Site icon Vistara News

Bihar: ಬಿಹಾರ ಮಹಾಮೈತ್ರಿಯಲ್ಲಿ ಬಿರುಕು! ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಸಂಪುಟದ ಸಚಿವ, ಬಿಜೆಪಿ ಜತೆ ದೋಸ್ತಿ?

Jitan Ram Manjhi and Santosh kumar Manjhi

ಪಾಟ್ನಾ, ಬಿಹಾರ: ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಸಚಿವ ಸಂಪುಟದ ಮತ್ತೊಂದು ವಿಕೆಟ್ ಪತನವಾಗಿದೆ. ಜಿತನ್ ರಾಮ್ ಮಾಂಜ್ಹಿ (Jitan Ram Manjhi) ಅವರ ಪುತ್ರ ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ (Hindustani Awam Morcha) ನಾಯಕ ಸಂತೋಷ್ ಕುಮಾರ್ ಸುಮನ್ (Santosh Kumar Suman) ಅವರು ತಮ್ಮ ಮಂತ್ರಿ ಹುದ್ದೆಗೆ ರಾಜೀನಾಮೆ (resign) ನೀಡಿದ್ದಾರೆ. ನಿತೀಶ್ ಸಂಪುಟದಲ್ಲಿ ಸಂತೋಷ್ ಕುಮಾರ್ ಸುಮನ್ ಅವರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿತೀಶ್ ಕುಮಾರ್ ಅವರು ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷವನ್ನು ಜೆಡಿಯು‌ನಲ್ಲಿ ವಿಲೀನ ಮಾಡುವಂತೆ ತಮ್ಮ ತಂದೆ ಜಿತನ್ ರಾಮ್ ಮಾಂಜ್ಹಿ ಅವರಿಗೆ ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಾವು ಸಚಿವ ಸ್ಥಾನ ತೊರೆದರುವುದಾಗಿ ಹೇಳಿದ್ದಾರೆ. ಸುಮನ್ ರಾಜೀನಾಮೆಯೊಂದಿಗೆ ಬಿಹಾರ ಮಹಾಮೈತ್ರಿಯಲ್ಲಿ (Mahagathbandhan) ಇರುವುದು ಜಗಜ್ಜಾಹೀರವಾಗಿದೆ. ಕೆಲವು ಮೂಲಗಳ ಪ್ರಕಾರ, ಹಿಂದೂಸ್ತಾನಿ ಅವಾಮಿ ಮೋರ್ಚಾ ಬಿಜೆಪಿಯ ಜತೆ ಹೋಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಪಾಟ್ನಾದಲ್ಲಿ ಜೂನ್ 23ರಂದು ಪ್ರತಿಪಕ್ಷಗಳ ಸಭೆ ನಡೆಯಲಿದೆ. ತಮ್ಮ ಪಕ್ಷವು ಈ ಸಭೆಯಲ್ಲಿ ಭಾಗವಹಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಕುಮಾರ್ ಸುಮನ್ ಅವರು, ನನ್ನ ಪಕ್ಷದ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ, ನಾನು ಪಕ್ಷವನ್ನು ಉಳಿಸಿಕೊಳ್ಳಲು ರಾಜೀನಾಮೆ ನೀಡಿದ್ದೇನೆ. ಈ ಸಭೆಗೆ ನಮಗೆ ಆಮಂತ್ರಣವನ್ನೇ ನೀಡಿಲ್ಲ. ನಮಗೆ ಆಹ್ವಾನವೇ ಇಲ್ಲದಿದ್ದಾಗ, ನಮ್ಮನ್ನು ಪಕ್ಷವಾಗಿ ಗುರುತಿಸದಿದ್ದಾಗ, ನಮ್ಮನ್ನು ಹೇಗೆ ಆಹ್ವಾನಿಸಲಾಗುತ್ತಿತ್ತು? ಎಂದು ಅವರು ಪ್ರಶ್ನಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 5 ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಜ್ಹಿ ಅವರು ಆಗ್ರಹಿಸಿದ್ದರು. ಬಿಹಾರದಲ್ಲಿ ಅಸ್ತಿತ್ವದಲ್ಲಿ ಮಹಾಮೈತ್ರಿ ಸರ್ಕಾರದಲ್ಲಿ ಮಾಂಜ್ಹಿ ಅವರ ಪಕ್ಷವು ಕಿರಿಯ ಪಾಲುದಾರ ಪಕ್ಷವಾಗಿದೆ. ಈಗ ರಾಜೀನಾಮೆ ನೀಡಿರುವ ಸಂತೋಷ್ ಕುಮಾರ್ ಸುಮನ್ ಅವರು ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕಳೆದ ವಾರವಷ್ಟೇ ಅವರು ಐದಕ್ಕಿಂತ ಕಡಿಮೆ ನೀಡಿದರೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಹಿಂದೂಸ್ತಾನ್ ಅವಾಮಿ ಮೋರ್ಚಾ ಬಿಹಾರದ ಪ್ರಾದೇಶಿಕ ಪಕ್ಷವಾಗಿದೆ. ಮಾಜಿ ಸಿಎಂ ಜಿತನ್ ರಾಮ್ ಮಾಂಜ್ಹಿ ಅವರು 2015ರಲ್ಲಿ ಈ ಪಕ್ಷವನ್ನು ಆರಂಭಿಸಿದರು. ಬಿಹಾರ ವಿಧಾನಸಭೆಯಲ್ಲಿ ಜಿತನ್ ಅವರ ಪಕ್ಷವು ಒಟ್ಟು ನಾಲ್ಕು ಸ್ಥಾನಗಳನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: Opposition Unity: ಅರವಿಂದ್ ಕೇಜ್ರಿವಾಲ್- ನಿತೀಶ್ ಕುಮಾರ್ ಮತ್ತೆ ಮಾತುಕತೆ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರಯತ್ನ

2024 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ ನಿತೀಶ್ ಕುಮಾರ್ ಅವರು ಹಲವಾರು ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವ ನಡುವೆ, ಜಿತನ್ ರಾಮ್ ಮಾಂಜ್ಹಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ರಾಜಕೀಯ ವಲಯಗಳಲ್ಲಿ ಗೊಂದಲ ಮೂಡಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version