ಮುಂಬೈ: ಮಹಾರಾಷ್ಟ್ರದಲ್ಲಿ ಟಿಪ್ಪು ಸುಲ್ತಾನ ಹಾಗೂ ಔರಂಗಜೇಬ್ ಪ್ರಕರಣವು (Aurangzeb Row) ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ. ಔರಂಗಜೇಬ್ನನ್ನು ವೈಭವೀಕರಿಸಿ ಪೋಸ್ಟ್ ಹಾಕಿದ ಬಳಿಕ ಹಿಂದುಗಳು ಪ್ರತಿಭಟನೆ ನಡೆಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ, “ಭಾರತದಲ್ಲಿರುವ ರಾಷ್ಟ್ರೀಯವಾದಿ ಮುಸ್ಲಿಮರು ಔರಂಗಜೇಬನ ಸಂತತಿಯವರಲ್ಲ” ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
“ಭಾರತದಲ್ಲಿರುವ ರಾಷ್ಟ್ರೀಯವಾದಿ ಮುಸ್ಲಿಮರಿಗೆ ಮೊಘಲರ ಔರಂಗಜೇಬ್ ನಾಯಕ ಅಲ್ಲ. ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರು ನಾಯಕ. ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವ ಮುಸ್ಲಿಮರು ಔರಂಗಜೇಬನ ಸಂತತಿ ಅಲ್ಲ. ಆದರೆ, ಔರಂಗಜೇಬ್ನನ್ನು ವೈಭವೀಕರಿಸಿ ರಾಷ್ಟ್ರೀಯವಾದಿ ಮುಸ್ಲಿಮರನ್ನು ಒಡೆಯಲು ಯತ್ನಿಸಲಾಗುತ್ತಿದೆ. ಅಕೋಲಾ, ಸಂಭಾಜಿನಗರ ಹಾಗೂ ಕೊಲ್ಹಾಪುರದಲ್ಲಿ ಔರಂಗಜೇಬ್ನನ್ನು ಹೊಗಳುತ್ತಿರುವುದು ಇದೇ ಕಾರಣಕ್ಕೆ” ಎಂದು ಹೇಳಿದ್ದಾರೆ.
ಔರಂಗಜೇಬ್ ಸಮಾಧಿಗೆ ಪ್ರಕಾಶ್ ಅಂಬೇಡ್ಕರ್ ಭೇಟಿ
#WATCH | Chhatrapati Sambhaji Nagar, Maharashtra: Vanchit Bahujan Aghadi chief Prakash Ambedkar visits the tomb of Aurangzeb pic.twitter.com/MFHjoK9XwI
— ANI (@ANI) June 17, 2023
ಔರಂಗಜೇಬ್ ಮಕ್ಕಳ ಜನನ ಎಂದಿದ್ದ ಡಿಸಿಎಂ
ಕೊಲ್ಹಾಪುರದಲ್ಲಿ ಪ್ರತಿಭಟನೆ ಬಳಿಕ ಅಸಾದುದ್ದೀನ್ ಓವೈಸಿಗೆ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದರು. “ಮಹಾರಾಷ್ಟ್ರದ ಒಂದಷ್ಟು ಜಿಲ್ಲೆಗಳಲ್ಲಿ ದಿಢೀರನೆ ಔರಂಗಜೇಬನ ಮಕ್ಕಳು ಜನಿಸಿದ್ದಾರೆ. ಅವರು ತಮ್ಮ ಪೋಸ್ಟರ್ಗಳಲ್ಲಿ ಔರಂಗಜೇಬನ ಫೋಟೊ ಹಾಕಿದ್ದಾರೆ. ಇದರಿಂದಾಗಿಯೇ ಗಲಾಟೆ ಆರಂಭವಾಗಿದೆ. ಅಸಾದುದ್ದೀನ್ ಓವೈಸಿ ಕೂಡ ಔರಂಗಜೇಬನ ಸಂತತಿಯವರು. ಅಷ್ಟಕ್ಕೂ ಔರಂಗಜೇಬನ ಈ ಮಕ್ಕಳು ಎಲ್ಲಿಂದ ಬಂದರು? ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರದಲ್ಲೇ ಪತ್ತೆಹಚ್ಚುತ್ತೇವೆ” ಎಂದು ಫಡ್ನವಿಸ್ ಹೇಳಿದ್ದರು.
ಇದನ್ನೂ ಓದಿ: ಔರಂಗಜೇಬ್ ದಾಳಿಕೋರ, ಗೋಡ್ಸೆ ಭಾರತ ಮಾತೆಯ ಸುಪುತ್ರ; ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟಾಂಗ್
ಟಿಪ್ಪು ಸುಲ್ತಾನ ಹಾಗೂ ಔರಂಗಜೇಬ್ ಅವರನ್ನು ವೈಭವೀಕರಿಸಿ, ಹೊಗಳಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವೆಡೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲ ದಿನಗಳ ಹಿಂದಷ್ಟೇ, ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಕಲ್ಲುತೂರಾಟ ಕೂಡ ನಡೆದಿತ್ತು.