Site icon Vistara News

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarakhand Tunnel Collapse

Uttarkashi Tunnel Collapse: Will Take 12-14 Hrs More To Reach Trapped Workers

ಡೆಹ್ರಾಡೂನ್:‌ ‌ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse)ಜಿಲ್ಲೆಯಲ್ಲಿ ಸುರಂಗ ಕುಸಿದು ಅಪಾಯಕ್ಕೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ(Uttarkashi Tunnel Rescue). ನವೆಂಬರ್‌ 12ರಂದೇ ಸುರಂಗ ಕುಸಿದಿದ್ದು, ಸತತವಾಗಿ 17 ದಿನ ಕಾರ್ಯಾಚರಣೆ (Rescue Operation) ಕೈಗೊಂಡು ಜನರನ್ನು ರಕ್ಷಣೆ ಮಾಡಲಾಗಿದೆ. ಹಾಗಂತ ಈ 17 ದಿನಗಳ ರಕ್ಷಣಾ ಕಾರ್ಯಾಚರಣೆಯು ಸುಲಭವಾಗಿರಲಿಲ್ಲ. ಭೂಕುಸಿತ, ರಕ್ಷಣೆಗೆ ಬಳಸಿದ ಪೈಪ್‌ಗಳು ಕತ್ತರಿಸುವುದು ಸೇರಿ ಹಲವು ಸವಾಲುಗಳು ಎದುರಾದವು. ಹಾಗಾದರೆ, 17 ದಿನಗಳ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ಮಾಹಿತಿ.

ಇಲಿ ಬಿಲ ಗಣಿಗಾರಿಕೆ ತಂತ್ರದಿಂದಲೇ ಸಕ್ಸೆಸ್

56 ಮೀಟರ್ ಉದ್ದ ಅವಶೇಷಗಳ ನಡುವೆ ಡ್ರಿಲಿಂಗ್ ಮಾಡಲು ಆಗರ್ ಯಂತ್ರ ಪ್ರಯತ್ನಿಸಿದು. ಆದರೆ, ಇನ್ನು 20 ಮೀಟರ್ ಬಾಕಿ ಇದೆ ಎನ್ನುವಾಗಲೇ ಆ ಡ್ರಿಲಿಂಗ್ ಯಂತ್ರ ಕೈಕೊಟ್ಟಿತು. ಆಗ ರಕ್ಷಣಾ ಸಂಸ್ಥೆಗಳು ರೂಪಿಸಿದ್ದೇ ‘ರ‍್ಯಾಟ್‌ ಹೋಲ್’‌ ಮೈನಿಂಗ್‌. ಅಂತಿಮವಾಗಿ ಇಲಿ ಬಿಲ ಮೈನಿಂಗ್ ತಂತ್ರದ ಮೂಲಕವೇ ಸಿಲುಕಿದ್ದ ಕಾರ್ಮಿಕರನ್ನು ತಲುಪಲು ಸಾಧ್ಯವಾಯಿತು ಮತ್ತು ಮಂಗಳವಾರ 8 ಗಂಟೆ ಹೊತ್ತಿಗೆ ಎಲ್ಲ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು.

ರ‍್ಯಾಟ್‌ ಹೋಲ್‌ ಮೈನಿಂಗ್‌ ಎಂದರೆ, ಇಲಿಯಂತೆಯೇ ಚಿಕ್ಕದಾದ ರಂಧ್ರಗಳನ್ನು ಕೊರೆಯುವುದು. ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಹೊರಬರಲು ಈ ರೀತಿಯ ರಂಧ್ರಗಳನ್ನು ಕೊರೆಯುತ್ತಾರೆ. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲಾನ್‌ ರೂಪಿಸಿ ಯಶಸ್ಸು ಕಾಣಲಾಗಿದೆ. ಇದಕ್ಕೂ ಮೊದಲು ಲಂಬವಾಗಿ 86 ಮೀಟರ್‌ ಕೊರೆಯುವ ಪ್ಲ್ಯಾನ್ ಕೂಡ ಜಾರಿ ಮಾಡಲಾಗಿತ್ತು. ಅಲ್ಲದೇ ಲಂಬವಾಗಿ 36 ಮೀಟರ್‌ ಕೂಡ ಕೊರೆಯಲಾಗಿತ್ತು. ಬಳಿಕ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಯಿತು. ಅಂತಿಮವಾಗಿ ಮಂಗಳವಾರ ಸಕ್ಸೆಸ್ ದೊರೆಯಿತು.

