Site icon Vistara News

Bihar Politics | 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಿತೀಶ್ ಕುಮಾರ್​

Bihar Politics

ಪಟನಾ: ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್ ಅವರು 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮತ್ತು ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗಸ್ಟ್​ 9ರಂದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವನ್ನು ಪತನವನ್ನು ಅಧಿಕೃತಗೊಳಿಸಿದ್ದರು. ಅಷ್ಟಾದ ಮೇಲೆ ಆರ್​​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಮನೆಗೆ ತೆರಳಿ, ಅವರ ಪುತ್ರರಾದ ತೇಜಸ್ವಿ ಯಾದವ್​ ಮತ್ತು ತೇಜ್​ ಪ್ರತಾಪ್ ಯಾದವ್​ ಜತೆ ಸಭೆ ನಡೆಸಿ, ನಂತರ ರಾಜ್ಯಪಾಲ ಫಗು ಚೌಹಾಣ್​​ರನ್ನು ಭೇಟಿಯಾಗಿ ಮಹಾ ಘಟ್​ ಬಂಧನ್​ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ನಿತೀಶ್​ ಕುಮಾರ್​ ಮತ್ತು ತೇಜಸ್ವಿ ಯಾದವ್ ಪರಸ್ಪರ ಕೈ ಹಿಡಿದುಕೊಂಡು ಶುಭಾಶಯ ಕೋರಿಕೊಂಡರು. ತೇಜಸ್ವಿ ಯಾದವ್​ ಅವರು ನಿತೀಶ್ ಕುಮಾರ್​ ಕಾಲಿಗೆ ಬಿದ್ದು, ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರೂ ನಗುತ್ತಾ ಅಕ್ಕಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಇನ್ನು ನಿತೀಶ್​ ಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಆರ್​ಜೆಡಿ ನಾಯಕ ಶರದ್​ ಯಾದವ್​, ‘2024ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್​ ಕುಮಾರ್​ ಅವರೇ ಮಹಾ ಘಟ್​ ಬಂಧನ್​​​ದಿಂದ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ನಿತೀಶ್​ ಕುಮಾರ್​ ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ತೊರೆದು, ಆರ್​ಜೆಡಿ-ಕಾಂಗ್ರೆಸ್​ನೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದನ್ನು ಪ್ರತಿಪಕ್ಷಗಳು ಸ್ವಾಗತಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಎನ್​ಸಿಪಿ ನಾಯಕ ಶರದ್ ಪವಾರ್​, ‘ಭಾರತದ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದರು. ನಿತೀಶ್​ ಕುಮಾರ್ ಅವರು ಈಗ ಬಿಜೆಪಿಯಿಂದ ಹೊರ ಬರುವ ಮೂಲಕ, ಬಿಜೆಪಿಯ ಆ ಮಾತನ್ನು ವಿರೋಧಿಸಿದ್ದಾರೆ. ಬಿಜೆಪಿ ಪಕ್ಷ ಪಂಜಾಬ್​​ನಲ್ಲಿ ತನ್ನ ಮೈತ್ರಿ ಪಕ್ಷವಾಗಿದ್ದ ಅಕಾಲಿ ದಳ್​ವನ್ನು ಇಬ್ಭಾಗ ಮಾಡಿತು. ಅದಾದ ಮೇಲೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆಯಿತು’ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: Bihar Politics | ನಿತೀಶ್ ಕುಮಾರ್​​ ಹೋಗೋದು ಬಿಜೆಪಿಗೆ ಗೊತ್ತಿತ್ತು, ಆದರೆ ಆ ನಿರೀಕ್ಷೆ ಇರಲಿಲ್ಲ !

Exit mobile version