Site icon Vistara News

Supreme Court: ಆಪ್‌ ಸಂಸದ ರಾಘವ್ ಚಡ್ಡಾಗೆ ಸುಪ್ರೀಂ ಕೋರ್ಟ್‌ ತಪರಾಕಿ, ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಯಾಚಿಸಲು ಸೂಚನೆ

Raghav-chadha

ಹೊಸದಿಲ್ಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನಕರ್‌ (Rajya Sabha chairman Jagdeep Dhankhar) ಅವರನ್ನು ಭೇಟಿಯಾಗಿ ಬೇಷರತ್ತಾಗಿ ಅವರ ಕ್ಷಮೆ ಯಾಚಿಸುವಂತೆ ಆಮ್‌ ಆದ್ಮಿ ಪಾರ್ಟಿ (Aam Admi Party) ಸಂಸದ ರಾಘವ್‌ ಚಡ್ಡಾ (Rajya Sabha MP Raghav Chadha) ಅವರಿಗೆ ಸುಪ್ರೀಂ ಕೋರ್ಟ್‌ (Supreme court) ನಿರ್ದೇಶನ ನೀಡಿದೆ. ಸದನದಲ್ಲಿ ರಾಘವ್‌ ಚಡ್ಡಾ ಅವರು ತೋರಿದ ಆಕ್ಷೇಪಾರ್ಹ ವರ್ತನೆಗಾಗಿ ಈ ನಿರ್ದೇಶವನ್ನು ಕೋರ್ಟ್‌ ನೀಡಿದೆ.

ಆಯ್ಕೆ ಸಮಿತಿಯೊಂದರಲ್ಲಿ ಸೇರಿಸಿಕೊಳ್ಳಲು ನಿರ್ಧರಿಸುವ ಮೊದಲು ಕೆಲವು ಸಂಸದರಿಂದ ಅನುಮತಿ ಪಡೆಯದ ಆರೋಪದ ಮೇಲೆ ಎಎಪಿ ನಾಯಕ ರಾಘವ ಚಡ್ಡಾ ಅವರನ್ನು ಆಗಸ್ಟ್ 11ರಂದು ಸಂಸತ್ತಿನಿಂದ ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿತ್ತು.

ಎಎಪಿ ಶಾಸಕರ ಕ್ಷಮೆಯಾಚನೆಯನ್ನು ರಾಜ್ಯಸಭಾ ಅಧ್ಯಕ್ಷರು ಸಹಾನುಭೂತಿಯಿಂದ ಪರಿಗಣಿಸಬೇಕು ಮತ್ತು ಮುಂದಿನ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಚಡ್ಡಾ ಸದಸ್ಯರಾಗಿರುವ ಸದನದ ಘನತೆಗೆ ಧಕ್ಕೆ ತರುವ ಉದ್ದೇಶವನ್ನು ಸಂಸದರು ಹೊಂದಿಲ್ಲ ಮತ್ತು ಅವರು ಬೇಷರತ್ ಕ್ಷಮೆ ಯಾಚಿಸಲು ರಾಜ್ಯಸಭಾ ಅಧ್ಯಕ್ಷರ ಅಪಾಯಿಂಟ್‌ಮೆಂಟ್ ಕೇಳುತ್ತಾರೆ ಎಂದು ಚಡ್ಡಾ ಅವರನ್ನು ಪ್ರತಿನಿಧಿಸುವ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ದೀಪಾವಳಿ ರಜೆಯ ನಂತರ ನ್ಯಾಯಾಲಯವು ಅರ್ಜಿಯನ್ನು ಮತ್ತೆ ವಿಚಾರಿಸಲಿದೆ.

ಆಗಸ್ಟ್ 11ರಂದು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿತ್ತು. 34 ವರ್ಷದ ಎಎಪಿ ಸಂಸದ ಚಡ್ಡಾ, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ- 2023 ಅನ್ನು ಪರಿಗಣಿಸುವ ಆಯ್ಕೆ ಸಮಿತಿಯಲ್ಲಿ ತಮ್ಮ ಹೆಸರನ್ನು ಸೇರಿಸುವ ಮೊದಲು ಐದು ರಾಜ್ಯಸಭಾ ಸಂಸದರ ಒಪ್ಪಿಗೆಯನ್ನು ಪಡೆದಿಲ್ಲ ಎಂದು ಸಂಸದರು ಆರೋಪಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ರಾಜ್ಯಸಭಾ ಅಧ್ಯಕ್ಷರು ಚಡ್ಡಾ ಅವರ ಕ್ಷಮೆಯಾಚನೆಯನ್ನು ಸಹಾನುಭೂತಿಯಿಂದ ಪರಿಗಣಿಸುತ್ತಾರೆ ಮತ್ತು ಮುಂದಿನ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಆಪ್‌ ಸಂಸದ ಚಡ್ಡಾ ಮೊದಲ ಬಾರಿ ಸಂಸದರಾಗಿದ್ದಾರೆ ಮತ್ತು ಅತ್ಯಂತ ಕಿರಿಯ ಸದಸ್ಯ ಎಂದು ಸಿಜೆಐ ಗಮನಿಸಿದರು. ಸದನದ ನೈತಿಕ ಸಮಿತಿಯು ಇಂದು ಸಭೆ ನಡೆಸುತ್ತಿದ್ದು, ಪ್ರಕರಣದಲ್ಲಿ ಕೆಲವು ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Parineeti Chopra : ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ ನಿಶ್ಚಿತಾರ್ಥಕ್ಕೆ ದೆಹಲಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ?

Exit mobile version