Site icon Vistara News

ಶೋಪಿಯಾನ್​ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಉಗ್ರರಲ್ಲಿ ಇಬ್ಬರು ಅರೆಸ್ಟ್​, ಓರ್ವ ಹತ್ಯೆ

Terrorist Killed who involved in attack on Uttar Pradesh workers

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್​​ನಲ್ಲಿ ಮಂಗಳವಾರ ಇಬ್ಬರು ಕಾರ್ಮಿಕರನ್ನು ಭಯೋತ್ಪಾದಕರು ಗ್ರೆನೇಡ್​ ದಾಳಿ ಮಾಡಿ ಹತ್ಯೆಗೈದಿದ್ದರು. ಇವರಿಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದರು. ಆ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರರಲ್ಲಿ ಓರ್ವನನ್ನು ಜಮ್ಮು-ಕಾಶ್ಮಿರ ಪೊಲೀಸರು ಹೊಡೆದುರುಳಿಸಿದ್ದಾರೆ.

ಉತ್ತರ ಪ್ರದೇಶದ ಕನೌಜ್​ ಮೂಲದ ಕಾರ್ಮಿಕರಾದ ಮೋನಿಶ್​ ಕುಮಾರ್​ ಮತ್ತು ರಾಮ್​ ಸಾಗರ್​ ಎಂಬುವರನ್ನು ಶೋಪಿಯಾನ್​ ಜಿಲ್ಲೆಯ ಹರ್ಮೇನ್​ ಹಳ್ಳಿಯಲ್ಲಿ ಉಗ್ರರು ಕೊಂದು ಹಾಕಿದ್ದರು. ಹರ್ಮೇನ್​ ಹಳ್ಳಿಯಲ್ಲಿ ಇವರ ಶೆಡ್​ ಇರುವ ಸ್ಥಳದಲ್ಲೇ ಗ್ರೆನೇಡ್​ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಮೋನಿಶ್​ ಕುಮಾರ್​ ಮತ್ತು ರಾಮ್​ ಸಾಗರ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇವರಿಬ್ಬರ ಹತ್ಯೆಯಾದ ಕೆಲವೇ ಹೊತ್ತಲ್ಲಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಿದ್ದಾಗಿ ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದರು. ಹಾಗೇ, ಇನ್ನೂ ಕೆಲವರು ಇದ್ದು, ಅವರಿಗಾಗಿ ಹುಡುಕುತ್ತಿದ್ದೇವೆ ಎಂದೂ ತಿಳಿಸಿದ್ದರು.

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ ಹೆಚ್ಚುತ್ತಲೇ ಇದೆ. ಈ ಇಬ್ಬರು ವಲಸೆ ಕಾರ್ಮಿಕರ ಹತ್ಯೆಗೂ ಒಂದು ದಿನ ಮುಂಚೆ ಶೋಪಿಯಾನ್​​ನಲ್ಲಿ ಕಾಶ್ಮೀರಿ ಪಂಡಿತ ಪೋರಣ್​ ಕ್ರಿಶನ್​ ಭಟ್​ ಎಂಬಾತನನ್ನು ಉಗ್ರರು ಕೊಂದಿದ್ದಾರೆ. ಹಾಗೇ, ಸೆ.2ರಂದು ಪುಲ್ವಾಮಾದಲ್ಲಿ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕ ಮುನೀರ್​ ಉಲ್​​ ಇಸ್ಲಾಮ್​ ಎಂಬಾತನನ್ನು ಕೊಂದಿದ್ದರು.

ಇದನ್ನೂ ಓದಿ: Terror Attack | ಶೋಪಿಯಾನ್​​ನಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ

Exit mobile version