Site icon Vistara News

ಭಾರತದ ಮೇಲೂ ಹಮಾಸ್ ರೀತಿ ದಾಳಿ ನಡೆಯುತ್ತಾ? ಖಲಿಸ್ತಾನಿ ಉಗ್ರ ಹೇಳಿದ್ದೇನು?

Gurpatwant Singh Pannun

Gurpatwant Singh Pannun

ನವದೆಹಲಿ: ಹಮಾಸ್ ರೀತಿಯ ದಾಳಿಗೆ (Hamas Like Attack) ಸಿದ್ಧರಾಗಿ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ (Khalistani Terrorist Gurupatwant Pannu) ಭಾರತಕ್ಕೆ ನೇರವಾಗಿ ಧಮ್ಕಿ ಹಾಕಿದ್ದಾನೆ. ಭಾರತಕ್ಕೆ ಬೆದರಿಕೆ ಹಾಕಿರುವ ವಿಡಿಯೋವೊಂದು (video) ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಯುದ್ಧದಿಂದ ಪಾಠ ಕಲಿಯಬೇಕು ಎಂದು ಹೇಳಿದ್ದಾನೆ(Israel Palestine War).

ಅಮೆರಿಕ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆಯ ಮುಖ್ಯಸ್ಥರಾಗಿರುವ ಪನ್ನುನ್, “ಪಂಜಾಬ್‌ನಿಂದ ಪ್ಯಾಲೆಸ್ತೀನ್‌ವರೆಗೂ ಅಕ್ರಮವಾಗಿ ವಾಸವಾಗಿರುವ ಜನರು ಪ್ರತಿಕ್ರಿಯೆ ಪಡೆದುಕೊಳ್ಳಲೇಬೇಕಾಗುತ್ತದೆ. ಹಿಂಸಾಚಾರವು ಹಿಂಸಾಚಾರವನ್ನೇ ಹುಟ್ಟು ಹಾಕುತ್ತದೆ ಎಂದು ಹೇಳಿದ್ದಾನೆ. ಭಾರತವು ಪಂಜಾಬ್‌ವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಿದರೆ ಅದಕ್ಕೆ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಇದರಿಂದಾಗುವ ಹಾನಿಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯೇ ಜವಾಬ್ದಾರರು ಆಗಿರುತ್ತಾರೆ ಎಂದು ಪನ್ನುನ್ ಹೇಳಿದ್ದಾನೆ.

ಎಸ್‌ಎಫ್‌ಜೆ ಬ್ಯಾಲೆಟ್‌ ಮತ್ತು ವೋಟ್ ಮೇಲೆ ನಂಬಿಕೆ ಇಟ್ಟಿದೆ. ಪಂಜಾಬ್ ಸ್ವತಂತ್ರವಾಗುವ ದಿನಗಳು ದೂರವಿಲ್ಲ. ಬ್ಯಾಲೆಟ್ ಬೇಕೋ ಬುಲೆಟ್ ಬೇಕೋ ಎಂಬುದನ್ನು ಭಾರತ ಆಯ್ಕೆ ಮಾಡಿಕೊಳ್ಳಬೇಕು ಪನ್ನುನ್ ಹೇಳಿದ್ದೇನೆ. ವಿಡಿಯೋದಲ್ಲಿ ಆತ ಶೂಟ್ ಮಾಡುತ್ತಿರುವ ಭಂಗಿಯಲ್ಲಿ ಈ ಮಾತುಗಳನ್ನು ಹೇಳಿದ್ದಾನೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಐಸಿಸಿ ವಿಶ್ವಕಪ್ ಪಂದ್ಯಕ್ಕೂ ಮುನ್ನ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಪನ್ನುನ್ ಈ ವಿಡಿಯೋ ಹರಿ ಬಿಟ್ಟಿದ್ದಾನೆ. ಪೂರ್ವ ರೆಕಾರ್ಡ್ ಮಾಡಿದ ಬೆದರಿಕೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ವಿವಿಧ ಖಾತೆಗಳ ಮೂಲಕ ಹಂಚಿಕೆ ಮಾಡಿಕೊಳ್ಳಲಾಗಿದೆ ಎಂದು ಅಹಮದಾಬಾದ್‌ನ ಸೈಬರ್ ಕ್ರೈಮ್ ಡಿಸಿಪಿ ಅಜಿತ್ ರಾಜಿಯನ್ ಹೇಳಿಕೆಯನ್ನು ಉಲ್ಲೇಖಿಸಿ ಎಎಎನ್ಐ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Khalistan Row: ಕೆನಡಾದಲ್ಲಿ ಭಾರತೀಯ ರಾಯಭಾರಿಗಳ ಕೊಲೆ ಬೆದರಿಕೆ ಪೋಸ್ಟರ್‌ಗಳು ಮತ್ತೆ ಪ್ರತ್ಯಕ್ಷ, ಟ್ರುಡೊ ಮೌನ

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಎಸ್‌ಎಫ್‌ಜೆ ಪ್ರತೀಕಾರವನ್ನು ತೆಗೆದುಕೊಳ್ಳಲಿದೆ ಎಂದೂ ವಿಡಿಯೋದಲ್ಲಿ ತಿಳಿಸಲಾಗಿದೆ. ಅಮೃತಸರ ಮೂಲದ ಪನ್ನುನ್ 2019 ರಿಂದ ಖಲಿಸ್ತಾನಿ ಭಯೋತ್ಪಾದಕನ ವಿರುದ್ಧ ತನಿಖಾ ಸಂಸ್ಥೆ ತನ್ನ ಮೊದಲ ಪ್ರಕರಣವನ್ನು ದಾಖಲಿಸಿದಾಗಿನಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತನಿಖೆಯ ಸರಹದ್ದಿನಲ್ಲಿದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳ ಸಮರ್ಥನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ಹಾಕುವುದು, ಈ ಮೂಲಕ ಭಯ ಮತ್ತು ಭಯೋತ್ಪಾದನೆಗೆ ಕಾರಣನಾಗಿದ್ದಾನೆ ಎಂದು ಆರೋಪಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version