Site icon Vistara News

Ram Mandir: ರಾಮ ಮಂದಿರಕ್ಕಾಗಿ 108 ಅಡಿ ಉದ್ದದ ಅಗರಬತ್ತಿ! ಇದರ ವೆಚ್ಚ ಎಷ್ಟು?

vadodara

vadodara

ಗಾಂಧಿನಗರ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ. ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಹಲವು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದೀಗ ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆ ದೇವಾಲಯಕ್ಕಾಗಿ ತಯಾರಿಸಲಾಗುತ್ತಿರುವ ವಿಶೇಷ ಅಗರಬತ್ತಿಯೊಂದು (Incense stick) ಗಮನ ಸೆಳೆಯುತ್ತಿದೆ. ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಬಳಸಲು ವಡೋದರಾ ನಗರದಲ್ಲಿ ಬರೋಬ್ಬರಿ 108 ಅಡಿ ಉದ್ದ ಮತ್ತು 3.5 ಅಡಿ ಅಗಲದ ಅಗರಬತ್ತಿ ತಯಾರಿಸಲಾಗುತ್ತಿದೆ. ಇದು 3,500 ಗ್ರಾಂ. ತೂಕವಿದೆ. ರಸ್ತೆಯ ಮೂಲಕ ಇದನ್ನು ಅಯೋಧ್ಯೆಗೆ ಸಾಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಡೋದರಾದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯ್ ಭರ್ವಾಡ್ (Vihabhai Bharwad) ಏಕಾಂಗಿಯಾಗಿ ಆರು ತಿಂಗಳಿನಿಂದ ತಮ್ಮ ಮನೆಯ ಹೊರಗೆ ಈ ಅಗರಬತ್ತಿಯನ್ನು ತಯಾರಿಸುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಭರ್ವಾಡ್ ಈ ಹಿಂದೆ 111 ಅಡಿ ಉದ್ದದ ಅಗರಬತ್ತಿಯನ್ನು ಯಶಸ್ವಿಯಾಗಿ ತಯಾರಿಸಿದ್ದರು.

ಇದರ ವಿಶೇಷ ಏನು?

ಸಾವಯವ ವಸ್ತುಗಳನ್ನು ಬಳಸಿ ಈ 108 ಅಡಿ ಉದ್ದದ ಅಗರಬತ್ತಿ ತಯಾರಿಸುತ್ತಿರುವುದು ವಿಶೇಷ. ಇದಕ್ಕಾಗಿ 3,000 ಕೆಜಿ ಗಿರ್ ಹಸುವಿನ ಸೆಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಭಾಗ, 370 ಕೆಜಿ ಕೊಬ್ಬರಿ ಪುಡಿ ಮತ್ತಿತರ ವಸ್ತುಗಳನ್ನು ಬಳಸಲಾಗಿದೆ. ಈ ಕಾರ್ಯಕ್ಕಾಗಿ ವಿಹಾಭಾಯ್ ಪ್ರತಿದಿನ ಎರಡರಿಂದ ಮೂರು ಗಂಟೆಗಳನ್ನು ಮೀಸಲಿಡುತ್ತಿದ್ದಾರೆ. ವಿಹಾಭಾಯ್ ಅವರಿಗೆ ಸ್ಥಳೀಯ ಸಂಸದ ರಂಜನ್‌ಬೆನ್‌ ಭಟ್ ಮತ್ತು ಅವರ ತಂಡ ಸಹಾಯ ಹಸ್ತ ಚಾಚುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ತಯಾರಿಸಲು ಒಟ್ಟು 5.30 ಲಕ್ಷ ರೂ. ಖರ್ಚಾಗಲಿದೆ.

1,800 ಕಿ.ಮೀ ದೂರ

ವಡೋದರಾ ಅಯೋಧ್ಯೆಯಿಂದ ಸುಮಾರು 1,800 ಕಿ.ಮೀ ದೂರದಲ್ಲಿದೆ. ಈ ಬೃಹತ್‌ ಅಗರಬತ್ತಿಯನ್ನು ಟ್ರಕ್‌ ಮೂಲಕ ಸಾಗಿಸಲು ವಿಹಾಭಾಯ್ ಯೋಜನೆ ರೂಪಿಸಿದ್ದಾರೆ. ಲೆಕ್ಕಾಚಾರದ ಪ್ರಕಾರ ಹಲೋಲ್, ಕಲೋಲ್, ಗೋಧ್ರಾ, ಶಹೇರಾ, ಅರ್ವಲ್ಲಿ, ಮೊದಸಾ, ಶಮ್ಲಾಜಿ, ಖೇರ್ವಾಡಾ, ಉದಯಪುರ, ಮಾಲ್ವಾಡಾ, ಸವರಿಯಾ ಶೇತ್ ಮಂದಿರ, ಚಿತ್ತೋರ್, ಭಿಲ್ವಾಡಾ, ದಾಡಿಯಾ, ಕಿಶನ್ಗಡ್, ಜೈಪುರ, ಘೋಸಾ ಮಹೆಂಡಿಪುರ, ಬಾಲಾಜಿ ಚೋರಾಯಾ, ಭರತ್ಪುರ್, ಫತೇರ್ಪುರ್ ಸಿಕ್ರಿ, ಆಗ್ರಾ, ಲಕ್ನೋ, ಇಟಾವಾ, ಕಾನ್ಪುರ, ಉನಾವೊ, ಬಾರಾಬಂಕಿ ಮೂಲಕ ಟ್ರಕ್‌ ಅಯೋಧ್ಯೆ ತಲುಪಲಿದೆ. ಒಮ್ಮೆ ಈ ಅಗರಬತ್ತಿಯನ್ನು ಬೆಳಗಿದರೆ ಅದು ನಿರಂತರ 45 ದಿನಗಳವರೆಗೆ ಉರಿಯುತ್ತಲೇ ಇರಲಿದೆ ಎಂದು ವಿಹಾಭಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅಮೆರಿಕದಲ್ಲಿ ವಾರ ಪೂರ್ತಿ ಸಂಭ್ರಮ

ಜನವರಿ 16ರಿಂದ ವೈದಿಕ ಕಾರ್ಯಕ್ರಮಗಳು

ಜನವರಿ 16ರಿಂದಲೇ ಅಯೋಧ್ಯೆ ರಾಮ ಮಂದಿರದಲ್ಲಿ ವಿವಿಧ ವೈದಿಕ ಕಾರ್ಕ್ರಮಗಳು ನಡೆಯಲಿವೆ. ವಾರಣಾಸಿಯ ಪ್ರಸಿದ್ಧ ಅರ್ಚಕ ಲಕ್ಷ್ಮಿ ಕಾಂತ್ ದೀಕ್ಷಿತ್ ಅವರನ್ನು ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು ನೆರವೇರಿಸಲು ಆಹ್ವಾನಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version