Site icon Vistara News

Salman Khan: ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ, ಗ್ಯಾಂಗ್‌ಸ್ಟರ್‌ ಬಿಷ್ಣೋಯಿ ವಿರುದ್ಧ ಎಫ್‌ಐಆರ್‌

Salman Khan receives threat on e-mail, FIR registered by Mumbai Police

ಸಲ್ಮಾನ್‌ ಖಾನ್

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರನ್ನು ಕೊಂದೇ ತೀರುತ್ತೇನೆ ಎಂದು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಎಚ್ಚರಿಸಿದ ಬೆನ್ನಲ್ಲೇ, ಸಲ್ಮಾನ್‌ ಖಾನ್‌ ಅವರಿಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ. ಪಂಜಾಬ್‌ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿ, ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ನ ಆಪ್ತ ಮೋಹಿತ್‌ ಗಾರ್ಗ್‌ನಿಂದ ನಟನಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಲಾರೆನ್ಸ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಸೇರಿ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಶನಿವಾರ (ಮಾರ್ಚ್‌ 18) ಸಲ್ಮಾನ್‌ ಖಾನ್‌ ಅವರ ಆಪ್ತರೊಬ್ಬರಿಗೆ ಜೀವ ಬೆದರಿಕೆಯ ಮೇಲ್‌ ಮಾಡಿದ್ದಾರೆ. ಶನಿವಾರ ರಾತ್ರಿಯೇ ಸಲ್ಮಾನ್‌ ಖಾನ್‌ ಮ್ಯಾನೇಜರ್‌ ಪ್ರಶಾಂತ್‌ ಗುಂಜಳ್ಕರ್‌ ಅವರು ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಬಿಷ್ಣೋಯಿ, ಬ್ರಾರ್‌ ಸೇರಿ ಒಟ್ಟು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಲ್ಮಾನ್‌ ಖಾನ್‌ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಇ-ಮೇಲ್‌ನಲ್ಲೇನಿದೆ?

“ಕೆನಡಾ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ನಿಮ್ಮ ಜತೆ ಮುಖಾಮುಖಿಯಾಗಿ ಮಾತನಾಡಬೇಕು ಎಂಬುದಾಗಿ ಬಯಸುತ್ತಿದ್ದಾರೆ. ನಾವು ಈಗ ಸುಮ್ಮನೆ ನಿಮಗೆ ಮಾಹಿತಿ (ಜೀವ ಬೆದರಿಕೆ) ನೀಡುತ್ತಿದ್ದೇವೆ. ಆದರೆ, ಮುಂಬರುವ ದಿನಗಳಲ್ಲಿ ನೀವು ಅಚ್ಚರಿಯಾದುದನ್ನು ಅನುಭವಿಸುತ್ತೀರಿ” ಎಂಬುದಾಗಿ ಇ-ಮೇಲ್‌ ಮಾಡಲಾಗಿದೆ ಎಂಬುದಾಗಿ ಸಲ್ಮಾನ್‌ ಖಾನ್‌ ಮ್ಯಾನೇಜರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಖಾನ್‌ ನಿವಾಸದ ಬಳಿ ಪೊಲೀಸ್‌ ಭದ್ರತೆ

ಜೈಲಿನಿಂದಲೇ ಬೆದರಿಕೆ ಹಾಕಿದ್ದ ಬಿಷ್ಣೋಯಿ

ಸದ್ಯ ತಿಹಾರ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ, ಇತ್ತೀಚೆಗೆ ಜೈಲಿನಿಂದಲೇ ಸಲ್ಮಾನ್‌ ಖಾನ್‌ ಅವರಿಗೆ ಬೆದರಿಕೆ ಹಾಕಿದ್ದ. “ಸಲ್ಮಾನ್‌ ಖಾನ್‌ ಅವರನ್ನು ಕೊಲೆ ಮಾಡುವುದೇ ನನ್ನ ಜೀವನದ ಗುರಿ” ಎಂದು ಹೇಳಿದ್ದ. “ಸಲ್ಮಾನ್‌ ಖಾನ್‌ ಅವರು ನಮ್ಮ ಸಮುದಾಯದ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಬೇಕು. ನಮ್ಮ ಸಮುದಾಯದವರ ಕ್ಷಮೆ ಕೇಳಬೇಕು. ಹಾಗೊಂದು ವೇಳೆ ನಮ್ಮ ಸಮುದಾಯದವರು ಕ್ಷಮಿಸಿದರೆ ಮಾತ್ರ ನಾನು ಅವರನ್ನು ಬಿಡುತ್ತೇನೆ” ಎಂದು ಸಂದರ್ಶನದಲ್ಲಿ ಮುಕ್ತವಾಗಿ ಬೆದರಿಕೆ ಹಾಕಿದ್ದ.

ಬಿಷ್ಣೋಯಿಗೇಕೆ ಸಲ್ಮಾನ್‌ ಮೇಲೆ ಸಿಟ್ಟು?

ಸಲ್ಮಾನ್‌ ಖಾನ್‌ ಅವರು 1998ರಲ್ಲಿ ಹಮ್‌ ಸಾಥ್‌ ಸಾಥ್‌ ಹೈ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಇದೇ ವೇಳೆ ಸಫಾರಿಗೆ ಹೋದ ಅವರು ಒಂದು ಕೃಷ್ಣಮೃಗವನ್ನು ಬೇಟೆಯಾಟಿದ್ದಾರೆ. ಆದರೆ, ಬಿಷ್ಣೋಯಿ ಸಮುದಾಯದವರು ಪ್ರಕೃತಿ ಆರಾಧಕರಾಗಿದ್ದು, ಕೃಷ್ಣಮೃಗವನ್ನು ಅವರು ತಮ್ಮ ಧಾರ್ಮಿಕ ಗುರು ಭಗವಾನ್‌ ಜಂಬೇಶ್ವರ ಅವರ ಪುನರ್ಜನ್ಮ ಎಂದೇ ಭಾವಿಸುತ್ತಾರೆ. ಹಾಗಾಗಿ, ಸಲ್ಮಾನ್‌ ಖಾನ್‌ ವಿರುದ್ಧ ಗ್ಯಾಂಗ್‌ಸ್ಟರ್‌ ಹಲ್ಲು ಮಸಿಯುತ್ತಿದ್ದಾನೆ. ರವಿ ಬಿಷ್ಣೋಯಿ, ಗೋಲ್ಡಿ ಬ್ರಾರ್‌, ಮೋಹಿತ್‌ ಗಾರ್ಗ್‌ ಒಂದೇ ಗುಂಪಿನ ಗ್ಯಾಂಗ್‌ಸ್ಟರ್‌ಗಳು ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Salman Khan : ಜೂಹಿ ಚಾವ್ಲಾರನ್ನು ಮದುವೆಯಾಗಲು ಮುಂದಾಗಿದ್ದ ಸಲ್ಮಾನ್‌ ಖಾನ್; ಹೆಣ್ಣು ಕೇಳುವುದಕ್ಕೂ ಹೋಗಿದ್ದರು!

Exit mobile version