57 ಮೀಟರ್‌ ಸುರಂಗ ಕೊರೆತ

41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲು 17 ದಿನಗಳಲ್ಲಿ 57 ಮೀಟರ್‌ ಸುರಂಗವನ್ನು ಕೊರೆಯಲಾಗಿದೆ. ಜೆಸಿಬಿ, ಅತ್ಯಾಧುನಿಕ ಡ್ರಿಲ್ಲಿಂಗ್‌ ಯಂತ್ರಗಳು, ನುರಿತ ಸಿಬ್ಬಂದಿಯು ಇಷ್ಟು ಮೀಟರ್‌ ಸುರಂಗ ಕೊರೆದು, ಅದರ ಅವಶೇಷಗಳನ್ನು ಹೊರಗೆ ಹಾಕಿ, ಕೊನೆಗೂ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 150 ಮೀಟರ್‌ ಸುರಂಗ ಕುಸಿದಿತ್ತು. ಇಷ್ಟೂ ಮೀಟರ್‌ ಸುರಂಗ ಕೊರೆಯಲು ಸಾಧ್ಯವಾಗದ ಕಾರಣ ಉಪಾಯ ಮಾಡಿ, ಕೇವಲ 57 ಮೀಟರ್‌ ಸುರಂಗವನ್ನಷ್ಟೇ ಕೊರೆದು ಜನರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು

ಸುರಂಗದಲ್ಲಿ ಡ್ರಿಲ್ಲಿಂಗ್‌, ವರ್ಟಿಕಲ್‌ ಡ್ರಿಲ್ಲಿಂಗ್‌ ಸೇರಿ ಹಲವು ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ದೇಶದ ಐದು ಏಜೆನ್ಸಿಗಳು ಭಾಗಿಯಾದವು. ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ONGC), ಸತ್ಲುಜ್‌ ಜಲ ವಿದ್ಯುತ್‌ ನಿಗಮ (SJVNL), ರೈಲ್‌ ವಿಕಾಸ ನಿಗಮ ಲಿಮಿಟೆಡ್‌ (RVNL), ನ್ಯಾಷನಲ್‌ ಹೈವೇಸ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (NHIDCL) ಹಾಗೂ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (THDCL) ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವು.

ವಿದೇಶಿ ತಜ್ಞರ ಎಂಟ್ರಿ

ಭೂಕುಸಿತ, ಅವಶೇಷಗಳ ಪ್ರಮಾಣ ಜಾಸ್ತಿ ಇರುವುದು ಸೇರಿ ಹಲವು ಸವಾಲುಗಳು ಎದುರಾದ ಕಾರಣ ವಿದೇಶಿ ತಜ್ಞರನ್ನು ಕರೆಸಲಾಯಿತು. ಇಂಟರ್‌ನ್ಯಾಷನಲ್‌ ಟನೆಲಿಂಗ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಸಂಸ್ಥೆಯ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರ ತಂಡವು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಇನ್ನು ಅಮೆರಿಕದಲ್ಲಿ ತಯಾರಾದ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳು, ಪುಶ್‌ ಇನ್‌ ಪೈಪ್‌ಗಳು ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಯಿತು.

ಕಾರ್ಯಾಚರಣೆಗೆ ಮುನ್ನಡೆ ಸಿಕ್ಕಿದ್ದು ಎಲ್ಲಿ?

ಸುರಂಗ ಕುಸಿಯುತ್ತಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಕಾರ್ಮಿಕರು ಯಾವ ಜಾಗದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಪೈಪ್‌ ಮೂಲಕ ಅವರನ್ನು ಸಂಪರ್ಕಿಸಿದ್ದೇ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎಂದು ತಿಳಿದುಬಂದಿದೆ. ಕ್ಷಿಪ್ರವಾಗಿ ಕಾರ್ಮಿಕರಿದ್ದ ಸ್ಥಳವನ್ನು ಗುರುತಿಸಿದ್ದು, ಅವರ ಜತೆ ಸಂಪರ್ಕ ಸಾಧಿಸಿದ ಕಾರಣ ಅವರಿಗೆ ಆಹಾರ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಯಿತು. ಅವರಿಗೆ ಧೈರ್ಯ ತುಂಬಿ, ಯೋಗ ಮಾಡಲು ಸಲಹೆ ಕೊಟ್ಟು, ಒತ್ತಡ ನಿರೋಧಕ ಮಾತ್ರೆಗಳನ್ನು ಪೂರೈಸಿ 12 ದಿನವೂ ಅವರು ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳಲಾಯಿತು. ಇದು ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎನ್ನಲಾಗಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version