Site icon Vistara News

Traffic Jam: ಟ್ರಾಫಿಕ್‌ ಜಾಮ್‌ಗೆ ಹೆದರಿ ನದಿಯಲ್ಲೇ ಮಹೀಂದ್ರಾ ಥಾರ್‌ ಓಡಿಸಿದ ಭೂಪ; ವಿಡಿಯೊ ನೋಡಿ

Mahindra Thar

Tourist Drives Thar SUV Through River To Beat Himachal Traffic Jam

ಶಿಮ್ಲಾ: ದೇಶಾದ್ಯಂತ ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಸಂಭ್ರಮ (Christmas) ಮನೆಮಾಡಿದೆ. ಹಾಗಾಗಿ, ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲು, ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಲು ಜನ ಪ್ರವಾಸಕ್ಕೆ ಹೋಗಿದ್ದಾರೆ. ದೇಶದ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಹಿಮಾಚಲ ಪ್ರದೇಶಕ್ಕಂತೂ (Himachal Pradesh) ಲಕ್ಷಾಂತರ ಜನ ತೆರಳಿದ್ದು, ಭಾರಿ ಪ್ರಮಾಣದಲ್ಲಿ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಹೀಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿ, ಸಂಚಾರ ದಟ್ಟಣೆ ನೋಡಿದ ವ್ಯಕ್ತಿಯೊಬ್ಬ ನದಿಯಲ್ಲೇ ಮಹೀಂದ್ರಾ ಥಾರ್‌ ಎಸ್‌ಯುವಿಯನ್ನು ಓಡಿಸಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಹಿಮಾಚಲ ಪ್ರದೇಶದ ಪ್ರಮುಖ ರಸ್ತೆಗಳ ಮೇಲೆಯೇ ಸಾವಿರಾರು ವಾಹನಗಳು ನಿಂತಿವೆ. ಟ್ರಾಫಿಕ್‌ ಜಾಮ್‌ನಿಂದಾಗಿ ವಾಹನವನ್ನು ಹಿಂದಕ್ಕೂ ಚಲಿಸಲು ಆಗದೆ, ಮುಂದಕ್ಕೂ ಹೋಗಲು ಆಗದೆ ರಸ್ತೆ ಮಧ್ಯೆಯೇ ಕಾಲ ಕಳೆಯುವಂತಾಗಿದೆ. ಹೀಗೆ ಸಂಚಾರ ದಟ್ಟಣೆಯನ್ನು ನೋಡಿದ ಪ್ರವಾಸಿಗನೊಬ್ಬ ಮಹೀಂದ್ರಾ ಥಾರ್‌ ಎಸ್‌ಯುವಿಯನ್ನು ನದಿ ನೀರಿನಲ್ಲೇ ಚಲಾಯಿಸಿಕೊಂಡು ಹೋಗಿದ್ದಾನೆ. ಕಡಿಮೆ ನೀರಿರುವ ಕಾರಣ ಹಾಗೂ ಆಫ್‌ ರೋಡ್‌ ಟ್ರಾವೆಲ್‌ಗೆ ಹೆಸರುವಾಸಿಯಾಗಿರುವ ಕಾರಣ ಮಹೀಂದ್ರಾ ಥಾರ್‌ ಎಸ್‌ಯುವಿ ಯಾವುದೇ ಅಡಚಣೆ ಇಲ್ಲದೆ ನೀರಿನಲ್ಲಿ ಚಲಿಸಿದೆ.

ದಂಡ ವಿಧಿಸಿದ ಪೊಲೀಸರು

ಲಾಹೌಲ್‌ ಜಿಲ್ಲೆಯ ಚಂದ್ರ ನದಿಯಲ್ಲಿ ಮಹೀಂದ್ರಾ ಥಾರ್‌ ಓಡಿಸಿದ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ದಂಡ ವಿಧಿಸಿದ್ದಾರೆ. “ಚಂದ್ರ ನದಿಯನ್ನು ಮಹೀಂದ್ರಾ ಥಾರ್‌ ಎಸ್‌ಯುವಿ ವಾಹನ ದಾಟಿದ ವಿಡಿಯೊ ವೈರಲ್‌ ಆಗಿದೆ. ಹಾಗಾಗಿ, ವಾಹನದ ಮಾಲೀಕರಿಗೆ ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಇಂತಹ ಅಪಾಯಕಾರಿ ಚಾಲನೆ ಮಾಡಬಾರದು ಎಂಬ ಸಂದೇಶ ರವಾನಿಸಲು ದಂಡ ವಿಧಿಸಲಾಗಿದೆ” ಎಂದು ಎಸ್‌ಪಿ ಮಯಾಂಕ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru Traffic : ಆಂಬ್ಯುಲೆನ್ಸ್‌ಗೆ NO ಟ್ರಾಫಿಕ್‌ ಕಿರಿಕ್‌; ಬರಲಿದೆ ದಾರಿ ತೋರುವ ಆ್ಯಪ್‌!

ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ಹೋದವರಿಗೆ ಭಾರಿ ತೊಂದರೆಯಾಗಿದೆ. ಲಾಹೌಲ್‌ ಹಾಗೂ ಸ್ಪಿತಿ ಜಿಲ್ಲೆಗಳ ಪ್ರಮುಖ ರಸ್ತೆಗಳ ತುಂಬ ವಾಹನಗಳೇ ನಿಂತಿವೆ. ಏಕಾಏಕಿ ಲಕ್ಷಾಂತರ ಖಾಸಗಿ ವಾಹನಗಳು ಹಿಮಾಚಲ ಪ್ರದೇಶವನ್ನು ಪ್ರವೇಶಿಸಿದ ಕಾರಣ ಸಂಚಾರ ದಟ್ಟಣೆ ಉಂಟಾಗಿದೆ. ಸುಮಾರು 40 ಸಾವಿರ ವಾಹನಗಳು ರಸ್ತೆ ಮಧ್ಯೆಯೇ ನಿಂತಿವೆ. ಟ್ರಾಫಿಕ್‌ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ವಾಹನಗಳಲ್ಲೇ ಕುಳಿತವರಿಗೆ ಅನ್ನ-ನೀರಿನ ಸಮಸ್ಯೆಯೂ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version