Site icon Vistara News

Western Ghats: ಪಶ್ಚಿಮ ಘಟ್ಟದ 57 ಸಾವಿರಕ್ಕೂ ಹೆಚ್ಚು ಚ.ಕಿಮೀ. ಪರಿಸರ ಸೂಕ್ಷ್ಮ ಪ್ರದೇಶ; ಕೇಂದ್ರದಿಂದ ಕರಡು ಅಧಿಸೂಚನೆ

Western Ghats

ನವದೆಹಲಿ:ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಎಂಬ ಮಾತಿದೆ. ಅದರಂತೆಯೇ ಕೇರಳ ವಯನಾಡಿನಲ್ಲಿ ಈ ಬಾರಿ ಮಳೆಗೆ ಸಂಭವಿಸಿದ ಭೀಕರ ಭೂಕುಸಿತ(Wayanad Landslide)ದ ನಂತರ ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ(Central Government) ಪಶ್ಚಿಮ ಘಟ್ಟ(Western Ghats)ದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಐದನೇ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೇಂದ್ರ ಸರ್ಕಾರ ಜುಲೈ 31 ರಂದು ಪ್ರಕಟಿಸಿದ 6ನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕ, ಕೇರಳ ಸೇರಿ 6 ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟದ 56,800ಕ್ಕೂ ಹೆಚ್ಚು ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣತರಿಂದ ಸಲಹೆ ಮತ್ತು ವಿರೋಧಗಳಿದ್ದರೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 60 ದಿನಗಳ ಕಾಲಾವಕಾಶವನ್ನೂ ಸರ್ಕಾರ ನೀಡಿದೆ.

ಪಶ್ಚಿಮಘಟ್ಟದ ಶೇ. 36ರಷ್ಟು ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದೆ. ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಚದರ ಕಿಮೀ ಪ್ರದೇಶವೂ ಸೇರಿ ಪಶ್ಚಿಮ ಘಟ್ಟದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಭೂ ಕುಸಿತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯ 13 ಹಳ್ಳಿಗಳನ್ನು ಒಳಗೊಂಡಂತೆ ರಾಜ್ಯ ವ್ಯಾಪ್ತಿಯ 10 ಸಾವಿರ ಚದರ ಕಿಮೀ ಪಶ್ಚಿಮಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಭೂಕುಸಿತ ಸಂಭವಿಸಿರುವ ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ 13 ಗ್ರಾಮಗಳು ಸೇರಿ ಕೇರಳದ 9,993.7 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸುವ ವಿಚಾರವನ್ನು ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನು ಗುಜರಾತ್‌ನಲ್ಲಿ 449 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 17,340 ಚ.ಕಿ.ಮೀ, ಗೋವಾದಲ್ಲಿ 1,461 ಚ.ಕಿ.ಮೀ, ಕರ್ನಾಟಕದಲ್ಲಿ 20,668 ಚ.ಕಿ.ಮೀ, ತಮಿಳುನಾಡಿನಲ್ಲಿ 6,914 ಚ.ಕಿ.ಮೀ ಮತ್ತು ಕೇರಳದಲ್ಲಿ 9,993.7 ಚ.ಕಿ.ಮೀ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋ‍ಷಿಸಲು ಸರ್ಕಾರ ಮುಂದಾಗಿದೆ.

ಇನ್ನು ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರಡು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಐದು ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಗಣಿಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಅಧಿಸೂಚನೆಯು ಪ್ರಸ್ತಾಪಿಸಿದೆ.

ಇದನ್ನೂ ಓದಿ: Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Exit mobile version