Site icon Vistara News

NDA Meeting: ಯೋಗಿಯ ಬೆನ್ನು ತಟ್ಟಿದ ಮೋದಿ; ವಿರೋಧಿಗಳಿಗೆ ದೊಡ್ಡ ಸಂದೇಶ ರವಾನಿಸಿದ ನಾಯಕರು

NDA Meeting

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ (Election Results 2024) ಬಂದ ಬಳಿಕ ಎನ್‌ಡಿಎ (NDA Meeting) ಮೈತ್ರಿಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. ಈ ನಿಟ್ಟಿನಲ್ಲಿ ಇಂದು ಎನ್‌ಡಿಎ ಮೈತ್ರಿಕೂಟ ಸಭೆ ನಡೆಸಲಾಗಿದ್ದು, ಮಿತ್ರ ಪಕ್ಷ ನಾಯಕರು ಬಹಳ ಉತ್ಸಾಹದಿಂದ ಭಾಗಿಯಾದರು. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌(Yogi Adityanath) ಕೂಡ ಪ್ರಧಾನಿ ನರೇಂದ್ರ ಮೋದಿ(PM Narendra Modi) ಭೇಟಿಯಾಗಿದ್ದು, ಈ ಅಭೂತಪೂರ್ವ ದೃಶ್ಯ ಎಲ್ಲರ ಗಮನ ಸೆಳೆದಿತ್ತು.

ಸಭೆ ಬಳಿಕ ಎಲ್ಲಾ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಹೋಗಿ ಅವರನ್ನು ಅಭಿನಂದಿಸಿದರು. ಈ ವೇಳೆ ಯೋಗಿ ಆದಿತ್ಯಾನಾಥ್‌ ಕೂಡ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಯೋಗಿಯನ್ನು ಕಂಡೊಡನೆ ಮೋದಿ ಆತ್ಮೀಯವಾಗಿ ಯೋಗಿಯ ಬೆನ್ನು ತಟ್ಟಿದರು. ಇದು ಬಿಜೆಪಿ ವಿರೋಧಿಗೆ ಬಹುದೊಡ್ಡ ಸಂದೇಶವೊಂದನ್ನು ನೀಡಿದೆ. ಉತ್ತರಪ್ರದೇಶದಲ್ಲಿ ಈ ಬಾರಿ ಭಾರೀ ಹಿನ್ನಡೆ ಅನುಭವಿಸಿದ ಬಳಿಕ ಯೋಗಿ ಮತ್ತು ಮೋದಿ ನಡುವೆ ಮನಸ್ತಾಪ ಇದೆ ಎಂದು ಪ್ರತಿಪಕ್ಷಗಳು ಹೇಳಿದ್ದವು. ಆದರೆ ಇಂದಿನ ಈ ಭೇಟಿ ಎರಡು ಸ್ಟಾರ್‌ ರಾಜಕಾರಣಿಗಳ ನಡುವೆ ಎಲ್ಲವೂ ಸರಿಯಾಗಿದೆ ಎಂಬ ದೊಡ್ಡ ಸಂದೇಶವನ್ನು ರವಾನಿಸಿದೆ.

ಯಾರೆಲ್ಲ ಭಾಗಿಯಾಗಿದ್ದರು?

ಎನ್‌ಡಿಎ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಜನತಾದಳ (ಜಾತ್ಯತೀತ) ನಾಯಕ ಎಚ್.ಡಿ.ಕುಮಾರಸ್ವಾಮಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್ ಮತ್ತಿತರರು ಭಾಗವಹಿಸಿದ್ದರು.

ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶದ ಪ್ರಕಾರ ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 99 ಕಡೆ ಜಯ ಗಳಿಸಿದೆ. ಮ್ಯಾಜಿಕ್‌ ನಂಬರ್‌ 272. 2019ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಮತ್ತು 2014ರ ಚುನಾವಣೆಯಲ್ಲಿ 282 ಸ್ಥಾನಗಳನ್ನು ಗೆದ್ದಿತ್ತು.

ಜೂನ್‌ 9ರಂದು ಸಂಜೆ 6 ಗಂಟೆಗೆ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು, ತಮ್ಮ ರಾಜಕೀಯ ಗುರು, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (LK Advani) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ದೆಹಲಿಯಲ್ಲಿರುವ ಎಲ್‌.ಕೆ.ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮೋದಿ ಅವರು ಅಡ್ವಾಣಿ ಅವರ ಜತೆ ಮಾತುಕತೆ ನಡೆಸಿ, ಆಶೀರ್ವಾದ ಪಡೆದರು.

ಇದನ್ನೂ ಓದಿ:Election Results 2024: ಸಂಸದರಾಗಿ ಆಯ್ಕೆಯಾದ ಉತ್ತರ ಪ್ರದೇಶದ ಎಂಟು ಶಾಸಕರು; ಶೀಘ್ರ ಉಪಚುನಾವಣೆ

ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ರಾಜಕೀಯ ಗುರುವಿನ ಆಶೀರ್ವಾದ ಪಡೆದಿದ್ದಾರೆ. 2014, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕವೂ ಮೋದಿ ಅವರು ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಡ್ವಾಣಿ ಅವರ ಭೇಟಿ ಬಳಿಕ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ, ಸರ್ಕಾರ ರಚಿಸುವ ಕುರಿತು ಹಕ್ಕು ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version