಇಡೀ ಮನೆಗೆ ಹಾನಿಯಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರ ಸಾಹಸಪಟ್ಟರು. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಕಿ ಕಾರಣ ಸ್ಫೋಟಕ ವಸ್ತು?

ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡ ಕೂಡಲೇ ಬೆಂಕಿಯು ಮನೆಯಾದ್ಯಂತ ಹರಡಿದ್ದರಿಂದ ಒಳಗಿದ್ದವರಿಗೆ ತಕ್ಷಣ ಹೊರ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚಿನ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಶೀರ್ ಅಲಿ ಪಟಾಕಿ ಮಾರಾಟಗಾರರಾಗಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂಬ ಊಹೆಯೂ ಇದೆ. ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಿಂದ ರಸ್ತೆಗೆ ಬಿದ್ದು ಯುವಕ ಸಾವು

ಬೆಂಗಳೂರು: ಯುವಕನೊಬ್ಬ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು (Bengaluru News) ಮೃತಪಟ್ಟಿದ್ದಾನೆ. ಯುವಕ ಬಿದ್ದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದೆ. ಜತೆಗೆ ಕಾರಿನ ಎಡಬದಿ ನಜ್ಜುಗುಜ್ಜಾಗಿದೆ. ತಮಿಳುನಾಡಿನ ವೆಲ್ಲೂರು ಮೂಲದ ಯುವಕ ಗೌರೀಶ್ (21) ಮೃತ ದುರ್ದೈವಿ.

ಚಲಿಸುತ್ತಿದ್ದ ರೈಲಿನಿಂದ ಅಚಾನಕ್‌ ಆಗಿ ಬಿದ್ದಿರಬಹುದಾ? ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನ್ನಾ ಎಂಬ ಅನುಮಾನ ಮೂಡಿದೆ. ಕಿಯಾ ಸೊನೆಟ್ ಕಾರನ್ನು ಓಡಿಸಿಕೊಂಡು ಯುವತಿ ಬರುತ್ತಿದ್ದಾಗ ವಿಲನ್ಸ್ ಮ್ಯಾನರ್ ಬ್ರಿಡ್ಜ್‌ನಿಂದ ಬಿದ್ದಿದ್ದಾನೆ. ಗೌರೀಶ್‌ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: Gas Explosion: ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದ ಕಾಣಿಸಿಕೊಂಡ ಬೆಂಕಿ; ಕನಿಷ್ಠ ಇಬ್ಬರ ಸಾವು

ಕೂಡಲೇ ಅಲ್ಲಿದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆತ ಆಸ್ಪತ್ರೆಗೆ ಸೇರುವ ಮೊದಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೈಗ್ರೌಂಡ್‌ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್‌ ಜಖಂ ಆಗಿದೆ. ಸದ್ಯ ಬೇರೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ರೈಲಿನಿಂದ ರಸ್ತೆಗೆ ಬಿದ್ದಿರುವುದು ಖಚಿತವಾಗಿದೆ. ಆದರೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version